'ಎನ್ಡಿಎ'ನಿಂದ ಟಿಡಿಪಿ ಹೊರಕ್ಕೆ? ಚಂದ್ರಬಾಬು ನಾಯ್ಡು ಹೇಳಿದ್ದೇನು?
ಅಮರಾವತಿ, ಮಾರ್ಚ್ 7: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 'ಎನ್ಡಿಎ' ಮೈತ್ರಿಕೂಟದಿಂದ ತೆಲುಗು ದೇಶಂ ಪಕ್ಷ ಹೊರಬೀಳಲಿದೆ ಎಂಬ ಅನುಮಾನಗಳ ನಡುವೆ ಪ್ರತಿಕ್ರಿಯೆ ನೀಡಿರುವ ಚಂದ್ರಬಾಬು ನಾಯ್ಡು 'ಸರಿಯಾದ ಸಂದರ್ಭದಲ್ಲಿ ಸೂಕ್ತ ತೀರ್ಮಾನ' ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ಆಂಧ್ರ ಪ್ರದೇಶಕ್ಕೆ 'ವಿಶೇಷ ಸ್ಥಾನಮಾನ' ನೀಡಿರಲಿಲ್ಲ. ಹೀಗಾಗಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ತೆಲುಗು ದೇಶಂ ಪಕ್ಷ ಪಟ್ಟು ಹಿಡಿದು ಕುಳಿತಿದೆ. ಈ ಕುರಿತು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಬಾಬು ನಾಯ್ಡು, ರಾಜ್ಯದ ಜನರ ಭಾವನೆಗೆ ಕೇಂದ್ರ ಸರಕಾರ ಅವಮಾನ ಮಾಡುತ್ತಿದೆ. 'ಎಪಿ ರಿಆರ್ಗನೈಸೇಷನ್ ಆಕ್ಟ್ 2014'ರಲ್ಲಿ ನೀಡಿದ ಭರವಸೆಗಳನ್ನು ಮತ್ತು ಸಂಸತ್ತಿನಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಚಂದ್ರಬಾಬು ನಾಯ್ಡು ಬಿಜೆಪಿ ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ ಏಕೆ?
ಇಂದು ಟೆಲಿಕಾನ್ಫರೆನ್ಸ್ ಮೂಲಕ ತಮ್ಮ ಸಂಸದರ ಜತೆ ಸಭೆ ನಡೆಸಿದ ಚಂದ್ರಬಾಬು ನಾಯ್ಡು, "ನಿಮ್ಮ ಹೃದಯದಲ್ಲಿ ಮತ್ತು ಜನರ ಹೃದಯದಲ್ಲಿ ಏನಿದೆ ಎಂಬುದು ನನಗೆ ಗೊತ್ತಿದೆ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ. ಎಲ್ಲಾ ತೊಂದರೆಗಳನ್ನು ಸಹಿಸಿಕೊಳ್ಳೋಣ. ಆದರೆ ಸರಿಯಾದ ಸಂದರ್ಭದಲ್ಲಿ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ," ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಜನರ ಭಾವನೆಯನ್ನು ಕಡೆಗಣಿಸಿದರೆ ಚೆನ್ನಾಗಿರುವುದಿಲ್ಲ ಎಂದು ಕೇಂದ್ರಕ್ಕೆ ಚಂದ್ರಬಾಬು ನಾಯ್ಡು ಎಚ್ಚರಿಕೆ ನೀಡಿದ್ದಾರೆ.
"ನಾವು ಜನರ ಪರವಾಗಿ ನಿಲ್ಲಬೇಕಾಗಿದೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ರಿಆರ್ಗನೈಸೇಷನ್ ಆಕ್ಟ್ ನಲ್ಲಿ ಉಲ್ಲೇಖಿಸಿದ ವಿಚಾರಗಳನ್ನು ಹೊರತುಪಡಿಸಿ ಬೇರೆ ಏನನ್ನೂ ನಾವು ಕೇಳುತ್ತಿಲ್ಲ," ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಟಿಡಿಪಿ ಸಂಸದರು ನಿರಂತರ ಪ್ರತಿಭಟನೆ ನಡೆಸುತ್ತಿದ್ದು ವಿಶೇಷ ಸ್ಥಾನಮಾನ ನೀಡುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲ್ಲ ಎಂದಿದ್ದಾರೆ. ಇದೇ ವೇಳೆ ಪ್ರತಿಕ್ರಿಯೆ ನೀಡರುವ ಹಣಕಾಸು ಸಚಿವ ಯನಮಾಲಾ ರಾಮಕೃಷ್ಣಡು, ಕೇಂದ್ರ ಸರಕಾರ ವಿಶೇಷ ಸ್ಥಾನಮಾನ ನೀಡಲು ಮಾನಸಿಕವಾಗಿ ಸಿದ್ದವಾಗಿಲ್ಲ. ಮತ್ತು ಈ ಕುರಿತು ದೆಹಲಿಯಲ್ಲಿ ಯಾವುದೇ ಸಿದ್ಧತೆಗಳನ್ನು ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.