ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ ಪ್ರಿಯಾ
ಹೈದರಾಬಾದ್, ಫೆಬ್ರವರಿ 19: 'ರಾಷ್ಟ್ರೀಯ ಕ್ರಷ್' ಎನಿಸಿಕೊಂಡಿರುವ ಮಲ್ಲು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿಯನದ ಒರು ಅಡಾರ್ ಲವ್ ಚಿತ್ರದ ಹಾಡು ಹಾಗೂ ಚಿತ್ರ ತಂಡದ ವಿರುದ್ಧ ಹೈದರಾಬಾದಿನ ಫಲಕ್ನಾಮಾ ಪೊಲೀಸರಿಗೆ ದೂರು ನೀಡಿದ್ದ ಸುದ್ದಿ ಓದಿರಬಹುದು.
ಪ್ರಕರಣ ದಾಖಲಿಸಿಕೊಂಡಿದ್ದ ಅಲ್ಲಿನ ಪೊಲೀಸರು ಪ್ರಿಯಾ ಸೇರಿದಂತೆ ಹಲವರ ಮೇಲೆ ಎಫ್ ಐಆರ್ ದಾಖಲಿಸಿದ್ದರು. ಈಗ ತಮ್ಮ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಿಯಾ ಪ್ರಕಾಶ್ ಅವರ ವಿರುದ್ಧ ಮಾತ್ರ ದೂರು ನೀಡಿಲ್ಲ. ಈ ಚಿತ್ರದಲ್ಲಿ ಆ ಹಾಡಿನಲ್ಲಿ ಯಾರೇ ಅಭಿನಯಿಸಿದ್ದರೂ ನಮ್ಮ ಆಕ್ಷೇಪ ಇರುತ್ತಿತ್ತು. 'ಮಾಣಿಕ್ಯ ಮಲಯಾಯ ಪೂವಿ..' ಹಾಡಿನ ಸಾಹಿತ್ಯಕ್ಕೂ ಪ್ರವಾದಿ ಮೊಹಮ್ಮದರ ಜೀವನಕ್ಕೂ ಸಾಮ್ಯತೆ ಇದೆ, ಜತೆಗೆ ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಶಬ್ದಗಳಿವೆ ದೂರಿನಲ್ಲಿ ಹೇಳಲಾಗಿದೆ.ಈ ಹಾಡಿನಲ್ಲಿ ಬರುವ 'ಮಹಿಳೆಯು ಮುತ್ತಿನ ಹೂವಿನಂತೆ- ಮಹಾರಾಣಿ ಖತೀಜಾ ಬೀಬಿ ಪವಿತ್ರ ನಗರಿ ಮೆಕ್ಕಾದಲ್ಲಿ ನೆಲೆಸಿದಂತೆ' ಎಂಬರ್ಥದ ವಾಕ್ಯಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಸಾಹಿತ್ಯಕ್ಕೆ ತಕ್ಕಂತೆ ಚಿತ್ರೀಕರಣ ಮಾಡಿಲ್ಲ. ಚಿತ್ರದ ನಿರ್ದೇಶಕ ಅಬ್ದುಲ್ ಸೇರಿದಂತೆ ಚಿತ್ರದಲ್ಲಿ ಅನೇಕರು ಇಸ್ಲಾಂ ಧರ್ಮದವರಿದ್ದರೂ ಈ ರೀತಿ ಪ್ರಮಾದವಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಆದರೆ, ಈ ಹಾಡು ಕಳೆದ 40 ವರ್ಷಗಳಿಂದ ಜನಜನಿತವಾಗಿದ್ದು, ಕೋಟ್ಯಂತರ ಮಂದಿ ಕೇಳಿಸಿಕೊಂಡಿದ್ದಾರೆ. ಆದರೆ, ಸಾಹಿತ್ಯದ ಬಗ್ಗೆ ಯಾರೂ ಆಕ್ಷೇಪಿಸಿಲ್ಲ ಎಂದು ಪ್ರಿಯಾ ವಾದಿಸಿದ್ದಾರೆ.