ಟಿಡಿಪಿ ಜತೆ ಕೈ ಮೈತ್ರಿ, ಪಕ್ಷ ತೊರೆಯಲು ಚಿರಂಜೀವಿ ನಿರ್ಧಾರ
ಹೈದರಾಬಾದ್, ನವೆಂಬರ್ 11: ತೆಲಂಗಾಣ ವಿಧಾನಸಭೆ ಹಾಗೂ ಮುಂಬರುವ ಆಂಧ್ರಪ್ರದೇಶದ ಚುನಾವಣೆಯಲ್ಲಿ ತೆಲುಗುದೇಶಂ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದಕ್ಕೆ ನಟ, ರಾಜಕಾರಣಿ ಚಿರಂಜೀವಿ ಅವರು ಸಿಟ್ಟಿಗೆದ್ದಿದ್ದಾರೆ.
ಈ ಮೈತ್ರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಿರಂಜೀವಿ, ತೆಲುಗುದೇಶಂ ಪಕ್ಷದ ಜತೆಗಿನ ಮೈತ್ರಿಯನ್ನು ಅನೈತಿಕ ಎಂದು ಕರೆದಿದ್ದು, ಶೀಘ್ರದಲ್ಲೇ ಪಕ್ಷವನ್ನು ತೊರೆಯಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಎನ್ ಟಿಆರ್ ಅಳಿಯ ಈಗ ಕಾಂಗ್ರೆಸ್ ದೋಸ್ತಿ, ಏನಾಯ್ತು ತೆಲುಗರ ಸ್ವಾಭಿಮಾನ?
ನವೆಂಬರ್ 1ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರು. 2019ರ ಲೋಕಸಭಾ ಚುನಾವಣೆ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಜತೆಯಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸುವ ಸುದ್ದಿ ಬಂದ ಬಳಿಕ ಚಿರಂಜೀವಿ ಅವರು ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ರಾಜೀನಾಮೆಯನ್ನು ಸಲ್ಲಿಸುವ ಬಗ್ಗೆ, ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಚಿರಂಜೀವಿ ಅವರು ಕಾಂಗ್ರೆಸ್ ತೊರೆದು ಪವನ್ ಕಲ್ಯಾಣ್ ಅವರ ಜನ ಸೇನಾ ಪಾರ್ಟಿ ಸೇರಲಿದ್ದಾರೆ ಎಂಬ ಸುದ್ದಿಯಿದೆ.