ಟಿಕ್ ಟಾಕ್ ಗೆಳೆಯನ ಕಿರುಕುಳ, ನಟಿ ಆತ್ಮಹತ್ಯೆಗೆ ಶರಣು
ಹೈದರಾಬಾದ್, ಸೆ. 9: ತೆಲುಗು ಕಿರುತೆರೆ ಲೋಕದ ಜನಪ್ರಿಯ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರದಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
ಮನಸು ಮಮತಾ, ಮೌನರಾಗಂ ಮುಂತಾದ ಸೀರಿಯಲ್ ಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಶ್ರಾವಂತಿ ಸಾವಿಗೆ ಗೆಳೆಯ ದೇವರಾಜು ರೆಡ್ಡಿಯೇ ಕಾರಣ ಎಂದು ಶ್ರಾವಂತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
''ನಾನು ಕೇಳಿದ್ದಷ್ಟು ಹಣ ಕೊಡು ಇಲ್ಲದಿದ್ದರೆ ನಮ್ಮಿಬ್ಬರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಬಿಡುತ್ತೇನೆ'' ಎಂದು ಶ್ರಾವಣಿಗೆ ದೇವರಾಜು ರೆಡ್ಡಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ.
ವೆಂಕಟೇಶ್ವರ ಭಕ್ತಿ ಚಾನೆಲ್ಗೆ ಪತ್ರಕರ್ತೆ ಸ್ವಪ್ನ ಸುಂದರಿ ನಿರ್ದೇಶಕಿಯಾಗಿ ನೇಮಕ
ಉಸ್ಮಾನಿಯಾ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಹೈದರಾಬಾದಿನ ಎಸ್ಸಾರ್ ನಗರ ವ್ಯಾಪ್ತಿಯ ಮಥುರಾನಗರ ವಸತಿ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿ ಶ್ರಾವಣಿ ವಾಸಿಸುತ್ತಿದ್ದರು. ದೇವರಾಜು ರೆಡ್ಡಿ ಆಕೆ ಮನೆಗೆ ಬಂದು ಹೋಗಿದ್ದನ್ನು ನೋಡಿದ್ದಾಗಿ ನೆರೆಮನೆಯವರು ಹೇಳಿಕೆ ನೀಡಿದ್ದಾರೆ. ದೇವರಾಜು ರೆಡ್ಡಿ ಸದ್ಯ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಟಿಕ್ ಟಾಕ್ ಗೆಳೆತನ
ಟಿಕ್ ಟಾಕ್ ವಿಡಿಯೋಗಳ ಮೂಲಕ ದೇವರಾಜು ರೆಡ್ಡಿ ಅಲಿಯಾಸ್ ಸನ್ನಿ ಎಂಬಾತನ ಪರಿಚಯ ಮಾಡಿಕೊಂಡ ಶ್ರಾವಣಿ ಕಿರುಕುಳದಿಂದಲೇ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂಬ ಆರೋಪವಿದೆ. ಕಾಕಿನಾಡದ ಗೊಲ್ಲಪ್ರೊಲು ಮೂಲದ ದೇವರಾಜು ರೆಡ್ಡಿ ಕೆಲ ವರ್ಷಗಳಿಂದ ಶ್ರಾವಂತಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದ. ನನಗೆ ಯಾರೂ ಇಲ್ಲ ನಾನು ಅನಾಥ ಎಂದು ಹೇಳಿ ಆಕೆಯನ್ನು ಮರಳು ಮಾಡಿದ್ದ.
ಕಳೆದ ಕೆಲ ತಿಂಗಳುಗಳಿಂದ ಶ್ರಾವಣಿಗೆ ಕಿರುಕುಳ ನೀಡತೊಡಗಿದ್ದ. ಈ ಬಗ್ಗೆ ಯಾರಲ್ಲೂ ಆಕೆ ಹೇಳಿಕೊಂಡಿರಲಿಲ್ಲ. ನೋವು ತಡೆದುಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಎಸ್ ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮನೆಯಲ್ಲಿ ಜಗಳ
ಎಸ್. ಆರ್ ನಗರ ಪೊಲೀಸ್ ಇನ್ಸ್ ಪೆಕ್ಟರ್ ನರಸಿಂಹ ರೆಡ್ಡಿ ಮಾತನಾಡಿ, ಪ್ರಾಥಮಿಕ ತನಿಖೆ ಬಳಿಕ ಘಟನೆ ನಡೆದ ರಾತ್ರಿ ದೇವರಾಜು ರೆಡ್ಡಿಗೆ ಶ್ರಾವಣಿ ಹಣ ನೀಡಿರುವ ಬಗ್ಗೆ ಮನೆಯಲ್ಲಿ ಜಗಳವಾಗಿದೆ. ಶ್ರಾವಣಿಯನ್ನು ಅವರ ತಾಯಿ ಹಾಗೂ ಸೋದರ ಚೆನ್ನಾಗಿ ಬೈದಿದ್ದಾರೆ. ಇದೇ ನೋವಿನಲ್ಲಿ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಶ್ರಾವಣಿ ತಡ ರಾತ್ರಿ ಟಾಯ್ಲೆಟ್ ಗೆ ಹೋಗಿ ಬಂದ ಸದ್ದು ಕೇಳಿಸಿದೆ. ನಂತರ ಯಾಕೋ ಅನುಮಾನ ಬಂದು ಬಾಗಿಲು ಬಡಿದಾಗ ಬಾಗಿಲು ಒಳಗಿನಿಂದ ಹಾಕಿಕೊಂಡಿರಲಾಗಿರುತ್ತದೆ. ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶ್ರಾವಣಿ ಪತ್ತೆಯಾಗುತ್ತಾಳೆ.
ಪೊಲೀಸರು ಕ್ರಮ ಕೈಗೊಂಡಿರಲಿಲ್ಲ
ದೇವರಾಜು ರೆಡ್ಡಿ ಬೆದರಿಕೆ ಬಗ್ಗೆ ಜೂನ್ 22ರಂದು ಶ್ರಾವಣಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ದೂರಿನಲ್ಲಿ ಮಾನಸಿಕ ಕಿರುಕುಳ ಎಂದಷ್ಟೆ ಉಲ್ಲೇಖಿಸಿದ್ದಳು, ಮದುವೆಯಾಗುವುದಾಗಿ ಮೋಸ ಮಾಡಿದ್ದನ್ನು ಹೇಳಿದ್ದಳು ಆದರೆ, ಆತ ಯಾವ ರೀತಿ ಬೆದರಿಕೆ ಒಡ್ಡಿದ್ದ ಎಂಬುದನ್ನು ತಿಳಿಸಿರಲಿಲ್ಲ. ಇಬ್ಬರ ಖಾಸಗಿ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಎಲ್ಲಾ ಡೀಲಿಟ್ ಮಾಡ್ತೇನೆ
ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕಬಾರದು ಎಂದರೆ 1ಲಕ್ಷ ರು ಕೊಡು ಎಂದು ಪೀಡಿಸುತ್ತಿದ್ದ. ಹಣ ನೀಡಿದರೆ, ಎಲ್ಲವನ್ನು ಡಿಲೀಟ್ ಮಾಡುವ ಭರವಸೆ ನೀಡಿದ್ದ. ಇದನ್ನು ನಂಬಿದ್ದ ಶ್ರಾವಣಿ ಗೂಗಲ್ ಪೇ ಮೂಲಕ 1 ಲಕ್ಷ ರು ನೀಡಿದ್ದಳು. ಆದರೆ, ಹಣ ಬಂದ ಬಳಿಕ ಫೋಟೋ, ವಿಡಿಯೋ ಡಿಲೀಟ್ ಮಾಡಲಿಲ್ಲ ಬದಲಿಗೆ ಇನ್ನಷ್ಟು ಹಣ ನೀಡುವಂತೆ ಹೆಚ್ಚು ಹೆಚ್ಚು ಪೀಡಿಸತೊಡಗಿದ್ದ. ಈ ವಿಷಯವಾಗಿ ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.