ಬೆಂಗಳೂರಿನಲ್ಲೂ ಸಿಗುತ್ತೆ ತಿರುಪತಿ ಲಡ್ಡು: ಬೆಲೆಯಲ್ಲಿ 50ರಷ್ಟು ಆಫರ್
ತಿರುಪತಿ, ಮೇ 21: ಕೊರೊನಾ ವೈರಸ್ ಲಾಕ್ಡೌನ್ ತಿರುಪತಿ ತಿಮ್ಮಪ್ಪನಿಗೂ ಕಾಡಿತ್ತು. ಹಲವು ದಿನಗಳಿಂದ ದೇವಸ್ಥಾನ ಮುಚ್ಚಲಾಗಿದ್ದು, ಭಕ್ತರಿಗೆ ದರ್ಶನ ಸಿಗುತ್ತಿಲ್ಲ. ವೆಂಕಟೇಶ್ವರನ ದೇಗುಲಕ್ಕೆ ಆಗಮಿಸುವ ಜನ ಸಂಖ್ಯೆ ನೋಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಸದ್ಯಕ್ಕೆ ತಿರುಮಲ ದರ್ಶನ ಇಲ್ಲ.
Recommended Video
ದೇವಸ್ಥಾನ ಮುಚ್ಚಿರುವುದರಿಂದ ಅನೇಕ ಭಕ್ತರು ತಿರುಪತಿ ಲಡ್ಡು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದ್ರೀಗ, ಟಿಟಿಡಿ ಮಂಡಳಿ ತಿರುಪತಿ ಲಡ್ಡುಗಳನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಇನ್ಮುಂದೆ ನೀವು ತಿರುಪತಿ ಲಡ್ಡು ತಿನ್ನಬೇಕು ಅಂದ್ರೆ ಅಲ್ಲೇ ಹೋಗಬೇಕಂತಿಲ್ಲ. ಬೆಂಗಳೂರಿನಲ್ಲೂ ಲಡ್ಡು ಲಭ್ಯವಾಗಲಿದೆ. ಅದು ಸಬ್ಸಿಡಿ ದರದಲ್ಲಿ. ಮುಂದೆ ಓದಿ....
ಶೇಕಡಾ 50 ರಷ್ಟು ಬೆಲೆ ಇಳಿಕೆ
ತಿರುಪತಿ ಲಡ್ಡು ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ. ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಲಾಕ್ಡೌನ್ ಮುಗಿಯವರೆಗೂ ತಿರುಪತಿ ಲಡ್ಡು ಬೆಲೆಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಿದೆ. ಅಂದ್ರೆ, 50 ರೂಪಾಯಿ ಬೆಲೆ ಬದಲು 25 ರೂಪಾಯಿಗೆ ಲಡ್ಡು ದೊರೆಯಲಿದೆ ಎಂದಿದ್ದಾರೆ.
ಲಾಕ್ಡೌನ್: ತಿರುಪತಿ ದೇವಸ್ಥಾನದ ಕಾರ್ಮಿಕರ ಆತಂಕ ದೂರ
ಬೇಡಿಕೆ ಹಿನ್ನೆಲೆ ಮಾರಾಟಕ್ಕೆ ತಯಾರಿ
ದೇವಸ್ಥಾನವಂತೂ ತೆರೆದಿಲ್ಲ, ಲಡ್ಡು ಆದರೂ ಮಾರಾಟ ಮಾಡಬಹುದು ಎಂದು ಭಕ್ತಾದಿಗಳು ಒತ್ತಾಯಿಸಿದ ಹಿನ್ನೆಲೆ ಲಡ್ಡು ಮಾರಾಟ ಮಾಡಲು ಮುಂದಾಗಿದೆ ಟಿಟಿಡಿ ಆಡಳಿತ ಮಂಡಳಿ. ಈ ಲಡ್ಡು 179 ಗ್ರಾಂ ತೂಕ ಇರುತ್ತೆ. ಒಂದು ಲಡ್ಡು ತಯಾರಿಸಲು 40 ರೂಪಾಯಿ ಖರ್ಚಾಗಲಿದೆ. ತಿರುಪತಿಯಲ್ಲಿ ಆ ಲಡ್ಡಿನ ಬೆಲೆ 50 ರೂಪಾಯಿ. ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಗುತ್ತಿತ್ತು. ಬಲ್ಕ್ನಲ್ಲಿ ತೆಗೆದುಕೊಳ್ಳುವ ಭಕ್ತಾದಿಗಳು ಅವಕಾಶ ನಿಡಲಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ನಲ್ಲಿ ಲಡ್ಡು ಸಿಗಲಿದೆ
ಲಡ್ಡು ಬೇಕು ಅಂದ್ರೆ ನೀವು ತಿರುಪತಿಗೆ ಹೋಗಬೇಕಿಲ್ಲ. ಲಾಕ್ಡೌನ್ ಮುಗಿಯವರೆಗೂ ಬೆಂಗಳೂರು, ಚೆನ್ನೈ, ಹೈದರಾಬಾದ್, ತೆಲಂಗಾಣದ ಟಿಟಿಡಿ ಕಲ್ಯಾಣ ಮಂಟಪಗಳು ಮತ್ತು ಮಾಹಿತಿ ಕೇಂದ್ರಗಳಲ್ಲಿ ಲಡ್ಡು ದೊರೆಯಲಿದೆ. 50 ರೂಪಾಯಿ ಬದಲು 25 ರೂಪಾಯಿಗೆ ಲಡ್ಡು ಸಿಗಲಿದೆ ಎಂದು ಟಿಟಿಡಿ ಸಂಸ್ಥೆ ಹೇಳಿದೆ. ಆದರೆ, ನಿಖರವಾದ ದಿನಾಂಕ ಘೋಷಿಸಿಲ್ಲ.
ಕೊರೊನಾ ಮುಂದೆ ತಿಮ್ಮಪ್ಪನೂ ಮಂಕು; ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ
ತಿರುಪತಿಗೆ ಹಣಕಾಸಿನ ಸಮಸ್ಯೆಯಾಗಿಲ್ಲ
ಇನ್ನು ಲಾಕ್ಡೌನ್ನಿಂದ ದೇವಸ್ಥಾನ ಮುಚ್ಚಿದೆ. ಇದು ಸಹಜವಾಗಿ ಆರ್ಥಿಕ ನಿರ್ವಹಣೆ ಮಂಡಳಿ ಮೇಲೆ ಪರಿಣಾಮ ಬೀರಿರುತ್ತೆ. ಈ ಬಗ್ಗೆ ಮಾತನಾಡಿದ ಟಿಟಿಡಿ ಮುಖ್ಯಸ್ಥ ''ನಮ್ಮ ಉದ್ಯೋಗಿಗಳಿಗೆ ಸಂಬಳ ಮತ್ತು ಪಿಂಚಣಿ ಪಾವತಿಸಲು ಅಥವಾ ದೇವಾಲಯದ ನಿರ್ವಹಣೆಗೆ ಯಾವುದೇ ಹಣದ ಕೊರತೆಯಿಲ್ಲ'' ಸ್ಪಷ್ಟಪಡಿಸಿದ್ದಾರೆ.
ಕಳೆದ ಏಪ್ರಿಲ್ಗಿಂತ ಈ ಸಲ ಆದಾಯ ಹೆಚ್ಚಳ
ಮಾರ್ಚ್ ತಿಂಗಳಿನಿಂದ ತಿರುಪತಿ ದೇವಸ್ಥಾನ ಮುಚ್ಚಿದೆ. ಭಕ್ತರು ಬಂದಿಲ್ಲ, ಹಾಗಾಗಿ ದೇವಸ್ಥಾನದ ಹುಂಡಿಗೆ ಕೊಡುಗೆಗಳು ಸಿಕ್ಕಿಲ್ಲ. ಆದರೆ, ಇ-ಹುಂಡಿ ಕೊಡುಗೆಗಳಲ್ಲಿ ಹೆಚ್ಚಿನ ಹಣ ಬಂದಿದೆ ಎಂದು ಟಿಟಿಡಿ ಸಂಸ್ಥೆ ತಿಳಿಸಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ 1.79 ಕೋಟಿ ಬಂದಿತ್ತು. ಆದರೆ, ಈ ವರ್ಷದ ಏಪ್ರಿಲ್ನಲ್ಲಿ 1.97 ಕೋಟಿ ಬಂದಿದೆ. ಅಲ್ಲಿಗೆ 18 ಲಕ್ಷ ರೂಪಾಯಿ ಹೆಚ್ಚಳ ಕಂಡಿದೆ.