ಹೈದರಾಬಾದ್: ಬಿಸಿಯೂಟದ ಸಾಂಬಾರಿಗೆ ಮಗು ಬಿದ್ದು ಸಾವು
ಹೈದರಾಬಾದ್, ಡಿಸೆಂಬರ್ 25: ತೆಲಂಗಾಣದ ನಲಗೊಂಡ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸಿದ್ದಪಡಿಸಲಾಗಿದ್ದ ಸಿಬಿ ಸಾಂಬರ್ ನೊಳಗೆ 5 ವರ್ಷದ ಬಾಲಕ ಬಿದ್ದು ಸಾವಿಗೀಡಾದ ಘಟನೆ ಜರುಗಿದೆ.[ಮಕ್ಕಳೊಂದಿಗೆ ಸಾಲಿನಲ್ಲಿ ನಿಂತು ಬಿಸಿಯೂಟ ಸವಿದ ಸಿಇಓ]
ಇದಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಊಟಕ್ಕಾಗಿ ಬಾಲಕ ವಿದ್ಯಾರ್ಥಿಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದು, ನೂಕಾಟ ಉಂಟಾಗಿ ಬಿಸಿ ಸಾಂಬಾರ್ ಪಾತ್ರೆಯೊಳಗೆ ಬಿದ್ದಿದ್ದಾನೆ, ಸಾರು ಹೆಚ್ಚು ಬಿಸಿಯಾಗಿದ್ದ ಕಾರಣ ಬಾಲಕನ ದೇಹದ ಶೇ.70 ಭಾಗ ಬೆಂದು ಹೋಗಿದೆ. ಗಾಯಾಳಾಗಿದ್ದ ಆತನನ್ನು ನಲಗೊಂಡದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಹೈದರಾಬಾದಿಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಅಸು ನೀಗಿದ್ದಾನೆ ಎಂದು ನಕ್ರೆಕಲ್ ಪೊಲೀಸ್ ಠಾಣಾಧಿಕಾರಿ ವಿಶ್ವಪ್ರಸಾದ್ ತಿಳಿಸಿದರು.
ಈ ಸಂಬಂಧ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಸ್ಪಂಡ್ ಮಾಡಲಾಗಿದೆ. ಅಲ್ಲದೆ ಮೃತ ಬಾಲಕನ ತಾತ ನೀಡಿದ ದೂರಿನ ಮೇರೆಗೆ ಕತನ್ ಗೂರ್ ಪೊಲೀಸ್ ಠಾಣೆಯಲ್ಲಿ ಬಿಸಿಯೂಟ ತಯಾರಿಸುವ ಮೂರು ಮಂದಿ ಮಹಿಳೆಯರ ಬೇಜವಾಬ್ದಾರಿತನದ ದೂರನ್ನು ದಾಖಲಿಸಿದ್ದಾರೆ.[ಕಾಸರಗೋಡು: ಗಡಿನಾಡ ಮಕ್ಕಳಿಗೆ ಕೇರಳದ ಬಿಸಿಯೂಟ]
ಮೃತ ಬಾಲಕನ ಗ್ರಾಮಕ್ಕೆ ಭೇಟಿ ನೀಡಿರುವ ಜಿಲ್ಲಾ ಕಲೆಕ್ಟರ್ ಬಾಲಕನ ಕುಟುಂಬಕ್ಕೆ ರು 2 ಲಕ್ಷ ಪರಿಹಾರ ಘೋಷಿಸಿದ್ದಾರೆ ಹಾಗೂ ಆತನ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ಮತ್ತು ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.