ಇನ್ನೊಂದೆ ವಾರದಲ್ಲಿ ತೆಲಂಗಾಣ ಕೊರೊನಾ ಮುಕ್ತವಾಗಲಿದೆ ಎಂದ ಸಿಎಂ
ಹೈದರಾಬಾದ್, ಮಾರ್ಚ್ 30: ತೆಲಂಗಾಣದಲ್ಲಿ ಏಪ್ರಿಲ್ 7ರ ನಂತರ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಉಳಿದಿರದ ಹಾಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಕೊರೊನಾಗೆ ಕಡಿವಾಣ ಹಾಕುತ್ತಿದ್ದು, ಇಂದು 11 ಪಾಸಿಟಿವ್ ರೋಗಿಗಳು ಡಿಸ್ಚಾರ್ಜ್ ಆಗುತ್ತಿದ್ದಾರೆ. ಚಿಕಿತ್ಸೆಯ ನಂತರ ಇವರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ಹಾಗಾಗಿ ಇವರುಗಳನ್ನು ಇಂದು ಡಿಸ್ಚಾರ್ಜ್ ಮಾಡಲಾಗುತ್ತಿದೆ. ಆಸ್ಪತ್ರೆಯಿಂದ ಹೊರ ಹೋದ ಬಳಿಕ ಮತ್ತೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲ ಇರಲು ಸೂಚನೆ ನೀಡಲಾಗಿದೆ.
ಉಡುಪಿಯಲ್ಲಿ ಸಮಾಜ ಸೇವಕನಿಂದ ಬಡವರಿಗೆ ಉಪಾಹಾರ ವಿತರಣೆ
ತೆಲಂಗಾಣದಲ್ಲಿ 70 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದವು. ಒಬ್ಬ ರೋಗಿಯನ್ನು ಈ ಹಿಂದೆ ಡಿಸ್ಚಾರ್ಜ್ ಮಾಡಲಾಗಿತ್ತು. ಸದ್ಯ ಇಂದು 11 ರೋಗಿಗಳು ಡಿಸ್ಚಾರ್ಜ್ ಆಗಲಿದ್ದು, 58 ರೋಗಿಗಳು ಬಾಕಿ ಉಳಿದಿದ್ದಾರೆ.
ಕೆ ಚಂದ್ರಶೇಖರ್ ರಾವ್ ಹೇಳಿಕೆ
ತೆಲಂಗಾಣದ ಕೊರೊನಾ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿವರ ನೀಡಿದ್ದಾರೆ. ''ಇಂದು 11 ಕೊರೊನಾ ರೋಗಿಗಳು ಡಿಸ್ಚಾರ್ಜ್ ಆಗಲಿದ್ದಾರೆ. ಬೇರೆ ಬೇರೆ ದೇಶಗಳಿಂದ ತೆಲಂಗಾಣಕ್ಕೆ ಬಂದ 25,937 ಜನರು ಸರ್ಕಾರದ ನಿಗಾದಲ್ಲಿದ್ದಾರೆ. ಈ ಜನರ ಕ್ವಾರಂಟೈನ್ ಏಪ್ರಿಲ್ 7 ರಂದು ಪೂರ್ಣಗೊಳ್ಳಲಿದೆ.'' ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಕೊರೊನಾ ಮುಕ್ತ ತೆಲಂಗಾಣ
ಒಂದು ವಾರಗಳ ಬಳಿಕ ತೆಲಂಗಾಣ ಕೊರೊನಾ ಮುಕ್ತವಾಗಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ತಿಳಿಸಿದ್ದಾರೆ. ಏಪ್ರಿಲ್ 7 ರಂದು ತಮಗೆ ತಾವೇ ಡೆಡ್ ಲೈನ್ ಹಾಕಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದ್ದು, ಅದಕ್ಕೂ ಮುನ್ನವೇ ಕೊರೊನಾವನ್ನು ತಮ್ಮ ರಾಜ್ಯದಿಂದ ಓಡಿಸಲು ಕೆ ಚಂದ್ರಶೇಖರ್ ಪ್ಲಾನ್ ಮಾಡಿದ್ದಾರೆ.
ಏಪ್ರಿಲ್ 7 ರಂದು ಕ್ವಾರಂಟೈನ್ ಮುಗಿಯಲಿದೆ
ಮಾರ್ಚ್ 30 ರಂದು, 1,899 ಜನರಿಗೆ, ಮಾರ್ಚ್ 31 ರಂದು 1,440 ಜನರಿಗೆ, ಏಪ್ರಿಲ್ 1 ರಂದು 1,461 ಜನರಿಗೆ, ಏಪ್ರಿಲ್ 2 ರಂದು 1,887 ಜನರಿಗೆ, ಏಪ್ರಿಲ್ 3 ರಂದು 1,476 ಜನರಿಗೆ, ಏಪ್ರಿಲ್ 3 ರಂದು 1,456 ಜನರಿಗೆ, ಏಪ್ರಿಲ್ 4 ರಂದು 1,453 ಜನರಿಗೆ, ಏಪ್ರಿಲ್ 5 ರಂದು 1,914 ಜನರಿಗೆ, 454 ಏಪ್ರಿಲ್ 6 ಮತ್ತು ಏಪ್ರಿಲ್ 7 ರಂದು 397 ಜನರಿಗೆ ಕ್ವಾರಂಟೈನ್ ಮುಗಿಯಲಿದೆ ಎಂದು ಕೆ ಚಂದ್ರಶೇಖರ್ ತಿಳಿಸಿದ್ದಾರೆ
ನೌಕರರ ಹಾಗೂ ಶಾಸಕರ ಸಂಬಳ
ಲಾಕ್ ಡೌನ್ನಿಂದ ತೆಲಂಗಾಣ ಸರ್ಕಾರಕ್ಕೆ ಕಳೆದ ಹದಿನೈದು ದಿನಗಳಲ್ಲಿ 12,000 ಕೋಟಿ ಆದಾಯ ನಷ್ಟವಾಗಿದೆ ಎಂದು ಕೆ ಚಂದ್ರಶೇಖರ್ ತಿಳಿಸಿದ್ದಾರೆ. ನೌಕರರಿಗೆ ಸಂಬಳ ನೀಡಲು ರಾಜ್ಯಕ್ಕೆ ಸಾಧ್ಯವಿದೆಯೇ ಎಂದು ಕೇಳಿದಾಗ ''ಸಂಬಳ ವಿಳಂಬವಾಗಬಹುದು. ಹಂತ ಹಂತದ ಪಾವತಿಗಾಗಿ ನಾವು ಹೋಗಬೇಕಾಗಬಹುದು. ಸರ್ಕಾರಿ ನೌಕರರೂ ಸಮಾಜದ ಭಾಗ. ಅವರೂ ಹೊರೆಯನ್ನು ಹಂಚಿಕೊಳ್ಳಬೇಕು. ಶಾಸಕರು ಕೂಡ ತಮ್ಮ ಸಂಬಳ ಪಡೆಯುವ ಸಾಧ್ಯತೆ ಇಲ್ಲ.'' ಎಂದಿದ್ದಾರೆ. ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ಪಾಲಿಸಬೇಕು ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ.