ಮತದಾರರಿಗೆ ಲಂಚ: ಟಿಆರ್ಎಸ್ ಸಂಸದೆ ಕವಿತಾಗೆ ಜೈಲು ಶಿಕ್ಷೆ
ಹೈದರಾಬಾದ್, ಜುಲೈ 25: ಮತದಾರರಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಹಾಲಿ ಸಂಸದೆಯೊಬ್ಬರಿಗೆ ಜೈಲುಶಿಕ್ಷೆ ಪ್ರಕಟಿಸಲಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಕವಿತಾ ಮಲೋತ್ ಅವರು ಸಾರ್ವತ್ರಿಕ ಚುನಾವಣೆಗೂ ಮುನ್ನ ಮತದಾರರಿಗೆ ಲಂಚ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಶಿಕ್ಷೆ ನೀಡಿದೆ.
ವೋಟಿಗಾಗಿ ನೋಟು ಪ್ರಕರಣದಲ್ಲಿ ಸಂಸದೆ ಕವಿತಾ ಮಲೋತ್ ಅವರಿಗೆ 6 ತಿಂಗಳುಗಳ ಕಾಲ ಜೈಲುಶಿಕ್ಷೆ ಹಾಗೂ 10, 000 ಮೊತ್ತ ದಂಡ ವಿಧಿಸಿದೆ. ಆದರೆ, ಕವಿತಾ ಹಾಗೂ ಸಹಚರ ಶೌಕತ್ ಅಲಿಗೆ ಜಾಮೀನು ಮಂಜೂರಾಗಿದ್ದು, ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯೊಬ್ಬರು ಶೌಕತ್ ಅಲಿಯು ಮತದಾರರಿಗೆ 500 ರು ಹಂಚುವಾಗ ರೆಡ್ ಹ್ಯಾಂಡಾಗಿ ಹಿಡಿದು, ಪ್ರಕರಣ ದಾಖಲಿಸಿದ್ದರು. 209ರಲ್ಲಿ ಭದ್ರಾದ್ರಿ -ಕೊಥಗುಡೆಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕವಿತಾ ಪರವಾಗಿ ಶೌಕತ್ ಹಣ ಹಂಚಿದ್ದರು. ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದರು. ಶೌಕತ್ ಎ1 ಹಾಗೂ ಕವಿತಾ ಎ2 ಎಂದು ಹೆಸರಿಸಲಾಗಿದೆ.
ಜನಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವಂತೆ ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಜರುಗಿಸಲಾಗಿದೆ. ಬಿಜೆಪಿ ಶಾಸಕ ರಾಜ ಸಿಂಗ್ ಹಾಗೂ ಟಿಆರ್ಎಸ್ ಶಾಸಕ ದಾನಂ ನಾಗೇಂದ್ರ ಕೂಡಾ ಇದೇ ರೀತಿ ಪ್ರಕರಣದಲ್ಲಿ ದಂಡ ಕಟ್ಟಿದ ಉದಾಹರಣೆಗಳಿವೆ.