ಎನ್ಡಿಎ ಮೈತ್ರಿಕೂಟ ಸೇರುವ ಬಗ್ಗೆ ಚಂದ್ರಬಾಬು ನಾಯ್ಡು ಹೇಳಿದ್ದೇನು?
ಹೈದರಾಬಾದ್, ಜುಲೈ 23 : 'ಎನ್ಡಿಎ ಮೈತ್ರಿಕೂಟಕ್ಕೆ ಸೇರುವಂತೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮನವಿ ಮಾಡಿದರೂ ಟಿಡಿಪಿ ಮೈತ್ರಿಕೂಟಕ್ಕೆ ಸೇರುವುದಿಲ್ಲ' ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.
ತೆಲುಗುದೇಶಂ ಪಕ್ಷ (ಟಿಡಿಪಿ) ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು ಉಂಟಾಗಿದೆ. ಈ ಬೆಳವಣಿಗೆ ಬಳಿಕ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, 'ಎನ್ಡಿಎ ಮೈತ್ರಿಕೂಟ ಸೇರುವುದಿಲ್ಲ' ಎಂದು ಘೋಷಣೆ ಮಾಡಿದ್ದಾರೆ.
ಅವಿಶ್ವಾಸ ನಿರ್ಣಯದಲ್ಲಿ ಮಿತ್ರ ಪಕ್ಷಗಳಿಗೆ ಸೋಲು
'ನಮಗೆ ಅಧಿಕಾರದ ಹಸಿವಿಲ್ಲ. ಕೇಂದ್ರ ಸಚಿವ ಸ್ಥಾನದ ಹುದ್ದೆಯ ಆಸೆಯೂ ಇಲ್ಲ. 2014ರಲ್ಲಿ ಎನ್ಡಿಎ ಮೈತ್ರಿಕೂಟವನ್ನು ಟಿಡಿಪಿ ಸೇರಿದ್ದು ರಾಜ್ಯದ ಜನರ ಹಿತಕ್ಕಾಗಿ' ಎಂದು ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಮತ್ತೆ ದ್ರೋಹ ಬಗೆದ ಮೋದಿ: ಚಂದ್ರಬಾಬು ನಾಯ್ಡು ಆರೋಪ
ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಕೇಂದ್ರ ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ಶುಕ್ರವಾರ ಲೋಕಸಭೆಯಲ್ಲಿ ಈ ಕುರಿತು 12 ತಾಸು ಚರ್ಚೆ ನಡೆಯಿತು. ಅಂತಿಮವಾಗಿ ಮತದಾನ ನಡೆದಾಗ ನಿರ್ಣಯದ ಪರ 126, ವಿರುದ್ಧವಾಗಿ 325 ಮತಗಳು ಬಂದವು. ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿತ್ತು.
4 ವರ್ಷ ಕಾದಿದ್ದೇವೆ
'2014ರಲ್ಲಿ ನಾವು ಎನ್ಡಿಎ ಮೈತ್ರಿಕೂಟ ಸೇರಿದ್ದು, ಆಂಧ್ರಪ್ರದೇಶ ರಾಜ್ಯದ ಹಿತಕ್ಕಾಗಿ. ನಾವು 4 ವರ್ಷ ಬಿಜೆಪಿ ಸರ್ಕಾರ ರಾಜ್ಯಕ್ಕೆ ನ್ಯಾಯ ಒದಗಿಸಲಿದೆ ಎಂದು ಕಾದೆವು. ಆದರೆ, ರಾಜ್ಯದ ಜನರಿಗೆ ಅವರು ದ್ರೋಹ ಮಾಡಿದ್ದಾರೆ. ಇನ್ನೊಮ್ಮೆ ಅವರು ದ್ರೋಹ ಮಾಡುವುದಿಲ್ಲ ಎಂದು ನಾವು ನಂಬುವುದು ಹೇಗೆ?' ಎಂದು ಎನ್.ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.
ಬದ್ಧತೆ ಮತ್ತು ಸಂಖ್ಯಾಬಲ
ಟಿಡಿಪಿ ಸಂಸದ ಕೆ.ಶ್ರೀನಿವಾಸ್ ಕೇಂದ್ರ ಎನ್ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. 'ಲೋಕಸಭೆಯಲ್ಲಿ ಮಂಡನೆಯಾದ ಅವಿಶ್ವಾಸ ನಿರ್ಣಯ ನಮ್ಮ ಬದ್ಧತೆ ಮತ್ತು ಬಿಜೆಪಿಯ ಸಂಖ್ಯಾಬಲದ ನಡುವಿನ ಹೋರಾಟವಾಗಿತ್ತು' ಎಂದು ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
'ಬಿಜೆಡಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಮತದಾನ ಮಾಡದೇ ಸಂಸತ್ನಿಂದ ಹೊರ ಹೋಯಿತು. ನವೀನ್ ಪಟ್ನಾಯಕ್ ನಮ್ಮ ಹಳೆಯ ಮಿತ್ರರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ' ಎಂದರು.
ಮಿತ್ರಪಕ್ಷಗಳ ಒಕ್ಕೂಟ
'2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಿತ್ರಪಕ್ಷಗಳನ್ನುಒಗ್ಗೂಡಿಸಲಾಗತ್ತದೆ. ಬಿಜೆಪಿಯವರು ಆಂಧ್ರಪ್ರದೇಶಕ್ಕೆ ಯಾವುದೇ ಕೊಡುಗೆ ನೀಡುತ್ತೇವೆ ಎಂದು ಹೇಳಿದರೂ ಎನ್ಡಿಎ ಮೈತ್ರಿಕೂಟವನ್ನು ಸೇರುವುದಿಲ್ಲ' ಎಂದು ಎನ್.ಚಂದ್ರಬಾಬು ನಾಯ್ಡು ಹೇಳಿದರು.
ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ
ಆಂಧ್ರ ಪ್ರದೇಶದಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಎನ್ಡಿಎ ಸರ್ಕಾರ ಹೇಳಿದ ಹಿನ್ನಲೆಯಲ್ಲಿ ತೆಲುಗುದೇಶಂ ಪಕ್ಷ (ಟಿಡಿಪಿ) ಮೈತ್ರಿಕೂಟದಿಂದ ಈ ವರ್ಷ ಹೊರಬಂದಿತ್ತು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಬಾಬು ನಾಯ್ಡು ಅವರು, 'ನಮ್ಮ ರಾಜ್ಯಕ್ಕೆ ವಿಶೇಶ ಸ್ಥಾನಮಾನ ನಿರಾಕರಿಸಿದ್ದಾರೆ. ಆದರೆ, ಬೇರೆ ಈಶಾನ್ಯ ರಾಜ್ಯಗಳಿಗೆ ನೀಡಲಾಗಿದೆ' ಎಂದು ದೂರಿದರು.