'2019ರಲ್ಲಿ ಆಂಧ್ರದಲ್ಲಿ ಬಿಜೆಪಿ 1 ಸ್ಥಾನ ಗೆದ್ದರೂ ರಾಜಕೀಯ ನಿವೃತ್ತಿ'
ತಿರುಪತಿ, ಜುಲೈ 23: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಆಂಧ್ರಪ್ರದೇಶ ಒಂದೇ ಒಂದು ಸ್ಥಾನ ಗೆದ್ದರೂ ನಾನು ರಾಜಕೀಯದಿಂದ ನಿವೃತ್ತಿ ಪಡೆದುಕೊಳ್ತೀನಿ ಎಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಸವಾಲು ಹಾಕಿದ್ದಾರೆ.
ತಿರುಪತಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರ ಜತೆ ಮಾತನಾಡಿ, ವಿಶೇಷ ಸ್ಥಾನಮಾನದ ವಿಚಾರವಾಗಿ ಸ್ವತಃ ಪ್ರಧಾನಿಗಳು ಟಿಡಿಪಿ ಯೂ ಟರ್ನ್ ತೆಗೆದುಕೊಂಡಿದೆ ಎಂದು ಆರೋಪಿಸುತ್ತಿದ್ದಾರೆ. ಇದು ನಿರಾಶಾದಾಯಕ. ಹಾಗೆ ಯೂ ಟರ್ನ್ ತೆಗೆದುಕೊಂಡವರು ಪ್ರಧಾನಮಂತ್ರಿಗಳೇ ಹೊರತು ನಾವಲ್ಲ ಎಂದರು.
ಮತ್ತೆ ದ್ರೋಹ ಬಗೆದ ಮೋದಿ: ಚಂದ್ರಬಾಬು ನಾಯ್ಡು ಆರೋಪ
ಕೇಂದ್ರ ಸರಕಾರವು ಹೇಗೆ ನಡೆದುಕೊಂಡಿದೆ ಅನ್ನೋದನ್ನು ತೆಲುಗು ಜನರು ಮರೆಯುವುದಿಲ್ಲ. ಜತೆಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಆಂಧ್ರದ ವಿರೋಧ ಪಕ್ಷದ ನಾಯಕ ವೈ.ಎಸ್.ಜಗನ್ ಮೋಹನ್ ರೆಡ್ಡಿ ಚರ್ಚೆಯಿಂದಲೇ ಓಡಿಹೋದರು. ಸದನದ ಕಲಾಪವನ್ನು ಬಹಿಷ್ಕರಿಸಿ, ಮುಂದಿನ ಲೋಕಸಭೆ ಚುನಾವಣೆಯನ್ನು ಗೆಲ್ಲುವ ಸಲುವಾಗಿ ಮೂರು ಸಾವಿರ ಕಿಲೋಮೀಟರ್ ಪ್ರಜಾ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಸದನದಲ್ಲಿ ಚರ್ಚೆಗೆ ಕರೆದರೆ ಜಗನ್ ಓಡಿಹೋಗ್ತಾರೆ. ಪವನ್ ಕಲ್ಯಾಣ್ ಟ್ವೀಟ್ ಮಾಡ್ತಾ ಇರ್ತಾರೆ. ಅವರು ಸದನದಂಥ ಸರಿಯಾದ ವೇದಿಕೆಯಲ್ಲಿ ಚರ್ಚೆ ಮಾಡುವುದಿಲ್ಲ ಎಂದು ಆರೋಪಿಸಿದರು.