ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?
ಹೈದರಾಬಾದ್, ಸೆಪ್ಟೆಂಬರ್ 06: ಆಂಧ್ರ ವಿಭಜನೆಯ ನಂತರ ಉದಯವಾದ ಹೊಸ ರಾಜ್ಯ ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆ ಚಂದ್ರಶೇಖರ ರಾವ್ ಅವರು ರಾಜ್ಯದ ಚೊಚ್ಚಲ ಸರ್ಕಾರವನ್ನು ಅವಧಿಗೂ ಮುನ್ನವೇ ವಿಸರ್ಜಿಸುತ್ತಾರಾ?
ಅಂಥ ವದಂತಿಗಳು ಇದೀಗ ದಟ್ಟವಾಗಿದೆ. ಇಂದು ಬೆಳ್ಳಂಬೆಳಗ್ಗೆ ನಡೆಯುತ್ತಿರುವ ಮಹತ್ವದ ಸಭೆ ಸಹ ಅದಕ್ಕೇ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಅದೂ ಅಲ್ಲದೆ '6' ಕೆಸಿಆರ್ ಅವರ ಅದೃಷ್ಟ ಸಂಖ್ಯೆ. ಇಂದು ದಿನಾಂಕವೂ '6' ಆಗಿರುವುದರಿಂದ ಅವರು ಇಂದೇ ಈ ನಿರ್ಧಾರ ಪ್ರಕಟಿಸಬಹುದು ಎನ್ನಲಾಗುತ್ತಿದೆ.
ಸೆ. 2ಕ್ಕೆ ಕೆಸಿಆರ್ ರಿಂದ ತೆಲಂಗಾಣ ವಿಧಾನಸಭೆ ವಿಸರ್ಜನೆ ಘೋಷಣೆ?
ಅಕಸ್ಮಾತ್ ವಿಧಾನಸಭೆ ವಿಸರ್ಜನೆಯಾದರೆ ಆಗುವ ಪರಿಣಾಮವೇನು? ತೆಲಂಗಾಣ ವಿಧಾನಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇರುವಾಗಲೇ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳುತ್ತಿರುವುದೇಕೆ? ಈ ನಿರ್ಧಾರದಿಂದ ಅವರಿಗೆ ಹೇಗೆ ಲಾಭವಾಗುತ್ತದೆ? ಲೋಕಸಭಾ ಚುನಾವಣೆಯ ಮೇಲೆ ಈ ನಿರ್ಧಾರ ಯಾವ ರೀತಿ ಪರಿಣಾಮ ಬೀರುತ್ತದೆ?
ಅಧಿಕಾರ ಮರಳಿ ಗಳಿಸುವ ಆತ್ಮವಿಶ್ವಾಸ
ಅಧಿಕಾರವನ್ನು ಮರಳಿ ಗಳಿಸುವ ಸಂಪೂರ್ಣ ವಿಶ್ವಾಸ ಕೆಸಿಆರ್ ಅವರಿಗಿದೆ. ಚುನಾವಣೆ ತಡವಾದರೆ ಜನಾಭಿಪ್ರಾಯ ಬದಲಾಗಬಹುದು. ಅಥವಾ ಸರ್ಕಾರ ಬೀಳಬಹುದಾದ ಅಥವಾ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಸೋಲಿಸಬಲ್ಲ ವಿವಾದಗಳು ಹುಟ್ಟಿಕೊಳ್ಳಬಹುದು. ಈಗಲೇ ವಿಧಾನಸಭೆ ವಿಸರ್ಜಿಸಿದರೆ ಜನರಿಗೆ ಉತ್ತಮ ಅಭಿಪ್ರಾಯವಿರುವುದರಿಂದ ಗೆಲ್ಲುವ ಸಾಧ್ಯತೆಗಳು ಹೆಚ್ಚು.
ವಿಧಾನಸಭೆ ಸಂಖ್ಯಾಬಲವೇನು?
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲಿ 63 ನ್ನು ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಗಳಿಸಿದೆ. ಉಳಿದಂತೆ ಎರಡನೇ ಅತೀ ದೊಡ್ಡ ಪಕ್ಷವಾದ ಕಾಂಗ್ರೆಸ್ ಗಳಿಸಿದ್ದು ಕೇವಲ 21 ಕ್ಷೇತ್ರಗಳನ್ನು. ಟಿಡಿಪಿ- 15, ವೈಎಸ್ ಆರ್ ಕಾಂಗ್ರೆಸ್-3, ಬಿಜೆಪಿ 7, ಮತ್ತು ಅಸಾದುದ್ದಿನ್ ಓವೈಸಿ ಅವರ ಎಐಎಂಐಎಂ 5 ಸ್ಥಾನಗಳನ್ನು ಗಳಿಸಿದ್ದವು.
ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?
ಕಣ್ಮುಂದಿದೆ ಲೋಕಸಭಾ ಚುನಾವಣೆಯ ಲೆಕ್ಕಾಚಾರ
2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡೇ ಕೆಸಿ ಆರ್ ಈ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆ ಸಹ 2019 ರ ಏಪ್ರಿಲ್-ಮೇ ತಿಂಗಳಿನಲ್ಲಿ ಅಂದರೆ ಲೋಕಸಭಾ ಚುನಾವಣೆಯ ಸಮಯದಲ್ಲೇ ನಡೆಯಬೇಕಿತ್ತು. ಹಾಗಾದರೆ ವಿಧಾನಸಭಾ ಚುನಾವಣೆಯೊಂದರ ಮೇಲೆ ಮಾತ್ರ ಗಮನ ಹರಿಸುವುದು ಕಷ್ಟ. ಎರಡೂ ಚುನಾವಣೆಗಳೂ ಏಕಕಾಲದಲ್ಲಾದರೆ ಉತ್ತಮ ಸಾಧನೆ ತೋರುವುದು ಕಷ್ಟ. ಆದ್ದರಿಂದ ವಿಧಾನಸಭಾ ಚುನಾವಣೆಯನ್ನು ಮೊದಲೇ ಎದುರಿಸಿ, ನಂತರ ಲೋಕಸಭಾ ಚುನಾವಣೆಗೆ ಸಜ್ಜಾಗುವುದು ಕೆಸಿಆರ್ ಅವರ ಯೋಚನೆ.
ಎನ್ ಡಿಎ ಭಾಗವಾಗುವುದಿಲ್ಲವೇ ಟಿಆರ್ ಎಸ್?
ಬಿಜೆಪಿ ನೇತೃತ್ವದ ನ್ಯಾಶ್ನಲ್ ಡೆಮಾಕ್ರೆಟಿಕ್ ಅಲಿಯನ್ಸ್(ಎನ್ ಡಿಎ)ಯ ಭಾಗವಾಗಿ ಟಿಆರ್ ಎಸ್ ಗುರುತಿಸಿಕೊಳ್ಳುವುದಿಲ್ಲ ಎಂಬ ವದಂತಿಗಳು ಕೇಳಿಬರುತ್ತಿವೆ. ಆದರೆ ಚುನಾವಣೆಯ ನಂತರ ಅಗತ್ಯವಿದ್ದಲ್ಲಿ ಅದು ಎನ್ ಡಿಎ ಗೇ ತನ್ನ ಬೆಂಬಲ ನೀಡಲಿದೆ. ಏಕೆಂದರೆ ತೆಲಂಗಾಣದಲ್ಲಿ ಟಿಆರ್ ಎಸ್ ಗೆ ಇರುವ ಪ್ರಮುಖ ಪ್ರತಸ್ಪರ್ಧಿ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಪಕ್ಷ ಗುರುತಿಸಿಸಕೊಂಡ ಮೈತ್ರಿಕೂಟದಲ್ಲಿ ಟಿಆರ್ ಎಸ್ ಗುರುತಿಸಿಕೊಳ್ಳಲು ಬಿಲ್ ಕುಲ್ ಒಪ್ಪುವುದಿಲ್ಲ. ತೃತೀಯ ರಂಗ ಅಸ್ತಿತ್ವಕ್ಕೆ ಬಂದರೂ, ಆ ಬಗ್ಗೆ ಟಿಆರ್ ಎಸ್ ಗೆ ಹೆಚ್ಚು ಆಸಕ್ತಿ ಇದ್ದಂತಿಲ್ಲ.
ತೆಲಂಗಾಣದಲ್ಲಿ ಮಹತ್ವದ ಸಭೆ: ವಿಧಾನಸಭೆ ವಿಸರ್ಜನೆ ಸಾಧ್ಯತೆ
ಪ್ರಧಾನಿ ಮೋದಿ-ಕೆಸಿಆರ್ ಭೇಟಿ
ಈ ಎಲ್ಲಕ್ಕೂ ಪುಷ್ಠಿ ನೀಡುವಂತೆ ಕೆಸಿಆರ್ ಅವರು ಇತ್ತೀಚೆಗಷ್ಟೆ ಎರಡೆರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಅಧಿವೇಶನದ ಸಮಯದಲ್ಲಿ ನಡೆದ ಬಿಜೆಪಿ ವಿರುದ್ಧದ ಅವಿಶ್ವಾಸ ಮಂಡನೆಯ ಸಮಯದಲ್ಲಿ ಟಿಆರ್ ಎಸ್ ಬಿಜೆಪಿಗೆ ಬೆಂಬಲ ನೀಡಿತ್ತು. ಮಾತ್ರವಲ್ಲ, ರಾಜ್ಯಸಭೆಗೆ ಉಪಸಭಾಪತಿ ಆಯ್ಕೆ ಸಂದರ್ಭದಲ್ಲೂ ಬಿಜೆಪಿಗೆ ನೇತೃತ್ವದ ಎನ್ ಡಿಎ ಅಭ್ಯರ್ಥಿಯನ್ನೇ ಬೆಂಬಲಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೆಸಿಆರ್ ಭೇಟಿ ಮಾಡಿ ಮಾತನಾಡಿರುವುದು ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುವುದಕ್ಕೆ ಪುಷ್ಟಿ ನೀಡಿದೆ.
ವಿಧಾನಸಭೆ ವಿಸರ್ಜನೆಯಾದರೆ ಚುನಾವಣೆ ಯಾವಾಗ?
ಅಕಸ್ಮಾತ್ ಅಂದುಕೊಂಡಂತೆ ತೆಲಂಗಾಣ ವಿಧಾನಸಭೆ ವಿಸರ್ಜನೆಯಾದರೆ ಚುನಾವಣೆ ಇದೇ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ ನಲ್ಲಿ ರಾಜಸ್ಥಾನ, ಛತ್ತೀಸ್ ಗಢ, ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಅವಧಿಯಲ್ಲೇ ತೆಲಂಗಾಣದಲ್ಲೂ ಚುನಾವಣೆ ನಡೆಯಬಹುದು. ನಂತರ 2019 ರ ಲೋಕಸಭಾ ಚುನಾವಣೆಯೊಂದನ್ನೇ ಟಿಆರ್ ಎಸ್ ಕೇಂದ್ರೀಕರಿಸಿ, ಅಲ್ಲೂ ಉತ್ತಮ ಪ್ರದರ್ಶನ ತೋರಬಹುದು. ಇದು ಕೆಸಿಆರ್ ಲೆಕ್ಕಾಚಾರ. ಅವರ ಲೆಕ್ಕಾಚಾರ ಸರಿಯಾಗುತ್ತಾ ಎಂಬುದನ್ನು ಕಾಲವೇ ಉತ್ತರಿಸಲಿದೆ.