ತೆಲಂಗಾಣ: ಉಚಿತ ಸೀರೆಗಾಗಿ ಜುಟ್ಟು ಹಿಡಿದು ಕಿತ್ತಾಡಿದ ನಾರಿಯರು!
ಹೈದರಾಬಾದ್, ಸೆ. 18: ಭಾದ್ರಪದ ಅಮಾವಾಸ್ಯೆ (ಮಹಾಲಯ ಅಮಾವಾಸ್ಯೆ) ದಿನದಿಂದ ಆರಂಭವಾಗುವ ಬತುಕಮ್ಮ ಹೂವಿನ ಹಬ್ಬದ ಅಂಗವಾಗಿ ಕೆಸಿ ಚಂದ್ರಶೇಖರ್ ರಾವ್ ಸರ್ಕಾರವು ಉಚಿತವಾಗಿ ಸೀರೆ ಹಂಚಲು ಮುಂದಾಗಿದ್ದು, ದೊಡ್ಡ ಗೊಂದಲಕ್ಕೆ ಕಾರಣವಾಗಿದೆ.
ಹೈದರಾಬಾದಿನ ಹಲವೆಡೆ ಬಡತನದ ರೇಖೆಯಿಂದ ಕೆಳಗಿರುವ ಕುಟುಂಬಸ್ಥ ಮಹಿಳೆಯರು ಬತುಕಮ್ಮ ಸೀರೆಗಳ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿ, ಸೀರೆ ಪಡೆಯುವಷ್ಟರಲ್ಲಿ ಹೈರಾಣಾಗಿದ್ದಾರೆ.
ಸೀರೆ ವಿತರಣೆಯಲ್ಲಿ ಭಾರಿ ಅವ್ಯವಹಾರ ಮಾಡಿರುವುದು ಕಂಡು ಬಂದಿದ್ದು, ಸೀರೆಗಳ ಗುಣಮಟ್ಟವು ಕಳಪೆಯಾಗಿದೆ. ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದ ಮಹಿಳೆಯರು ಕೈ ಕೈ ಮಿಲಾಯಿಸಿ ಪರಸ್ಪರ ಮಾರಾಮಾರಿಗೆ ಇಳಿದ ದೃಶ್ಯಗಳು ಹಲವೆಡೆ ಕಂಡು ಬಂದಿದ್ದು, ವಿಡಿಯೋಗಳು ವೈರಲ್ ಆಗಿವೆ.
ಮಹಿಳೆಯರು ಜಡೆಗಳನ್ನು ಹಿಡಿದುಕೊಂಡು ಬಡಿದಾಡಿಕೊಂಡಿದ್ದನ್ನು ಬಿಡಿಸಲು ಬಂದ ಮಹಿಳಾ ಪೊಲೀಸ್ ಸಿಬ್ಬಂದಿಗೂ ಗೂಸಾ ಬಿದ್ದಿದೆ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಬತುಕಮ್ಮ ಸೀರೆ ವಿತರಣೆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.
ಕಳಪೆ ಸೀರೆ ಸುಟ್ಟ ಮಹಿಳೆಯರು
ಹೈದರಾಬಾದಿನಲ್ಲಿ ಬತುಕಮ್ಮ ಹಬ್ಬದ ಅಂಗವಾಗಿ ಹಂಚಿದ ಉಚಿತ ಸೀರೆಯ ಗುಣಮಟ್ಟ ಕಳಪೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಕಳಪೆ ಸೀರೆಗಳನ್ನು ಸುಟ್ಟು ಹಾಕಿದ್ದಾರೆ. ಸೆ.18 ರಿಂದ 20ರ ತನಕ ತೆಲಂಗಾಣದ ಹಲವೆಡೆ ಉಚಿತ ಸೀರೆ ಹಂಚಲಾಗುತ್ತಿದೆ.
ಸೀರೆ ಹಂಚಿಕೆ
ಸುಮಾರು 1,04,47,610 ಸೀರೆಗಳನ್ನು222 ಕೋಟಿ ರು ವೆಚ್ಚದಲ್ಲಿ ಬಿಪಿಎಲ್ ವರ್ಗದ ಮಹಿಳೆಯರಿಗೆ ಕೆಸಿ ಚಂದ್ರಶೇಖರ್ ರಾವ್ ಸರ್ಕಾರವು ಹಂಚುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟ, ಬಿಪಿಎಲ್ / ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರು ಸೀರೆ ಪಡೆಯಲು ಅರ್ಹರಾಗಿದ್ದಾರೆ.
ಸೀರೆ ವಿತರಣೆಯಲ್ಲಿ ಭಾರಿ ಅವ್ಯವಹಾರ
ಸೀರೆ ವಿತರಣೆಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸುಮಾರು 52 ಲಕ್ಷಕ್ಕೂ ಅಧಿಕ ಸೀರೆಗಳನ್ನು ತೆಲಂಗಾಣದ ನೇಯ್ಗೆದಾರರಿಂದ ಪಡೆದುಕೊಳ್ಳಲಾಗಿದೆ. ಮಿಕ್ಕ ಸೀರೆಗಳನ್ನು ಸೂರತ್ ಹಾಗೂ ಇತರೆ ನಗರಗಳಿಂದ ಆಮದು ಮಾಡಿಕೊಳ್ಳಲಾಗಿದೆ.
ಉಚಿತ ಸೀರೆ ರಾಜಕೀಯ
ತೆಲಂಗಾಣ ರಾಜ್ಯ ರಚನೆಯಾಗುತ್ತಿದ್ದಂತೆ, ಬತುಕಮ್ಮ ಹಬ್ಬಕ್ಕೆ ನಾಡಹಬ್ಬದ ಮಾನ್ಯತೆ ಕೊಡಿಸಿದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೋಟ್ಯಂತರ ಸೀರೆ ಹಂಚಿಕೆ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ, ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಅನೇಕ ಕಡೆ ಗೊಂದಲ, ಜಗಳ, ಕಿತ್ತಾಟಗಳಾಗಿವೆ. ಸೆಪ್ಟೆಂಬರ್ -ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಈ ಹೂವಿನ ಕುಂಡಗಳ ಹಬ್ಬಕ್ಕಾಗಿ ಭಾರಿ ತಯಾರಿ ನಡೆಸಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿವೆ.