ತಿರುಪತಿ ತಿಮ್ಮಪ್ಪನ ಒಡವೆಗಳು ಮಾಧ್ಯಮದೆದುರು ಪ್ರದರ್ಶಿಸಲು ನಿರ್ಧಾರ
Recommended Video
ಹೈದರಾಬಾದ್, ಜೂನ್ 25: ಹಣಕಾಸಿನ ಅವ್ಯವಹಾರ ಹಾಗೂ ದೇವರ ಒಡವೆಗಳನ್ನು ಕದ್ದು ಮಾರಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಆಡಳಿತ ಮಂಡಳಿ ನಿರ್ಧರಿಸಿದ್ದು, ಜೂನ್ 28ರಂದು ದೇವಾಲಯದ ಒಡವೆಗಳನ್ನು ಮಾಧ್ಯಮಗಳ ಎದುರು ಪ್ರದರ್ಶಿಸಲು ತೀರ್ಮಾನ ಮಾಡಲಾಗಿದೆ.
ಈ ಬಗ್ಗೆ ಟಿಟಿಡಿ ಅಧ್ಯಕ್ಷ ಸುಧಾಕರ್ ಯಾದವ್ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಿಗಾಗಿ ಒಡವೆಗಳನ್ನು ಪ್ರದರ್ಶಿಸಲಾಗುವುದು. ಆಗಲಾದರೂ ಟಿಟಿಡಿ ವಿರುದ್ಧದ ದುರುದ್ದೇಶಪೂರಿತ ತಪ್ಪು ಮಾಹಿತಿಗಳ ಬಗ್ಗೆ ಗೊಂದಲ ಪರಿಹಾರ ಆಗಬಹುದು ಎಂದಿದ್ದಾರೆ. ಈ ವಿಚಾರವಾಗಿ ಮಂಗಳವಾರದಂದು ಟಿಟಿಡಿ ಸಭೆ ನಡೆಸಿ, ಆಭರಣ ಪ್ರದರ್ಶನ ಹೇಗೆ ಆಯೋಜಿಸುವುದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ
ತಿರುಪತಿ ತಿಮ್ಮಪ್ಪನ 'ಮಾಣಿಕ್ಯ' ಮಿಸ್ಸಿಂಗ್ : ಹೊಸ ಬಾಂಬ್ ಸಿಡಿಸಿದ ರೆಡ್ಡಿ
ಟಿಟಿಡಿ ವಿರುದ್ಧ ಹಣಕಾಸು ದುರುಪಯೋಗ ಹಾಗೂ ಹಳೇ ಒಡವೆ ಕದ್ದ ಬಗ್ಗೆ ಟಿಟಿಡಿಯಲ್ಲಿ ಈ ಹಿಂದೆ ಮುಖ್ಯ ಅರ್ಚಕರಾಗಿದ್ದ ರಮಣ ದೀಕ್ಷಿತಲು ಆರೋಪ ಮಾಡಿದ್ದರು. ಆಭರಣ ಕದ್ದು, ಜಿನಿವಾದಲ್ಲಿ ಹರಾಜು ಹಾಕಲಾಗಿದೆ ಎಂದು ಕಳೆದ ಮೇ ತಿಂಗಳಲ್ಲಿ ಗಂಭೀರ ಆರೋಪ ಮಾಡಿದ್ದರು. ಆ ನಂತರ ದೀಕ್ಷಿತಲು ವಿರುದ್ಧ ಟಿಟಿಡಿ ನೂರು ಕೋಟಿ ರುಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿತ್ತು.
ಮೊದಲಿಗೆ ದೀಕ್ಷಿತಲು ಆರೋಪವನ್ನು ಟಿಟಿಡಿ ನಿರಾಕರಿಸಿತು. ಹಾಗೂ ರಾಜರುಗಳು ದೇವರಿಗಾಗಿ ನೀಡಿದ ಒಡವೆಗಳನ್ನು ಪ್ರದರ್ಶನಕ್ಕೆ ಇಡಲು ಆಗಮಶಾಸ್ತ್ರದಲ್ಲಿ ಅವಕಾಶ ಇಲ್ಲ ಎಂಬ ಬಗ್ಗೆ ಕೂಡ ಚರ್ಚೆಯಾಯಿತು.
ಈಚೆಗೆ ದೀಕ್ಷಿತಲು ಆರೋಪಕ್ಕೆ ಜನಸೇನಾ ಮುಖ್ಯಸ್ಥ -ನಟ ಪವನ್ ಕಲ್ಯಾಣ್ ರ ಧ್ವನಿ ಕೂಡ ಸೇರಿತ್ತು. ದೇವಸ್ಥಾನದ ಒಡವೆಗಳನ್ನು ಖಾಸಗಿ ವಿಮಾಣದಲ್ಲಿ ಕಳ್ಳ ಸಾಗಣೆ ಮಾಡಿ, ವಿದೇಶದಲ್ಲಿ ಮಾರಲಾಗಿದೆ. ಅದರ ಬಗ್ಗೆ ಟಿಡಿಪಿ ನಾಯಕರಿಗೆ ಗೊತ್ತಿದೆ ಎಂದು ಆರೋಪಿಸಿದ್ದರು.
ಒಡವೆಗಳನ್ನು ಹೇಗೆ ಕಳ್ಳದಾಗಣೆ ಮಾಡಲಾಗಿದೆ ಎಂಬ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದರು.