ವೈಎಸ್ ರಾಜಶೇಖರ್ ರೆಡ್ಡಿ ಜನ್ಮದಿನದಂದು ಶರ್ಮಿಳಾ ಪಕ್ಷ ಉದಯ
ಹೈದರಾಬಾದ್, ಜುಲೈ 4: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸೋದರಿ ವೈಎಸ್ ಶರ್ಮಿಳಾ ಅವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ತಮ್ಮ ಹೊಸ ಪಕ್ಷದ ಉದ್ಘಾಟನಾ ಸಮಾರಂಭದ ಸಿದ್ಧತೆಯ ಅಪ್ಡೇಟ್ಸ್ ಪಡೆದುಕೊಳ್ಳುತ್ತಿದ್ದಾರೆ.
ಜುಲೈ 8ರಂದು ಬೆಂಗಳೂರಿನಿಂದ ನೇರವಾಗಿ ಇದುಪಲಪಾಯಕ್ಕೆ ತೆರಳಲಿದ್ದು, ತಮ್ಮ ತಂದೆ ವೈಎಸ್ ರಾಜಶೇಖರ್ ರೆಡ್ಡಿ ಸ್ಮಾರಕಕ್ಕೆ ನಮನ ಸಲ್ಲಿಸಿ ನಂತರ ಕಡಪದಿಂದ ಖಾಸಗಿ ವಿಮಾನದಲ್ಲಿ ಹೈದರಾಬಾದ್ ನಗರಕ್ಕೆ 2 ಗಂಟೆ ವೇಳೆಗೆ ತಲುಪಲಿದ್ದಾರೆ. ಬೇಗಂಪೇಟ್ನಿಂದ ಪಂಜಗುಟ್ಟದಲ್ಲಿರುವ ವೈಎಸ್ಆರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜೆಆರ್ಸಿ ಕನ್ವೆಷನ್ನತ್ತ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಘೋಷಿಸಿದಂತೆ ಜುಲೈ 8ರಂದು ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಜನ್ಮದಿನದಂದು ಹೊಸ ಪಕ್ಷದ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುತ್ತದೆ. ಹೈದರಾಬಾದಿನ ಜೆಆರ್ಸಿ ಕನ್ವೆಷನ್ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಮುಂದೆ ಪಕ್ಷ ಲೋಕಾರ್ಪಣೆಗೊಳ್ಳಲಿದೆ.
ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಾಜ್ಯ ಮಟ್ಟದ ರಾಜಕೀಯ ಪಕ್ಷವೊಂದನ್ನು ಇದೇ ಮೊದಲ ಬಾರಿಗೆ ಮಹಿಳಾ ರಾಜಕಾರಣಿಯೊಬ್ಬರು ಸ್ಥಾಪಿಸಿದ್ದಾರೆ.
ಜುಲೈ 8ರಂದು ಶರ್ಮಿಳಾ ಅವರ ಪಕ್ಷದ ಹೆಸರು, ಚಿನ್ಹೆ, ಧ್ವಜ ಮತ್ತು ಸಿದ್ಧಾಂತಗಳ ವಿವರಗಳನ್ನು ನೀಡಲಾಗುತ್ತದೆ. ಹಾಗೂ ಈ ಮೊದಲೇ ವರದಿಯಾದಂತೆ ವೈಎಸ್ ಆರ್ ತೆಲಂಗಾಣ ಪಕ್ಷ (YSRTP) ಎಂದು ನೋಂದಣಿ ಮಾಡಿಸಲಾಗಿದೆ. ತೆಲಂಗಾಣ ವೈಎಸ್ಸಾರ್ ಕಾಂಗ್ರೆಸ್(TYSRC) ಎಂಬ ಹೆಸರು ಕೂಡಾ ಕೇಳಿ ಬಂದಿತ್ತು.
ವರದಿಗಳ ಪ್ರಕಾರ ವಿ ರಾಜಗೋಪಾಲ್ ಅವರನ್ನು ಪಕ್ಷದ ಚೇರ್ಮನ್ ಆಗಿ ನೇಮಿಸಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಹೈದರಾಬಾದಿನ ಯೂಸುಫ್ ಗಢದ ನಿವಾಸಿ ರಾಜ ಗೋಪಾಲ್ ಅವರು ಜೂನ್ 16ರಂದು ಪಕ್ಷದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ತೆಲಂಗಾಣದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿರುವುದು, 90 ಲಕ್ಷಕ್ಕೂ ಅಧಿಕ ಉದ್ಯೋಗ ಖಾಲಿ ಇರುವುದು, ಕೋವಿಡ್ 19 ನಿರ್ವಹಣೆಯಲ್ಲಿ ವಿಫಲ ಮುಂತಾದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಶರ್ಮಿಳಾ ಯತ್ನಿಸಿದ್ದಾರೆ. ಕೋವಿಡ್ ಕಾರಣದಿಂದ ಹೊಸ ಪಕ್ಷ ಸ್ಥಾಪನೆ ಪ್ರಕ್ರಿಯೆ ವಿಳಂಬವಾಗಿದ್ದರೂ ನಿಗದಿಯಂತೆ ಜುಲೈ 8ರಂದು ಪಕ್ಷ ಘೋಷಣೆಯಾಗುವುದು ನಿಶ್ಚಿತವಾಗಿದೆ. ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಶರ್ಮಿಳಾ ಅವರ ಹೊಸ ಪಕ್ಷ ಸ್ಪರ್ಧೆಗಿಳಿಯಲು ತಯಾರಿ ನಡೆಸುತ್ತಿದೆ.