ತೆಲಂಗಾಣದಲ್ಲಿ ಬಿಜೆಪಿ ಕೈಯಲ್ಲೇ ಟಿಆರ್ಎಸ್ ರಿಮೋಟ್ ಕಂಟ್ರೋಲ್!
ಹೈದ್ರಾಬಾದ್, ಮೇ 7: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ರಿಮೋಟ್ ಕಂಟ್ರೋಲ್ ಭಾರತೀಯ ಜನತಾ ಪಕ್ಷ(ಬಿಜೆಪಿ) ಕೈಯಲ್ಲಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮರಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂಷಿಸಿದರು.
ತೆಲಂಗಾಣಕ್ಕೆ ರಾಹುಲ್ ಭೇಟಿ: ಡ್ರಗ್ ಪರೀಕ್ಷೆಗೆ ಸವಾಲು ಹಾಕುವ ಬ್ಯಾನರ್ನಿಂದ ಸ್ವಾಗತ
ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಜೊತೆ ಕಾಂಗ್ರೆಸ್ ಮಾತುಕತೆಗಳ ಮಧ್ಯದಲ್ಲಿ ರಾಹುಲ್ ಗಾಂಧಿ ಏಪ್ರಿಲ್ ಆರಂಭದಲ್ಲಿ ವಿದೇಶಕ್ಕೆ ಹೋಗಿದ್ದರು. ತದನಂತರದಲ್ಲಿ ಅವರು ನಡೆಸಿದ ಮೊದಲ ಸಾರ್ವಜನಿಕ ಪ್ರಚಾರ ಸಭೆಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿಯ ಜೊತೆಗೆ ಟಿಆರ್ಎಸ್ ಕೈಡೋಡಿಸಿದೆ. ಬಿಜೆಪಿಯು ಟಿಆರ್ಎಸ್ ಅನ್ನು 'ರಿಮೋಟ್ ಕಂಟ್ರೋಲ್' ಮಾಡುತ್ತಿದ್ದು, ಟಿಆರ್ಎಸ್ಗೆ ಮತ ನೀಡಿದರೆ, ಅದು ಬಿಜೆಪಿಗೆ ಮತ ಹಾಕಿದಂತೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದರು.
ತೆಲಂಗಾಣದಲ್ಲಿ ರಾಜಾಡಳಿತ ಎಂದ ರಾಹುಲ್ ಗಾಂಧಿ
"ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಟಿಆರ್ಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ಹೇಳಿದ ರಾಹುಲ್ ಗಾಂಧಿ, ತೆಲಂಗಾಣದಲ್ಲಿ ಸದ್ಯಕ್ಕೆ ಒಬ್ಬ ಮುಖ್ಯಮಂತ್ರಿ ಆಳ್ವಿಕೆ ನಡೆಸುತ್ತಿಲ್ಲ, ರಾಜ ಆಳ್ವಿಕೆ ನಡೆಸುತ್ತಿದ್ದಾರೆ," ಎಂದರು. ತೆಲಂಗಾಣ ರಾಜ್ಯವು ರಚನೆಯಾದ ಸಂದರ್ಭದಲ್ಲಿ ಅದು ಮಾದರಿ ರಾಜ್ಯವಾಗಲಿದೆ ಎಂದು ಕಾಂಗ್ರೆಸ್ ಭಾವಿಸಿತ್ತು. ಆದರೆ ತೆಲಂಗಾಣದ ಕನಸನ್ನು ಈ ಒಬ್ಬ ವ್ಯಕ್ತಿಯೇ ನಾಶ ಮಾಡಿದ್ದಾರೆ ಎಂದು ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದತ್ತ ಗಮನ ಹರಿಸಲು ಬಯಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಎಂದಿಗೂ ಟಿಆರ್ಎಸ್ ಜೊತೆ ಸೇರಲ್ಲ
ಕಾಂಗ್ರೆಸ್ ಪಕ್ಷವು ಎಂದಿಗೂ 'ಭ್ರಷ್ಟ' ಟಿಆರ್ಎಸ್ನೊಂದಿಗೆ ಸೇರಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಕೇವಲ ಒಂದು ಕುಟುಂಬಕ್ಕೆ ಅನುಕೂಲ ಮಾಡಿಕೊಡಲು ತೆಲಂಗಾಣವನ್ನು ನೀಡಿಲ್ಲ. ತೆಲಂಗಾಣಕ್ಕೆ ದ್ರೋಹ ಬಗೆದಿರುವ ಪಕ್ಷದೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. "ಸಿಬಿಐ ಅಥವಾ ಜಾರಿ ನಿರ್ದೇಶನಾಲಯದ ತನಿಖೆಗೆ ಆದೇಶ ನೀಡದೇ, ಕೆಸಿಆರ್ ಜನರ ಹಣವನ್ನು ಲೂಟಿ ಮಾಡಲು ಕೇಂದ್ರ ಸರ್ಕಾರವುವು ಅವಕಾಶ ನೀಡುತ್ತಿದೆ. ನೀವು ಟಿಆರ್ಎಸ್ಗೆ ಎರಡು ಅವಕಾಶಗಳನ್ನು ನೀಡಿದ್ದೀರಿ, ಈಗ ನಮಗೆ ಅವಕಾಶ ನೀಡಿ" ಎಂದು ರಾಹುಲ್ ಗಾಂಧಿ ಮನವಿ ಮಾಡಿಕೊಂಡರು.
ಕೆಸಿಆರ್ ಸರ್ಕಾರ ಉರುಳಿಸುವ ಬಗ್ಗೆ ರಾಹುಲ್ ಗಾಂಧಿ ಮಾತು
"ರಾಜ್ಯದಲ್ಲಿ ರೈತರ ಆತ್ಮಹತ್ಯೆಯಿಂದಾಗಿ ಸಾವಿರಾರು ವಿಧವೆಯರು ತಮ್ಮ ಪತಿಯನ್ನು ಕಳೆದುಕೊಂಡು ಅಳುತ್ತಿದ್ದಾರೆ. ಅಂಥವರ ಜೀವನದ ಜವಾಬ್ದಾರಿ ಹೊತ್ತುಕೊಳ್ಳುವವರು ಯಾರು?, ಈ ಮುಂದಿನ ಚುನಾವಣೆಯಲ್ಲಿ ನಾವು ಟಿಆರ್ಎಸ್ ಸರ್ಕಾರವನ್ನು ಉರುಳಿಸುತ್ತೇವೆ. ಇದು ಕಾಂಗ್ರೆಸ್ ಮತ್ತು ಟಿಆರ್ಎಸ್ ನಡುವೆ ನೇರ ಹಣಾಹಣಿಯಾಗಿದೆ. ತೆಲಂಗಾಣದ ಕನಸನ್ನು ಹಾಳು ಮಾಡಿ ಯುವಕರಿಂದ ಲಕ್ಷ ಕೋಟಿ ದೋಚಿರುವ ಬಡವನನ್ನು ನಾವು ಕ್ಷಮಿಸುವುದಿಲ್ಲ'' ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ರೈತರಿಗೆ ಸಾಲ ಮನ್ನಾ ಮಾಡುವ ಭರವಸೆ ನೀಡಿದರು. ಪ್ರತಿ ಎಕರೆಗೆ 15,000 ರೂಪಾಯಿ ನೇರ ವರ್ಗಾವಣೆ ಮತ್ತು ಪ್ರಸ್ತುತ ರೈತ ಬಂಧು ಯೋಜನೆಯನ್ನು ಬದಲಿಸುವ ಯೋಜನೆಯ ಬಗ್ಗೆ ಅವರು ಭರವಸೆ ನೀಡಿದರು.
ರೈತರಿಗೆ ಬಂಪರ್ ಭರವಸೆ ನೀಡಿದ ರಾಹುಲ್ ಗಾಂಧಿ
ತೆಲಂಗಾಣದ ರೈತರು ಭಯಪಡುವ ಅಗತ್ಯವಿಲ್ಲ, ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ 2 ಲಕ್ಷ ರೂಪಾಯಿ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು. ನಿಮಗೆ ಸರಿಯಾದ ಎಂಎಸ್ಪಿ ಸಿಗುತ್ತದೆ. ಇದನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ನ ಸರ್ಕಾರ ಮಾಡುತ್ತದೆ," ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ಗೆದ್ದರೆ ರೈತರಿಗಾಗಿ ಇಂದಿರಮ್ಮ ರೈತ ಭರೋಸಾ ಯೋಜನೆ ಅಡಿ ಪ್ರತಿ ಎಕರೆಗೆ 15,000 ಇನ್ಪುಟ್ ಸಬ್ಸಿಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ರೈತ ಆಯೋಗದಲ್ಲಿ ನೋಂದಾಯಿಸಲಾದ ಭೂರಹಿತ ಕಾರ್ಮಿಕರಿಗೆ ವಾರ್ಷಿಕ 12,000 ಸಹಾಯ ಧನ. ಪ್ರತಿ ಕ್ವಿಂಟಾಲ್ ಭತ್ತಕ್ಕೆ 2500 ರೂಪಾಯಿ, ಮೆಣಸಿನ ಕಾಯಿ 15000 ಮತ್ತು ಅರಿಶಿಣಕ್ಕೆ 12000 ರೂಪಾಯಿ ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.
ಒಂದೂವರೆ ವರ್ಷ ಬಾಕಿ ಇರುವಂತೆ ಚುನಾವಣಾ ಪ್ರಚಾರಕ್ಕೆ ಚಾಲನೆ
ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿರುವ ಮುನ್ನ ರಾಹುಲ್ ಗಾಂಧಿಯವರು ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಆ ಮೂಲಕ ಪಕ್ಷಕ್ಕೆ ಅಗತ್ಯವಾದ ವೇಗವನ್ನು ನೀಡುತ್ತದೆ ಎಂದು ತೆಲಂಗಾಣ ಕಾಂಗ್ರೆಸ್ ಆಶಿಸುತ್ತಿದೆ. ತೆಲಂಗಾಣದಲ್ಲಿ ರಾಜಕೀಯದ ಹಣ್ಣು ನೇತಾಡುತ್ತಿದೆ. ಎರಡು ಅವಧಿಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೀಡಿದ ಆಡಳಿತದ ವಿರೋಧಿ ಅಲೆಯು ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಬಿಜೆಪಿಯು ಚುನಾವಣಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ಡಬಲ್ ಇಂಜಿನ್ ಸರ್ಕಾರದ ಮಂತ್ರ ಜಪಿಸಿದ ಜೆಪಿ ನಡ್ಡಾ
ತೆಲಂಗಾಣಕ್ಕೆ ಮೂರು ವರ್ಷಗಳ ನಂತರ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಅದಾಗಿ ಮರುದಿನವೇ ಮೆಹಬೂಬ್ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತೆಲಂಗಾಣ ಕೂಡ ಬದಲಾವಣೆಗೆ ಸಿದ್ಧವಾಗಿದೆ. ರಾಜ್ಯದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ವಿಧಾನಸಭೆ, ಟಿಆರ್ಎಸ್ 88 ಮತ್ತು ಕಾಂಗ್ರೆಸ್ 19. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎರಡು ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.