ಹಳೆಯ ನೋಟುಗಳನ್ನೇನು ಮಾಡುವುದು?: ತಿರುಪತಿ ದೇವಸ್ಥಾನಕ್ಕೆ ಚಿಂತೆ
ಹೈದರಾಬಾದ್, ಸೆಪ್ಟೆಂಬರ್ 17: ಅಧಿಕ ಮುಖಬೆಲೆಯ ನೋಟುಗಳನ್ನ ರದ್ದುಗೊಳಿಸಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡು ನಾಲ್ಕು ವರ್ಷಗಳಾಗುತ್ತಾ ಬಂದರೂ ಅದರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತಿರುಪತಿ ತಿರುಮಲ ದೇವಸ್ಥಾನದ ಹುಂಡಿಗಳಲ್ಲಿ ಈಗಲೂ ಅಪನಗದೀಕರಣಗೊಂಡ ನೋಟುಗಳು ಕಾಣಿಕೆ ರೂಪದಲ್ಲಿ ಬೀಳುತ್ತಲೇ ಇವೆ. ದೊಡ್ಡ ಮೊತ್ತದ ಹಣವು ಈ ರೀತಿ ಟಿಟಿಡಿ ಹುಂಡಿಗಳನ್ನು ಸೇರಿದ್ದು, ಅವುಗಳ ನಿರ್ವಹಣೆಗೆ ಸಹಾಯ ಮಾಡುವಂತೆ ಟಿಟಿಡಿ, ಕೇಂದ್ರ ಸರ್ಕಾರದ ಮೊರೆ ಹೋಗಿದೆ.
ಭಕ್ತರು ಹುಂಡಿಗಳಲ್ಲಿ ಹಾಕಿದ 500 ಮತ್ತು 1000 ರೂ. ಮುಖಬೆಲೆಯ ಅಪನಗದೀಕರಣಗೊಂಡ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಠೇವಣಿ ಇರಿಸಲು ಅನುಮತಿ ನೀಡುವಂತೆ ಅದು ಕೇಂದ್ರ ಸರ್ಕಾರವನ್ನು ಕೋರಿದೆ. ಈ ನೋಟುಗಳನ್ನು ಟಿಟಿಡಿ ನಡೆಸುವ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಸಾಧ್ಯತೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರೆ ಮಾಡಿದ್ದ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ, ಅಪನಗದೀಕರಣಗೊಂಡ ನೋಟುಗಳನ್ನು ಆರ್ಬಿಐನಲ್ಲಿ ಠೇವಣಿ ಇರಿಸಲು ಕೇಂದ್ರ ಸರ್ಕಾರ ಸಹಾಯ ಮಾಡುವಂತೆ ಕೋರಿದ್ದಾರೆ. ಈ ನೋಟುಗಳನ್ನು ಭಕ್ತರು ಹುಂಡಿಗಳಲ್ಲಿ ಹಾಕಿರುವುದರಿಂದ ಅದು ತಮ್ಮ ನಿಯಂತ್ರಣದಾಚೆ ಸಂಗ್ರಹಗೊಂಡಿದೆ ಎಂದು ತಿಳಿಸಿದ್ದಾರೆ.
2016ರ ನವೆಂಬರ್ 8ರ ಮಧ್ಯರಾತ್ರಿಯಿಂದ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಪತ್ತೆಯಾಗುವ ನೋಟುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಗಿತ್ತು. ಆರ್ಬಿಐ ಮಾರ್ಗಸೂಚಿಯಂತೆ ಹಳೆಯ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದನ್ನು ಆಗಲೇ ನಿಲ್ಲಿಸಲಾಗಿತ್ತು. ಆದರೆ ಹುಂಡಿಯಲ್ಲಿ ಭಕ್ತರು ಹಾಕುವ ಹಳೆಯ ನೋಟುಗಳನ್ನು ನಿಯಂತ್ರಿಸುವುದು ಸಾಧ್ಯವಾಗಿಲ್ಲ.
ಟಿಟಿಡಿಯು ದೇಶದ ಅನೇಕ ಭಾಗಗಳಲ್ಲಿ ದೇವಸ್ಥಾನಗಳು ಹಾಗೂ ಹುಂಡಿಗಳನ್ನು ಹೊಂದಿದೆ. ಇವುಗಳಲ್ಲಿ ಅಧಿಕ ಮೊತ್ತದಲ್ಲಿ ಹಳೆಯ ನೋಟುಗಳು ಸಂಗ್ರಹವಾಗಿವೆ. ಈ ಹುಂಡಿ ಖಾತೆಗಳನ್ನು ಕೂಡ ವಿಭಿನ್ನ ಬ್ಯಾಂಕುಗಳಲ್ಲಿ ಇರಿಸಲಾಗಿದೆ. ಹೀಗಾಗಿ ಆರ್ಬಿಐ ಮಾರ್ಗಸೂಚಿಗೆ ಅನುಗುಣವಾಗಿ ವಿಭಿನ್ನ ಬ್ಯಾಂಕುಗಳ ಖಾತೆಗಳಲ್ಲಿ ಹಳೆಯ ನೋಟುಗಳನ್ನು ಇರಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ.