ದಲಿತನನ್ನು ಹೆಗಲ ಮೇಲೆ ಹೊತ್ತು ಮೆರೆದಾಡಿಸಿದ ಅರ್ಚಕ
ಹೈದರಾಬಾದ್, ಏಪ್ರಿಲ್ 18: ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ, ಮೇಲ್ವರ್ಗದವರಿಂದ ಅನ್ಯಾಯದ ಸುದ್ದಿಗಳು ಬರುತ್ತಿರುವಾಗ, ಹೈದರಾಬಾದಿನಲ್ಲಿ ದಲಿತರೊಬ್ಬರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ ಸುದ್ದಿ ಬಂದಿದೆ.
ಸುಮಾರು 3000 ವರ್ಷಗಳಷ್ಟು ಹಿಂದಿನ ಸಂಪ್ರದಾಯದಂತೆ ಮುನಿ ವಾಹನ ಸೇವೆಯ ಅಂಗವಾಗಿ ಈ ಕಾರ್ಯ ನೆರವೇರಿಸಲಾಗಿದೆ. ಚಿಲ್ಕೂರು ಬಾಲಾಜಿ ದೇಗುಲದ ಅರ್ಚಕ ಸಿಎಸ್ ರಂಗರಾಜನ್ ಅವರು ಆದಿತ್ಯ ಪರಸ್ರಿ ಎಂಬಾತನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ರಾಜಬೀದಿಯಲ್ಲಿ ಮೆರವಣಿಗೆ ಸಮೇತ ದೇವರ ಸನ್ನಿಧಿ ಬಳಿಗೆ ಕರೆ ತಂದರು.
ಮುನಿವಾಹನ ಸೇವೆ: ಸುಮಾರು 2700 ವರ್ಷಗಳಿಗೂ ಅಧಿಕ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ. ಸಮಾಜದಲ್ಲಿ ಸಾಮರಸ್ಯ ನೆಲೆಸಿದೆ ಎಂದು ತೋರಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ.
ಆದಿತ್ಯ ಅವರಿಗೆ ದಲಿತ ಎಂಬ ಕಾರಣಕ್ಕೆ ದೇಗುಲ ಪ್ರವೇಶ ನಿರಾಕರಿಸಲಾಗಿತ್ತು. ಈ ಪದ್ಧತಿಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿ, ಇನ್ನಾದರೂ ದೇವರ ಮುಂದೆ ನಾವೆಲ್ಲರೂ ಸಮಾನರು, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಎಂಬ ಸಂದೇಶ ಸಾರೋಣ ಎಂದಿದ್ದಾರೆ.