ಸೀಮಾಂಧ್ರದ ಭಾವಿ ಸಿಎಂಗೆ ತಡೆಯೊಡ್ಡಿದ ಯುವಕ
ಹೈದರಾಬಾದ್, ಏ.30: ಆಂಧ್ರದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗೆ ಒಟ್ಟೊಟ್ಟಿಗೆ ಇಂದು ಮತದಾನ ಭರರಿಂದ ನಡೆದಿದೆ. ಈ ಮಧ್ಯೆ ಕೇಂದ್ರ ಸಚಿವರೊಬ್ಬರಿಂದ ಅಚಾತುರ್ಯವೊಂದು ನಡೆದಿದೆ. ಅದಕ್ಕೆ ನವ ಯುವಕರೊಬ್ಬರು ತಪರಾಕಿ ಸಹ ನೀಡಿರುವ ಪ್ರಸಂಗ ನಡೆದಿದೆ.
ಸೀಮಾಂಧ್ರದ ಭಾವಿ ಸಿಎಂ ಎಂದೇ ಅಂದುಕೊಂಡಿರುವ ಕೇಂದ್ರದ ಹಾಲಿ ಸಚಿವ ಚಿರಂಜೀವಿಯನ್ನು ಅವರದೇ ನಾಡಿನಲ್ಲಿ (ತೆಲಂಗಾಣದ ಖೈರಾತಾಬಾದ್ ಮತಗಟ್ಟೆಯಲ್ಲಿ) ಯುವಕನೊಬ್ಬ (ಕಾರ್ತಿಕ್) ಎದುರು ಹಾಕಿಕೊಂಡಿದ್ದಾನೆ. ಯುವಕನ 'ಸಾಹಸಕ್ಕೆ' ಅಪಾರ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಆಂಧ್ರದಲ್ಲಿ ಇಂದು ನಡೆಯುತ್ತಿರುವು ಚುನಾವಣೆಯಲ್ಲಿ ಇದೇ ಚರ್ಚೆಯಾಗುತ್ತಿದೆ. ಅಂದಹಾಗೆ ಕಾರ್ತಿಕ್, ಮತ ಚಲಾಯಿಸಲೆಂದೇ ಲಂಡನ್ನಿನಿಂದ ಬಂದ ಎನ್ನಾರೈ.
ಇಷ್ಟಕ್ಕೂ ಇಂದು ಬೆಳಗ್ಗೆ ಏನಾಯಿತೆಂದರೆ ನಟ ಕಮ್ ರಾಜಕಾರಣಿ ಚಿರಂಜೀವಿ ಅವರು ತಮ್ಮ ಪತ್ನಿ, ಪುತ್ರಿ ಮತ್ತು ಪುತ್ರನ ಜತೆಗೂಡಿ ಓಟ್ ಮಾಡಲು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ಆಗಮಿಸಿದ್ದಾರೆ. ಆದರೆ ಅಲ್ಲಿ ಕ್ಯೂ ತುಂಬಾ ಉದ್ದಕ್ಕೆ ಇದ್ದುದ್ದರಿಂದ ಜತೆಗೆ ತಾವು ಮುಖ್ಯಮಂತ್ರಿ ಮೆಟೀರಿಯಲ್ ಎಂದು ಭಾವಿಸಿಕೊಂಡು...
ಪಕ್ಕಾ ತೆಲುಗು ಸಿನಿಮಾ ಶೈಲಿಯಲ್ಲಿ ಕ್ಯೂ ಕಡೆ ಕಣ್ಣು ಹಾಯಿಸದೆ ಸೀದಾ ಮತಗಟ್ಟೆ ಪ್ರವೇಶಿಸಲು ಮುಂದಾಗಿದ್ದಾರೆ. ಆದರೆ ಸುಮಾರು ಹೊತ್ತಿನಿಂದ ಕ್ಯೂನಲ್ಲಿ ನಿಂತಿದ್ದ ನವ ಯುವಕನೊಬ್ಬನಿಗೆ ಅದೆಲ್ಲಿತ್ತೋ ಸಿಟ್ಟು ಸೀದಾ ಮುಂದೆ ಮುಂದೆ ಹೋಗುತ್ತಿದ್ದ ಚಿರಂಜೀವಿಯನ್ನು ತಡೆದು 'ಕ್ಯೂ ಪ್ಲೀಸ್' ಅಂದಿದ್ದಾನೆ.
ಸಾವರಿಸಿಕೊಂಡ 58 ವರ್ಷದ ಚಿರು ಏನೇನೋ ಸಬೂಬು ಹೇಳೋಕ್ಕೆ ಯತ್ನಿಸಿದ್ದಾರೆ. ಆದರೆ ಯುವಕ ಗಟ್ಟಿಗ. ಅವೆಲ್ಲಾ ಆಗೋಲ್ಲ. ಮೊದಲು ಕ್ಯೂನಲ್ಲಿ ನಿಂತುಕೊಳ್ಳಿ ಎಂದು ಪಟ್ಟು ಹಿಡಿದಿದ್ದಾನೆ. ನೀವು ಕೇಂದ್ರ ಸಚಿವರಾದರೇನಂತೆ... ನಿಮಗೇನು ವಿಶೇಷ ಟ್ರೀಟ್ಮೆಂಟ್ ಕೊಡಬೇಕಾ? ನೀವೇನು ಸೀನಿಯರ್ ಸಿಟಿಜನ್ನಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ ಕಾರ್ತೀಕ್. ನಮ್ಮ ಚಿರು ಬಂದ ದಾರಿಗೆ ಸುಂಕವಿಲ್ಲದಂತೆ ಸರದಿಯಲ್ಲಿ ನಿಂತು ಸ್ವಕುಟುಂಬ ಸಮೇತ ಮತ ಚಲಾಯಿಸಿ ಪೆಚ್ಚು ಮೋರೆ ಹಾಕಿಕೊಂಡು ವಾಪಸಾಗಿದ್ದಾರೆ.
ಕ್ಯೂ
ಬಿಟ್ಟ
ನಟ
ಚಿರುಗೆ
ತಪರಾಕಿ...
ವಿಡಿಯೋ
ಇಲ್ಲಿದೆ