ಕಾಂಗ್ರೆಸ್ ಜೊತೆ ಮೈತ್ರಿಗೆ ತೆರೆಮರೆಯ ಪ್ರಯತ್ನ ನಡೆಸಿದ್ದರೇ ಕೆಸಿಆರ್?
ಹೈದರಾಬಾದ್, ಮೇ 11: ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ನಾಯಕ ಕೆ ಚಂದ್ರಶೇಖರ್ ರಾವ್ ಅವರು ಏಪ್ರಿಲ್ 11 ರಂದು ತೆಲಂಗಾಣ, ಆಂಧ್ರಪ್ರದೇಶದಲ್ಲಿ ಲೋಕಸಭೆಗೆ ಮತದಾನ ನಡೆದಾಗಿನಿಂದ ಸಿಕ್ಕಾಬಟ್ಟೆ ಚಟುವಟಿಕೆಯಿಂದಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿದ್ದಾರೆ, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಆದರೆ ಈ ಎಲ್ಲಕ್ಕೂ ಮುನ್ನ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರಾ? ಚುನಾವಣೆ ನಡೆದ ಕೇವಲ ಹತ್ತು ದಿನಗಳ ನಂತರ ಟಿಆರ್ ಎಸ್ ನ ಹಿರಿಯ ಸಂಸದರೊಬ್ಬರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದರು. ಕಾಂಗ್ರೆಸ್-ಟಿಆರ್ ಎಸ್ ಮೈತ್ರಿಯ ಬಗ್ಗೆ ಚರ್ಚೆ ನಡೆಸಿದ್ದಾಗಿ ಸ್ವತಃ ಆ ಸಂಸದರೇ ಹೇಳಿದ್ದಾರೆ.
ಮೇ 21 ರಂದು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ, ಏನದು?
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸಂಯುಕ್ತ ರಂಗವನ್ನು ರಚಿಸಲು ಹೊರಟಿದ್ದ ಕೆ.ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಎರಡನ್ನೂ ದೂರ ಇಟ್ಟು ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ ಮಹಾಘಟಬಂಧನ ಸೃಷ್ಟಿಯಾದಾಗ, ಕಾಂಗ್ರೆಸ್ ಜೊತೆ ಬಿಜೆಪಿ ವಿರೋಧಿ ಪಕ್ಷಗಳೆಲ್ಲವೂ ಒಂದಾದಾಗ ನಡೆದ ಯಾವ ಸಭೆಗಳಲ್ಲೂ ಕೆ ಸಿಆರ್ ಆಗಲೀ, ಟಿಆರ್ ಎಸ್ ನ ಯಾವುದೇ ಸದಸ್ಯರಾಗಲೀ ಭಾಗವಹಿಸಿರಲಿಲ್ಲ. ಆ ಮೂಲಕ ತಮ್ಮ ಬೆಂಬಲ ಮಹಾಘಟಬಂಧನಕ್ಕಿಲ್ಲ ಎಂಬ ಸಂದೇಶ ನೀಡಿದ್ದರು ಕೆಸಿಆರ್. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ಸಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೆಸಿಆರ್ ಭೇಟಿಗೆ ಸ್ಟಾಲಿನ್ ಒಲ್ಲೆ ಎಂದಿದ್ದೇಕೆ? ಕಾರಣ ಹಲವು!
ತೆಲಂಗಾಣದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಎಲ್ಲವನ್ನೂ ಗೆದ್ದರೂ, ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಕೇಂದ್ರದಲ್ಲಿ ಮೈತ್ರಿ ಮಾಡಿಕೊಳ್ಳದೆ ಇದ್ದರೆ ಕೆಸಿಆರ್ ಅವರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಅದನ್ನು ಅರಿತ ಕೆಸಿಆರ್ ಇದೀಗ ಕಾಂಗ್ರೆಸ್ ಬಾಗಿಲು ತಟ್ಟಲು ಮುಂದಾಗಿದ್ದಾರೆ ಎಂಬ ವದಂತಿ ಹಬ್ಬಿದೆ.