ಮಹಿಳಾ ತಹಶೀಲ್ದಾರ್ಗೆ ಬೆಂಕಿ ಹಚ್ಚಿದ್ದ ವ್ಯಕ್ತಿ ಸಾವು
ಅಮರಾವತಿ, ನವೆಂಬರ್ 7: ಹಾಡಹಗಲೇ ಕಚೇರಿಗೆ ನುಗ್ಗಿ, ಮಹಿಳಾ ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ್ದ ವ್ಯಕ್ತಿ ಸುರೇಶ್ ಕೂಡ ಇದೀಗ ಮೃತಪಟ್ಟಿದ್ದಾನೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನವೆಂಬರ್ 5 ರಂದು ಈ ಘಟನೆ ನಡೆದಿತ್ತು. ಹೈದರಾಬಾದ್ ಹೊರವಲಯದ ಅಬ್ದುಲ್ಲಾಪುರ್ಮೆಟ್ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ತಹಶೀಲ್ದಾರ್ ವಿಜಯಾ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದರು. ಹಾಗೆಯೇ ಸುರೇಶ್ ಕೂಡ ತಾನೂ ಬೆಂಕಿ ಹಂಚಿಕೊಂಡಿದ್ದ.
ಮಹಿಳಾ ತಹಶೀಲ್ದಾರ್ ಗೆ ಕಚೇರಿಯಲ್ಲೇ ಬೆಂಕಿ, ಸ್ಥಳದಲ್ಲೇ ಸಾವು
ಅವರನ್ನು ರಕ್ಷಿಸಲು ಮುಂದಾಗಿದ್ದ ಚಾಲಕ ಕೂಡ ಬುಧವಾರ ಕೊನೆಯುಸಿರೆಳೆದಿದ್ದರು. ಬೆಂಕಿ ಹಚ್ಚುವಾಗ ಆರೋಪಿ ಸುರೇಶ್ಗೂ ಕೂಡ ಬೆಂಕಿ ತಗುಲಿದ್ದ ಕಾರಣ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಘಟನೆಗೆ ಕಾರಣ ಏನು?
ಆರೋಪಿ ಹಯತ್ನಗರದ ಗೌರೆಲ್ಲಿ ಗ್ರಾಮದವನಾಗಿದ್ದು, ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದ. ವಿವಾದ ಪರಿಹರಿಸಿಕೊಡುವಂತೆ ದುಂಬಾಲು ಬಿದ್ದಿದ್ದ. ಹಲವು ದಿನಗಳಿಂದಲೂ ದಿನವಿಡೀ ಕಚೇರಿ ಸುತ್ತಲೂ ಓಡಾಡುತ್ತಿದ್ದ ಎಂದು ಸಿಬ್ಬಂದಿ ತಿಳಿಸಿದ್ದಾರೆ. ನಲ್ಲಗೊಂಡಾ ಜಿಲ್ಲೆ ಮೂಲದವರಾದ ವಿಜಯಾ ರೆಡ್ಡಿ, ಇತ್ತೀಚೆಗಷ್ಟೇ ಬಡ್ತಿ ಪಡೆದು, ಅಬ್ದುಲ್ಲಾಪುರ್ಮೆಟ್ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದರು. ಇಬ್ಬರು ಮಕ್ಕಳ ತಾಯಿಯಾದ ವಿಜಯಾ ಅವರ ಪತಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಎಂದು ತಿಳಿದುಬಂದಿದೆ.
ಊಟದ ವಿರಾಮದಲ್ಲಿ ದಾಳಿ
ಬೆಳಗ್ಗೆಯಿಂದಲೂ ಕಚೇರಿ ಸುತ್ತಲೂ ತಿರುಗಾಡುತ್ತಿದ್ದ ಆರೋಪಿ, ಮಧ್ಯಾಹ್ನ 1.30ಕ್ಕೆ ಊಟದ ಸಮಯದಲ್ಲಿ ಕಚೇರಿಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾಗ ತಹಶೀಲ್ದಾರ್ ಚೇಂಬರ್ ಪ್ರವೇಶಿಸಿದ್ದಾನೆ. ಮೊದಲಿಗೆ ಅಧಿಕಾರಿಣಿಯ ಜತೆಗೆ ಮಾತನಾಡಬೇಕೆಂದು ಆತ ಅನುಮತಿ ಪಡೆದಿದ್ದ. ಸುಮಾರು ಅರ್ಧಗಂಟೆ ಮಾತನಾಡಿದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಚೇಂಬರ್ನ ಬಾಗಿಲು ಮುಚ್ಚಿದ ಸುರೇಶ್, ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತಾನೂ ಬೆಂಕಿ ಹಚ್ಚಿಕೊಂಡಿದ್ದ. ಅಷ್ಟರಲ್ಲಿ ಅಧಿಕಾರಿಣಿಯ ಚೀರಾಟ ಕೇಳಿ, ಡ್ರೈವರ್ ಸೇರಿದಂತೆ ಹತ್ತಿರದಲ್ಲೇ ಇದ್ದ ಇಬ್ಬರು ನೌಕರರು ಬಾಗಿಲು ಬಡಿದಿದ್ದರು.
ಸಜೀವ ದಹನವಾಗಲೆಂದೇ ವಿಜಯಾ ರೆಡ್ಡಿ ಶಿಕ್ಷಕಿ ಕೆಲಸ ಬಿಟ್ಟು ಬಂದರೇ...?!
ತಹಶೀಲ್ದಾರ್ ರಕ್ಷಣೆಗೆ ಮುಂದಾಗಿದ್ದ ಚಾಲಕ ಸಾವು
ಬೆಂಕಿಯಲ್ಲಿ ಸುಡುತ್ತಿದ್ದ ತಹಶೀಲ್ದಾರ್ ವಿಜಯರೆಡ್ಡಿ ಅವರನ್ನು ಚಾಲಕ ಗುರುನಾಥಂ ರಕ್ಷಿಸಲು ಹೋಗಿದ್ದರು. ಈ ವೇಳೆ ಅವರಿಗೆ ಬೆಂಕಿ ತಗಲಿದ್ದು, 80% ದೇಹದ ಭಾಗ ಸುಟ್ಟುಹೋಗಿತ್ತು. ತಕ್ಷಣ ಗಾಯಗೊಂಡಿದ್ದ ಗುರುನಾಥಂ ಅವರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದರು. ಹೈದರಾಬಾದ್ನ ಕಂಚಂಭಾಗ್ನಲ್ಲಿರುವ ಅಪೋಲೋ ಡಿಆರ್ಡಿಒ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುನಾಥಂ ತೀವ್ರ ಗಾಯಗೊಂಡಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ತಹಶೀಲ್ದಾರ್ ಗಾಗಿ ಪ್ರಾಣ ಒತ್ತೆ ಇಟ್ಟ ಡ್ರೈವರ್ ಪತ್ನಿ 8 ತಿಂಗಳ ಗರ್ಭಿಣಿ
ತಹಶೀಲ್ದಾರ್ ರಕ್ಷಣೆಗೆ ಮುಂದಾಗಿದ್ದ ಚಾಲಕನ ಪತ್ನಿ ತುಂಬು ಗರ್ಭಿಣಿ
ಮಹಿಳಾ ತಹಶೀಲ್ದಾರ್ನ್ನು ಕಾಪಾಡಲು ತೆರಳಿ ಸುಟ್ಟಗಾಯಗಳಿಂದ ಮೃತಪಟ್ಟಿದ್ದ ಚಾಲಕನ ಪತ್ನಿ ಎಂಟು ತಿಂಗಳ ತುಂಬು ಗರ್ಭಿಣಿ, ಹಾಗೂ 2 ವರ್ಷದ ಮಗು ಕೂಡ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.