ತೆಲಂಗಾಣದಲ್ಲಿ ಕೊರೊನಾವೈರಸ್ ರೋಗಿಗಳ ಸಾವಿಗೇನು ಕಾರಣ?
ಹೈದ್ರಾಬಾದ್, ಏಪ್ರಿಲ್ 29: ತೆಲಂಗಾಣದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊವಿಡ್-19 ಸೋಂಕಿತರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಸೇವೆಗಳು ಲಭ್ಯವಾಗದಿರುವುದೇ ಈ ಅವಾಂತರಕ್ಕೆಲ್ಲ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.
ಕೊರೊನಾವೈರಸ್ ಸೋಂಕಿತರು ತಡವಾಗಿ ಆಸ್ಪತ್ರೆಗಳಿಗೆ ಬರುತ್ತಿರುವುದೇ ಸಾವಿನ ಸಂಖ್ಯೆ ಏರಿಕೆಗೆ ಕಾರಣ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. 29 ವರ್ಷದ ಕೊರೊನಾ ಸೋಂಕಿತನೊಬ್ಬನ ಸಾವು ಇದಕ್ಕೆ ಉದಾಹರಣೆ ಎಂದು ವೈದ್ಯರು ಹೇಳಿದ್ದಾರೆ.
ಲಸಿಕೆಯ 2 ಡೋಸ್ ಪಡೆದ ಹಿರಿಯರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.94ರಷ್ಟು ಕಡಿಮೆ
ಕಳೆದ ಮೂರು ದಿನಗಳಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ಹುಡುಕಾಟ ನಡೆಸಿದ ಸೋಂಕಿತನು ಮೂರನೇ ದಿನ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೂರು ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟು ಹೋಗಿದ್ದು, ಅಂತಿಮ ಹಂತದಲ್ಲಿ ಇರುವಾಗ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ನಿಜಾಮಬಾದ್ ಸರ್ಕಾರಿ ಆಸ್ಪತ್ರೆಯ ವೈದ್ಯರು ದೂಷಿಸಿದ್ದಾರೆ.
ಬೆಡ್ ಮತ್ತು ಆಕ್ಸಿಜನ್ ಕೊರತೆಯೇ ಕಾರಣ:
"ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ಹಾಸಿಗೆ, ಆಕ್ಸಿಜನ್ ಸಿಗದೇ ಪ್ರಾಣ ಬಿಡುತ್ತಿದ್ದಾರೆ. ಇನ್ನು, ಕೆಲವು ಪ್ರಕರಣಗಳಲ್ಲಿ ರೋಗಿ ಕೊನೆ. ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಕರೆ ತರಲಾಗುತ್ತಿದೆ. ಮೂಲಭೂತ ಅವಶ್ಯಕತೆ ಆಗಿರುವ ಆಂಬ್ಯುಲೆನ್ಸ್ಗಳು ಸಹ ಭಾರಿ ಹಣವನ್ನು ಕೇಳುತ್ತಿದ್ದು, ಇದರಿಂದ ಅನೇಕರು ಭಯಭೀತರಾಗಿದ್ದಾರೆ" ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.
ತೆಲಂಗಾಣದ ಟಿಐಎಂಎಸ್ ಆಸ್ಪತ್ರೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಐಸಿಯು ಹಾಸಿಗೆ ಮತ್ತು ವೈದ್ಯಕೀಯ ಆಮ್ಲಜನಕದ ಅಭಾವ ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ. ಒಬ್ಬ ಕೊವಿಡ್ ರೋಗಿಯು 9 ರಿಂದ 11 ಆಸ್ಪತ್ರೆಗಳನ್ನು ಸುತ್ತಿ ಎಲ್ಲಿಯೂ ಬೆಡ್ ವ್ಯವಸ್ಥೆ ಸಿಗದಿದ್ದಾಗ ಅಂತಿಮವಾಗಿ ಟಿಐಎಂಎಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಅಷ್ಟರಲ್ಲಾಗಲೇ ಸೋಂಕಿತನ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿರುತ್ತದೆ. ನೇರವಾಗಿ ಆತನನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಐಸಿಯು ಬೆಡ್ ಸಂಖ್ಯೆ:
ರಾಜ್ಯದಲ್ಲಿ ಬುಧವಾರ ರಾತ್ರಿ 8 ಗಂಟೆ ವೇಳೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 775 ಐಸಿಯು ಹಾಸಿಗೆ ಮತ್ತು 2987 ಆಮ್ಲಜನಕ ವ್ಯವಸ್ಥಿತ ಹಾಸಿಗೆಗಳು ಲಭ್ಯವಿದೆ. ಓಸ್ಮಾನಿಯಾ ಜನರಲ್ ಆಸ್ಪತ್ರೆಯನ್ನು ಕೇವಲ ಕೊವಿಡ್ ಸೋಂಕಿತರ ಚಿಕಿತ್ಸೆ ಮೀಸಲಿರಿಸಿದ್ದು, 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ರಾಜಧಾನಿ ಹೈದ್ರಾಬಾದ್ ನಲ್ಲಿ ಕೇವಲ 51 ಐಸಿಯು ಹಾಸಿಗೆಗಳು ಲಭ್ಯವಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.