ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಲು ಮನಸ್ಸು ಮಾಡದ ನಟಿ!
ಹೈದರಾಬಾದ್, ಆಗಸ್ಟ್ 10: ತೆಲಂಗಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಸುದ್ದಿ ಬಂದಿರುವ ಬೆನ್ನಲ್ಲೇ ಮತ್ತೊಂದು ಸುದ್ದಿ ಗಾಢವಾಗಿ ಹಬ್ಬಿದೆ. ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿಯೊಬ್ಬರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಇದೆ. ಆದರೆ, ಇದೆಲ್ಲ ಗಾಳಿಸುದ್ದಿ ಎಂದು ನಟಿ ಪರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಪಕ್ಷಗಳಿಗೆ ಈಗ ಸೆಲೆಬ್ರಿಟಿಗಳನ್ನು ಸೆಳೆಯುವ ದೊಡ್ಡ ಟಾಸ್ಕ್ ನೀಡಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡರು ನಟಿ ಜಯಸುಧಾರನ್ನು ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದು, ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಕೇಂದ್ರ ನಾಯಕತ್ವದ ಬಗ್ಗೆ ಭರವಸೆ ಮೂಡಿದ್ದು, ಬಿಜೆಪಿ ಸೇರಲು ಓಕೆ ಎಂದಿದ್ದಾರೆ, ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಆದರೆ, ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧರಿಸಿಲ್ಲ ಎಂದು ಜಯಸುಧಾ ಸ್ಪಷ್ಟಪಡಿಸಿದ್ದಾರೆ.
ತೆಲಂಗಾಣದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಮಾಸ್ಟರ್ ಪ್ಲಾನ್
ಆಗಸ್ಟ್ 21ರಂದು ಮುನುಗೊದೆ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ ಮಾಡಲಿದ್ದು, ಉಪ ಚುನಾವಣೆಯಲ್ಲದೆ ಮುಂಬರುವ ವಿಧಾನಸಭೆ ಚುನಾವಣೆಗೆ ರೂಪುರೇಷೆ ತಯಾರಿ ಮಾಡಿಕೊಳ್ಳಲು ಅಮಿತ್ ಶಾ ಸೂಚಿಸಿದ್ದಾರೆ.
ನಟಿ ಜಯಸುಧಾ
ನಟಿ ಜಯಸುಧಾ ಅವರಲ್ಲದೆ ಮುನುಗೋಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೊಮಟಿ ರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ಕೂಡಾ ಬಿಜೆಪಿ ಸೇರಲಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ತೊರೆದಿರುವ ರಾಜಗೋಪಾಲ್ ರೆಡ್ಡಿ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ತಮ್ಮ ನೋವು ತೋಡಿಕೊಂಡಿದ್ದರು. 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ಆದರೆ, ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ. ಕೆ ಚಂದ್ರಶೇಖರ್ ರಾವ್ ಹಾಗೂ ಕುಟುಂಬ ರಾಜಕೀಯದಿಂದ ತೆಲಂಗಾಣ ರಾಜ್ಯವನ್ನು ಮುಕ್ತಗೊಳಿಸುವ ಅಭಿಯಾನಕ್ಕೆ ಕಾಂಗ್ರೆಸ್ ಸೂಕ್ತ ಮನ್ನಣೆ ನೀಡಿಲ್ಲ ಎಂದಿದ್ದಾರೆ.
ಬಿಜೆಪಿ ಸೇರ್ಪಡೆ ಸಾಧ್ಯತೆ
ಬಿಜೆಪಿ ಶಾಸಕ ಹಾಗೂ ತೆಲಂಗಾಣದ ಮಾಜಿ ಸಚಿವ ಇ ರಾಜೇಂದ್ರ ಅವರು ಜಯಸುಧಾರನ್ನು ಬಿಜೆಪಿಗೆ ಕರೆತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಪಕ್ಷಕ್ಕೆ ಸೇರಲು ಕೆಲವು ಷರತ್ತುಗಳನ್ನು ಜಯಸುಧಾ ಮುಂದಿಟ್ಟಿದ್ದರು. ಇದಕ್ಕೆ ಕೇಂದ್ರ ನಾಯಕತ್ವ ಕೂಡಾ ಸಮ್ಮತಿಸಿದೆ ಎಂಬ ಸುದ್ದಿಯಿದೆ. ಆದರೆ, ಬಿಜೆಪಿ ಸೇರ್ಪಡೆ ಸಾಧ್ಯತೆ ಬಗ್ಗೆ ಜಯಸುಧಾ ಸ್ಪಷ್ಟನೆ ನೀಡಿದ್ದರೂ ಆಗಸ್ಟ್ 21ರೊಳಗೆ ಬದಲಾವಣೆ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರು ನಂಬಿದ್ದಾರೆ. ಈ ಹಿಂದೆ ಹಲವು ಪಕ್ಷಗಳನ್ನು ಬದಲಿಸಿರುವ ಜಯಸುಧಾ, ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಬಿಜೆಪಿ ಸೇರಿದರೆ ಅಚ್ಚರಿಯೇನಿಲ್ಲ ಎಂದು ವಿಶ್ಲೇಷಿಸಲಾಗಿದೆ.
ಹಲವು ಪಕ್ಷ ಬದಲಾಯಿಸಿರುವ ಜಯಸುಧಾ
ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಸಮಕ್ಷಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯಸುಧಾ ಸೇರ್ಪಡೆಗೊಂಡಿದ್ದರು. 2019ರಲ್ಲಿ ಸಿಕಂದ್ರಾಬಾದ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ದಾಖಲಿಸಿದ್ದರು. ವೈಎಸ್ ರಾಜಶೇಖರ್ ರೆಡ್ಡಿ ಅಕಾಲಿಕ ಮರಣ ನಂತರ ಕಾಂಗ್ರೆಸ್ ಪಕ್ಷದಿಂದ ಜಯಸುಧಾ ದೂರ ಉಳಿದರು. 2016ರಲ್ಲಿ ಎನ್ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ತೆಲುಗುದೇಶಂ ಪಾರ್ಟಿ ಸೇರ್ಪಡೆಗೊಂಡರು. ನಂತರ ಮತ್ತೊಮ್ಮೆ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಉಪಸ್ಥಿತಿಯಲ್ಲಿ ವೈಎಸ್ಸಾರ್ ಕಾಂಗ್ರೆಸ್ ಸೇರಿದ್ದರು.
ಮಾಜಿ ಶಾಸಕಿ ಜಯಸುಧಾ
2009 ರ ಚುನಾವಣೆಯಲ್ಲಿ ಸಿಕಂದರಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಜಯಸುಧಾ ಗೆದ್ದು 2014 ರ ಚುನಾವಣೆಯಲ್ಲಿ ಸೋತಿದ್ದು ಗೊತ್ತೇ ಇದೆ. ಕಿರುತೆರೆ, ಬೆಳ್ಳಿತೆರೆಯಲ್ಲಿ ಸಕ್ರಿಯರಾದ ಜಯಸುಧಾ ರಾಜಕಾರಣದಿಂದ ದೂರ ಉಳಿದಿದ್ದರು. ಇದೀಗ ಅವರು ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿದೆ. ಆದರೆ ಸುದ್ದಿಯನ್ನು ಜಯಸುಧಾ ಅಲ್ಲಗೆಳೆದಿದ್ದರೂ, ತೆಲಂಗಾಣ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲು ಜಯಸುಧಾ ಮತ್ತೆ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯಂತೂ ಸತ್ತಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆ ಬಿಜೆಪಿಗೆ ಗೆಲುವು
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 155 ವಾರ್ಡ್ಗಳ ಪೈಕಿ 48 ವಾರ್ಡ್ಗಳಲ್ಲಿ ಬಿಜೆಪಿ ಜಯಗಳಿಸಿತ್ತು.
ಕರೀಂನಗರ ಲೋಕಸಭಾ ವ್ಯಾಪ್ತಿಗೆ ಬರುವ ಹುಜುರಾಬಾದ್ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈಟಲ ರಾಜೇಂದರ್ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ನೋಟಾಗಿಂತಲೂ ಕಮ್ಮಿ ಮತ ಪಡೆದಿದ್ದ ಬಿಜಿಪಿ, ಕೇವಲ ಮೂರು ವರ್ಷಗಳಲ್ಲೇ ಭರ್ಜರಿ ಗೆಲುವು ಸಾಧಿಸುವ ಮೂಲಕ, 2023ರ ತೆಲಂಗಾಣ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ.
ದಕ್ಷಿಣ ಭಾರತದ ಮತ್ತೊಂದು ರಾಜ್ಯದ ಮೇಲಿ ಕಣ್ಣಿಟ್ಟ ಬಿಜೆಪಿ