'ಯಾವ ತಂದೆ ಮಗಳನ್ನು ಸಾಯಲು ಬಿಡಲು ಸಾಧ್ಯ?'
ಅಪ್ಪನ ಕಲ್ಲು ಹೃದಯ ಕರಗಿದ್ದರೆ ಆಕೆಗೆ ಚಿಕಿತ್ಸೆ ದೊರಕಿಸಿಕೊಡುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ, ಆತನಿಗೆ ಮಗಳು, ಹೆಂಡತಿ, ಸಂಬಂಧಗಳಿಗಿಂತ ತನ್ನ ಪ್ರತಿಷ್ಠೆಯೇ ಹೆಚ್ಚಾಗಿತ್ತು.
ಹೈದರಾಬಾದ್, ಮೇ 18 : "ಯಾರೇ ಆಗಲಿ ಅಷ್ಟು ಹೃದಯಹೀನರಾಗಲು ಹೇಗೆ ಸಾಧ್ಯ? ಅವನಿಗೆ ತನ್ನ ಮಗಳ ಸಾವನ್ನು ತಡೆಯಲು ಸಾಧ್ಯವಿದ್ದರೂ ಆತ ನನ್ನ ಮಗಳನ್ನು ಸಾಯಲು ಹಾಗೆಯೇ ಬಿಟ್ಟ..."
ಹೀಗೆಂದು, ಮೇ 14ರಂದು ಕ್ಯಾನ್ಸರ್ ನಿಂದ ಅಸುನೀಗಿದ ಹದಿಮೂರು ವರ್ಷದ ಬಾಲಕಿ ಸಾಯಿಶ್ರೀಯ ತಾಯಿ ಸುಮಾ ಅವರು ತಮ್ಮ ಹೃದಯದಲ್ಲಿ ಮಡುಗಟ್ಟಿದ್ದ ವೇದನೆ, ಸಿಟ್ಟನ್ನು ಹೊರಹಾಕಿದ್ದಾರೆ. ತಮ್ಮ ಮದುವೆ, ಮಗಳು, ವಿಚ್ಛೇದನ, ವೇದನೆಯನ್ನು ದಿನ್ಯೂಸ್ ಮಿನಿಟ್ ಜೊತೆ ಹಂಚಿಕೊಂಡಿದ್ದಾರೆ.
"ಅಪ್ಪಾ ದಯವಿಟ್ಟು ನನ್ನನ್ನು ಬದುಕಿಸಿಕೊ. ನಾನು ಹೆಚ್ಚು ದಿನ ಬದುಕುವುದಿಲ್ಲವೆಂದು ವೈದ್ಯರು ಹೇಳಿದ್ದಾರೆ. ನನ್ನ ಚಿಕಿತ್ಸೆಗಾಗಿ ಅಮ್ಮನ ಬಳಿ ಹಣವಿಲ್ಲ. ನೀನೇ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿಸು" ಎಂದು ಬಿಕ್ಕಿಬಿಕ್ಕಿ ಅಳುತ್ತ ಸಾಯಿಶ್ರೀ ಮಾಡಿದ್ದ ವಿಡಿಯೋ ಆಕೆಯ ಸಾವಿನ ನಂತರ ಮಾಧ್ಯಮಗಳ ಬಳಿ ಸಿಕ್ಕು ವೈರಲ್ ಆಗಿದೆ. [ಅಪ್ಪಾ, ನನ್ನ ಬದುಕಿಸಿಕೋ ಎಂದು ಆ ಪುಟಾಣಿ ಗೋಗರೆದರೂ...]
ಸಾಯಿಶ್ರೀಯ ತಾಯಿ ಮತ್ತು ತಂದೆ ಶಿವಕುಮಾರ್ ಬೇರ್ಪಡೆಯಾಗಿದ್ದಾರೆ. ತಾಯಿ ವಿಜಯವಾಡಾದಲ್ಲಿ ನೆಲೆಸಿದ್ದರೆ, ತಂದೆ ಬೆಂಗಳೂರಿನಲ್ಲಿ ನೆಲೆಸಿದ್ದು ಉತ್ತಮ ಕೆಲಸದಲ್ಲಿದ್ದಾರೆ. ಅವರಿಗೆ ರಾಜಕೀಯ ಬೆಂಬಲವೂ ಇದೆ. ಆದರೂ, ಅವರು ತನ್ನ ಮಗಳು ಸಾಯಿಶ್ರೀಯ ಚಿಕಿತ್ಸೆಗಾಗಿ ಕವಡೆಕಾಸನ್ನೂ ನೀಡದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮುದ್ದುಮುಖದ ಸಾಯಿಶ್ರೀ ರಕ್ತ ಕ್ಯಾನ್ಸರ್(Acute Myeloid Leukemia)ನಿಂದ ಬಳಲುತ್ತಿದ್ದಳು. ಆಕೆಯ ಚಿಕಿತ್ಸೆಗೆ ಕನಿಷ್ಠವೆಂದರೂ 40 ಲಕ್ಷ ರುಪಾಯಿಗಳ ಅಗತ್ಯವಿತ್ತು. ಆಕೆಯ ಅಪ್ಪನ ಕಲ್ಲು ಹೃದಯ ಕರಗಿದ್ದರೆ ಆಕೆಗೆ ಚಿಕಿತ್ಸೆ ದೊರಕಿಸಿಕೊಡುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ, ಆತನಿಗೆ ಮಗಳು, ಹೆಂಡತಿ, ಸಂಬಂಧಗಳಿಗಿಂತ ತನ್ನ ಪ್ರತಿಷ್ಠೆಯೇ ಹೆಚ್ಚಾಗಿತ್ತು. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]
ಹೇಗಿದೆ ನೋಡಿ ವಿಧಿಯ ಆಟ!
ವಿಜಯವಾಡಾದಲ್ಲಿರುವ ಸಾಯಿಶ್ರೀ ಹೆಸರಿನಲ್ಲಿರುವ ಮನೆಯನ್ನು ಮಾರಲು ಕೂಡ ಅಪ್ಪ ಅಡ್ಡಗಾಲು ಹಾಕಿದ್ದರು. ರಾಜಕೀಯ ಪ್ರಭಾವ ಬಳಸಿ ಮನೆ ಮಾರದಂತೆ ಒತ್ತಡ ಹೇರಿದ್ದರು. ಮನೆ ಮಾರಿದ್ದರೆ ಸಾಯಿಶ್ರೀ ಬದುಕುಳಿಯುತ್ತಿದ್ದಳೇನೋ? ಮನೆಯೇನೋ ಸಾಯಿಶ್ರೀ ಹೆಸರಿನಲ್ಲಿತ್ತು. ಆದರೆ, ಆಕೆಯ ಗಾರ್ಡಿಯನ್ ಆಗಿ ತಂದೆಯೇ ಸಹಿ ಹಾಕಿದ್ದರು. ಆಕೆ ಸತ್ತರೆ, ಆ ಮನೆ ಅಪ್ಪನ ಹೆಸರಿಗೆ ಬರುತ್ತಿತ್ತು. ಹೇಗಿದೆ ನೋಡಿ ವಿಧಿಯ ಆಟ!
ಸುಮಾ ಅವರ ಬದುಕಿನಲ್ಲಿ ಮತ್ತೊಬ್ಬ ವ್ಯಕ್ತಿಯ ಪ್ರವೇಶ
ಸಾಯಿಶ್ರೀಯ ಅಪ್ಪ ಅಮ್ಮಂದಿರು 2002ರಲ್ಲಿ ಮದುವೆಯಾಗಿದ್ದರು. 2007ರಲ್ಲಿ ನಾನಾ ಕಾರಣಗಳಿಂದಾಗಿ ಮನಸ್ತಾಪ ಎದುರಾಗಿ ಬೇರೆಬೇರೆ ವಾಸಿಸಲು ಆರಂಭಿಸಿದರು. 2010ರವರೆಗೆ ಅಪ್ಪ ಬಂದು ಮಗಳನ್ನು ಆಗಾಗ ನೋಡಿಕೊಂಡು ಹೋಗುತ್ತಿದ್ದರು. ಅಲ್ಲಿಯವರೆಗೆ ಯಾವುದೇ ಅನರ್ಥಗಳು ಸಂಭವಿಸಿರಲಿಲ್ಲ. ಆದರೆ, ಮತ್ತೊಬ್ಬ ವ್ಯಕ್ತಿ ಇಬ್ಬರ ನಡುವೆ ಪ್ರವೇಶಿಸಿದ ನಂತರ ಶುರುವಾಗಿದ್ದೇ ನಿಜವಾದ ಹಿಂಸೆ.
ಚಿಕಿತ್ಸೆಗೆಂದು 5 ಲಕ್ಷ ರುಪಾಯಿ ನೀಡಿದ್ದರು
2010ರಲ್ಲಿ ಸುಮಾ ಅವರ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶಿಸಿದ್ದ. ಅವರು ಮತ್ತು ಸಾಯಿಶ್ರೀ ಜೊತೆ ಸುಮಾ ಅವರು ಹೈದರಾಬಾದಿನಲ್ಲಿ ವಾಸಿಸಲು ಆರಂಭಿಸಿದರು. ನಂತರ ಜಗಳ ತಾರಕಕ್ಕೇರಿ ಇಬ್ಬರೂ ಒಪ್ಪಿಗೆಯ ಮೇರೆಗೆ ಮಾಡಿಕೊಂಡು ವಿಚ್ಛೇದನ ತೆಗೆದುಕೊಂಡರು. 2016ರಲ್ಲಿ ಸಾಯಿಶ್ರೀಗೆ ಕ್ಯಾನ್ಸರ್ ಇದೆ ಎಂದು ತಿಳಿದ ನಂತರ ಆಕೆಯ ಶಿವಕುಮಾರ್ ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೂ ಬಂದಿದ್ದರು. ಚಿಕಿತ್ಸೆಗೆಂದು 5 ಲಕ್ಷ ರುಪಾಯಿ ಕೂಡ ನೀಡಿದ್ದರು.
ಏನಾಯಿತೋ ಏನೋ ಹಣ ನೀಡುವುದನ್ನು ನಿಲ್ಲಿಸಿದರು
"ಶಿವಕುಮಾರ್ ಅವರ ವಕೀಲರ ಆದೇಶದ ಮೇರೆಗೆ ಎಲ್ಲ ವೈದ್ಯಕೀಯ ದಾಖಲೆಗಳನ್ನು ಅವರು ಬೆಂಗಳೂರಿಗೆ ತರಿಸಿಕೊಂಡರು. ನಂತರ ಏನಾಯಿತೋ ಏನೋ ಹಣ ನೀಡುವುದನ್ನು ಮತ್ತು ನಮ್ಮ ಜೊತೆ ಮಾತಾಡುವುದನ್ನು ನಿಲ್ಲಿಸಿಬಿಟ್ಟರು. ಮನೆ ಮಾರುವುದಕ್ಕೂ ಅಡ್ಡಗಾಲು ಹಾಕಿದರು. ಹೈದರಾಬಾದ್ ನಲ್ಲಿರುವ ನನ್ನ ಆಸ್ತಿಯನ್ನೇ ಮಾರಿ ಸಾಯಿಶ್ರೀಗೆ ಚಿಕಿತ್ಸೆ ಸಿಗುವಂತೆ ಮಾಡಿದೆ" ಎಂದು ಮುಂದುವರಿಸುತ್ತಾರೆ ಸುಮಾ.
ವಿಭಿನ್ನವಾಗಿ ವರ್ತಿಸಲು ಆರಂಭಿಸಿದ ಅಪ್ಪ
"ಸಾಯಿಶ್ರೀಗೆ ಗುಣವಾಗಿದೆಯೆಂದೂ ವೈದ್ಯರೂ ಹೇಳಿದ್ದರು. ಆದರೆ, ಕ್ಯಾನ್ಸರ್ ಮತ್ತೆ ಬರಬಾರದಿದ್ದರೆ ಸೂಕ್ತ ಔಷಧಿ ನೀಡುತ್ತಲೇ ಇರಬೇಕು. ಇದಕ್ಕಾಗಿ ತಿಂಗಳಿಗೆ 50 ಸಾವಿರ ರುಪಾಯಿವರೆಗೆ ಖರ್ಚಾಗುತ್ತಿತ್ತು. ನಮ್ಮಲ್ಲಿದ್ದ ಹಣವೆಲ್ಲ ಖಾಲಿಯಾದಾಗ, ಅನಿವಾರ್ಯವಾಗಿ ಶಿವಕುಮಾರ್ ಅವರನ್ನು ಸಂಪರ್ಕಿಸಲೇಬೇಕಾಯಿತು. ಆಗ ಅವರು ವಿಭಿನ್ನವಾಗಿ ವರ್ತಿಸಲು ಆರಂಭಿಸಿದರು."
ಸಮಯಕ್ಕೆ ಊಟ, ಮಾತ್ರೆ ನೀಡುತ್ತಿರಲಿಲ್ಲ
ಮೊದಲು ತಾವೇ ಚಿಕಿತ್ಸೆ ಕೊಡಿಸುತ್ತೇನೆಂದು ಹೇಳಿದ ಶಿವಕುಮಾರ್ ಆಕೆಯನ್ನು ಕರೆದುಕೊಂಡು ಬೆಂಗಳೂರಿನಲ್ಲಿ ಇಟ್ಟುಕೊಂಡರು. ಆದರೆ, ಆಕೆಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಸರಿಯಾದ ಸಮಯಕ್ಕೆ ಊಟ, ಮಾತ್ರೆಯನ್ನೂ ನೀಡುತ್ತಿರಲಿಲ್ಲ. ಇದರಿಂದ ಆಕೆಯನ್ನು ವಾಪಸ್ ಕರೆದುಕೊಂಡು ಬರಬೇಕಾಯಿತು. ಸಾಯಿಶ್ರೀ ತುಂಬಾ ಖಿನ್ನತೆಗೊಳಗಾದಳು. ಮತ್ತೆ ಜ್ವರ ಬರಲು ಆರಂಭಿಸಿತು. ಕೂಡಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಬದುಕುಳಿಯಲಿಲ್ಲ ಎಂದು ಮಾತು ಮುಗಿಸುತ್ತಾರೆ ಸುಮಾ.
{promotion-urls}