ತೆಲಂಗಾಣ ಸಾರಿಗೆ ಮುಷ್ಕರಕ್ಕೆ ಇಬ್ಬರು ನೌಕರರು ಬಲಿ, ಉದ್ವಿಗ್ನ ಪರಿಸ್ಥಿತಿ
ಹೈದರಾಬಾದ್, ಅಕ್ಟೋಬರ್ 14: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸಿರುವ ಮುಷ್ಕರ ಪ್ರತಿಭಟನೆಗೆ ಇಬ್ಬರು ನೌಕರರು ಬಲಿಯಾಗಿದ್ದಾರೆ. ಕೆ ಚಂದ್ರಶೇಖರ್ ರಾವ್ ಸರ್ಕಾರವು ಬರೋಬ್ಬರಿ 48000 ಮಂದಿ ನೌಕರರನ್ನು ಕೆಲಸದಿಂದಲೇ ವಜಾಗೊಳಿಸಿದ ಬಳಿಕವೂ ಮುಷ್ಕರ ಮುಂದುವರೆದಿದೆ.
Recommended Video
ತೆಲಂಗಾಣ ರಸ್ತೆ ಸಾರಿಗೆಯ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ 49,340 ಮಂದಿ ನೌಕರರು ಭಾಗವಹಿಸಿದ್ದರು. ಇದರಲ್ಲಿ 48,000 ನೌಕರರನ್ನು ಸೇವೆಯಿಂದ ಏಕಾ-ಏಕಿ ವಜಾ ಮಾಡಲಾಗಿದೆ.
48000 ನೌಕರರನ್ನು ಕೆಲಸದಿಂದ ವಜಾಗೊಳಿಸಿದ ತೆಲಂಗಾಣ ಸಿಎಂ
ಶೀಘ್ರದಲ್ಲಿಯೇ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ನೌಕರರನ್ನು ಸೇರಿಸಿಕೊಳ್ಳುವ ನೇಮಕಾತಿ ಪ್ರತಿಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಆದರೆ ವಜಾಗೊಂಡಿರುವ ನೌಕರರು ಪ್ರತಿಭಟನೆ ಆರಂಭಿಸಿದ್ದು, ಅವರಿಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ಅಕ್ಟೋಬರ್ 19ರಂದು ತೆಲಂಗಾಣ ಬಂದ್
ಇಬ್ಬರು ಸಾರಿಗೆ ನೌಕರರು(ಓರ್ವ ಚಾಲಕ, ಓರ್ವ ಕಂಡೆಕ್ಟರ್) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಪ್ರತಿಭಟನಾಕಾರರ ಜತೆ ಮಾತನಾಡಲು ತೆಲಂಗಾಣ ಸರ್ಕಾರ ಇನ್ನೂ ಮುಂದಾಗುತ್ತಿಲ್ಲ. ಹೀಗಾಗಿ ವಿವಿಧ ಕಾರ್ಮಿಕ ಸಂಘಟನೆಗಳು ಅಕ್ಟೋಬರ್ 19ರಂದು ತೆಲಂಗಾಣ ಬಂದ್ಗೆ ಕರೆ ನೀಡಿವೆ. ಸಾರಿಗೆ ನೌಕರರ ಜತೆ ಮಾತನಾಡಲು ಮುಂದಾಗದ ಸರ್ಕಾರ, ಅಕ್ಟೋಬರ್ 19ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಏಕಾಏಕಿ 48 ಸಾವಿರ ಸಾರಿಗೆ ನೌಕರರನ್ನು ವಜಾಗೊಳಿಸಿದ ಹಿನ್ನೆಲೆ ತೆಲಂಗಾಣದ ಬಹುತೇಕ ಸರ್ಕಾರಿ ಬಸ್ಗಳು ಸ್ಥಗಿತಗೊಂಡಿವೆ.
ಮುಷ್ಕರಕ್ಕೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಬೆಂಬಲ
ತಮಗಾದ ಅನ್ಯಾಯ ಸರಿಪಡಿಸುವಂತೆ ಚಾಲಕ ಶ್ರೀನಿವಾಸ ರೆಡ್ಡಿ (48) ಹಾಗೂ ಸುರೇಂದ್ರ ಗೌಡ (36) ಸಾವಿಗೆ ಶರಣಾಗಿದ್ದಾರೆ. ಆದರೆ ತೆಲಂಗಾಣ ಸರ್ಕಾರ ತನ್ನ ಹಠ ಮುಂದುವರೆಸಿದ್ದು, ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಲು ಮುಂದಾಗಿಲ್ಲ. ಮುಷ್ಕರ ನಿರತ ಕಾರ್ಮಿಕರು 26 ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಕ್ಟೋಬರ್ 19ರಂದು ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಬೆಂಬಲವೂ ಸಿಕ್ಕಿದೆ.
ಇಬ್ಬರು ಸಾರಿಗೆ ನೌಕರರು ಬಲಿ
ತೆಲಂಗಾನ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಚಾಲಕ ಶ್ರೀನಿವಾಸ್ ರೆಡ್ಡಿ ಅವರು ಶನಿವಾರದಂದು ಬೆಂಕಿ ಹಚ್ಚಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರದಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಇನ್ನೊಂದು ಪ್ರಕರಣ್ದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ರಾಣಿಗಂಜ್ ಬಸ್ ಡಿಪೋ ಕಂಡೆಕ್ಟರ್ ಸುರೇಂದ್ರ ಗೌಡ ಎಂಬಾತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳ ಸಂಬಳ ಸಿಗದ ಕಾರಣ ಮನೆ ಮೇಲೆ ಪಡೆದಿದ್ದ ಸಾಲದ ಇಎಂಐ ಕಟ್ಟಲು ಆಗಿರಲಿಲ್ಲ. ಸಾಲಕ್ಕೆ ನೀಡಿದ ಚೆಕ್ ಬೌನ್ಸ್ ಆಗಿತ್ತು. ಇದರಿಂದ ನೊಂದು ನೇನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಮ್ಮಂನಲ್ಲಿ ಉದ್ವಿಗ್ನಗೊಂಡ ಪರಿಸ್ಥಿತಿ
ಶ್ರೀನಿವಾಸ ರೆಡ್ಡಿ ಸಾವಿನ ನಂತರ ಖಮ್ಮಂ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದೇ ಡಿಪೋದ ಮತ್ತೊಬ್ಬ ಚಾಲಕ ವೆಂಕಟೇಶ್ವರ ಚಾರಿ ಕೂಡಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ತಕ್ಷಣವೇ ಇತರೆ ನೌಕರರು ಅವರನ್ನು ರಕ್ಷಿಸಿದ್ದಾರೆ.
ಅಕ್ಟೋಬರ್ 19ರಂದು ರಾಜ್ಯವ್ಯಾಪಿ ಸಂಪೂರ್ಣ ಬಂದ್ ಜೊತೆಗೆ ವಾರ ಪೂರ್ತಿ ಪ್ರತಿಭಟನೆ ನಡೆಸಲು ಟಿಎಸ್ ಆರ್ ಟಿಸಿಯ ಜಂತಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಈ ನಡುವೆ ತಾತ್ಕಾಲಿಕವಾಗಿ ನೌಕರರನ್ನು ನೇಮಿಸಿಕೊಳ್ಳಲು ಕೆ ಚಂದ್ರಶೇಖರ್ ರಾವ್ ಮುಂದಾಗಿದ್ದಾರೆ.