ತಿರುಮಲದಲ್ಲಿ ವಾರ್ಷಿಕ ಬ್ರಹ್ಮೋತ್ಸವ: ಅ 7, 8ರಂದು ವಿಶೇಷ ದರ್ಶನ ಇಲ್ಲ
ಹೈದರಾಬಾದ್, ಸೆಪ್ಟೆಂಬರ್ 28: ನಿವೇನಾದರೂ ಮುಂದಿನ ತಿಂಗಳು (ಅಕ್ಟೋಬರ್) ತಿರುಪತಿಗೆ ಹೋಗುವ ಆಲೋಚನೆಯಲ್ಲಿದ್ದರೆ ಈ ಸುದ್ದಿ ಓದಿ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಅಕ್ಟೋಬರ್ 7 ಹಾಗೂ 8ರಂದು 300 ರುಪಾಯಿ ಟಿಕೆಟ್ ನ ಶೀಘ್ರ ದರ್ಶನಕ್ಕೆ ಅವಕಾಶ ಇಲ್ಲ ಎಂದು ದೇವಸ್ಥಾನದ ಸಿಇಒ ಡಾ.ಡಿ.ಸಾಂಬಶಿವರಾವ್ ತಿಳಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಅಕ್ಟೋಬರ್ 7ರಂದು ಗರುಡಸೇವೆ ಹಾಗೂ 8ರಂದು ಪೆರಟ್ಟಾಸಿ ಇರುವುದರಿಂದ ಶೀಘ್ರ ದರ್ಶನಕ್ಕೆ ಅವಕಾಶ ಇಲ್ಲ. ಅಕ್ಟೋಬರ್ 3ರಿಂದ 11ರವರೆಗೆ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ. 7, 8ನೇ ತಾರೀಕು ಹೊರತುಪಡಿಸಿ ಬಾಕಿ ದಿನಗಳಲ್ಲಿ ಭಕ್ತರ ಸಂಖ್ಯೆಯನ್ನು ಆಧರಿಸಿ ನಿಗದಿತ ಸಂಖ್ಯೆಯ ಟಿಕೆಟ್ ಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.[ತಿಮ್ಮಪ್ಪನಿಗೆ ಹರಕೆ: 68 ಕೆಜಿ ಬೆಲ್ಲ ನೀಡಿದ ಸಿಂಧು-ಗೋಪಿಚಂದ್]
ಬ್ರಹ್ಮೋತ್ಸವದ ಒಂಬತ್ತು ದಿನಗಳಲ್ಲಿ ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ಸಣ್ಣ ವಯಸ್ಸಿನ ಮಕ್ಕಳಿರುವ ತಂದೆ-ತಾಯಿಗಳನ್ನು ಹೊರತುಪಡಿಸಿ ಯಾರಿಗೂ ವಿಶೇಷ ದರ್ಶನದ ಸೌಲಭ್ಯ ಇರೋದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಗಣ್ಯರಿಗಾಗಿ ಮೀಸಲಾದ ದರ್ಶನದ ಕಾಲಾವಧಿಯನ್ನೂ ರದ್ದುಗೊಳಿಸಲಾಗಿದೆ.[ತಿರುಪತಿಯಲ್ಲಿ ಉರುಳು ಸೇವೆ ಮಾಡಲು ಆಧಾರ್ ಕಾರ್ಡ್ ಕಡ್ಡಾಯ!]
ಸರಕಾರದ ಶಿಷ್ಟಾಚಾರದ ವ್ಯಾಪ್ತಿಗೆ ಒಳಪಡುವ ಅತಿ ಗಣ್ಯರಿಗೆ ಮಾತ್ರ ಅವಕಾಶವನ್ನು ನೀಡಲಾಗುವುದು ಎಂದು ಸಿಇಒ ಡಾ.ಡಿ.ಸಾಂಬಶಿವರಾವ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.