ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?
ಹೈದರಾಬಾದ್, ನವೆಂಬರ್ 29: 'ಇಂತಹ ಭಯಾನಕ ಸಾವು ಯಾರಿಗೂ ಬರಬಾರದು. ಆಕೆಗೆ ಈ ದುರ್ಗತಿ ತಂದ ಕ್ರೂರಿಗಳನ್ನು ಗಲ್ಲಿಗೇರಿಸಿ ಸಾಯಿಸಬೇಕು' ಎಂದು ಬಿಕ್ಕಿದರು ಪ್ರಿಯಾಂಕಾ ರೆಡ್ಡಿ ತಂದೆ ಶ್ರೀಧರ್ ರೆಡ್ಡಿ.
ಹಿರಿ ಮಗಳು ಡಾ. ಪ್ರಿಯಾಂಕಾ ರೆಡ್ಡಿಯ ಸುಟ್ಟುಕರಕಲಾದ ದೇಹದ ಮುಂದೆ ತಮ್ಮ ಕಿರಿಯ ಮಗಳು ಭವ್ಯಾ ಜತೆ ನಿಂತಿದ್ದ ಅವರಲ್ಲಿ ದುಃಖ ಉಮ್ಮಳಿಸಿ ಬರುತ್ತಿತ್ತು. ಸರ್ಕಾರಿ ಉದ್ಯೋಗಿಯಾಗಿದ್ದ ಶ್ರೀಧರ್ ರೆಡ್ಡಿ ಅವರಿಗೆ, ತಮ್ಮ ಮಗಳು ಗೆಜೆಟೆಡ್ ಅಧಿಕಾರಿ ಎಂಬ ಹೆಮ್ಮೆಯಿತ್ತು. ಪದವಿ ಪಡೆಯುತ್ತಿದ್ದಂತೆಯೇ ಉದ್ಯೋಗ ಕೂಡ ಸಿಕ್ಕಿತ್ತು. ಸೇತುವೆಯೊಂದರ ಅಡಿಯಲ್ಲಿ ಸುಟ್ಟು ಕರಕಲಾಗಿ ಬಿದ್ದಿದ್ದ ದೇಹ ತಮ್ಮದೇ ಮಗಳು ಎಂದು ಗುರುತು ಹಿಡಿಯುವಾಗ ಆ ತಂದೆಯ ಸ್ಥಿತಿ ಹೇಗಾಗಿರಬಹುದು?
ತೆಲಂಗಾಣದಲ್ಲಿ ಪಶುವೈದ್ಯೆ ಅತ್ಯಾಚಾರ, ಕೊಲೆ: ಸಿಕ್ಕಿಬಿದ್ದ ದುಷ್ಕರ್ಮಿಗಳು
ಅಪ್ಪನ ಜತೆಗಿದ್ದ ಭವ್ಯಾ ರೆಡ್ಡಿ ಕಣ್ಣೀರ ಕೋಡಿಯನ್ನು ತಡೆಹಿಡಿಯಲು ಸಾಧ್ಯವಾಗದೆ ಅಳುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಅಕ್ಕನೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದ ನೆನಪು ಮತ್ತೆ ಮತ್ತೆ ಮರುಕಳಿಸುತ್ತಿತ್ತು. ಆಕೆ ಫೋನ್ ಮಾಡಿದಾಗಲೇ ತಾವು ಹೊರಟಿದ್ದರೆ ಆಕೆಯನ್ನು ಉಳಿಸಿಕೊಳ್ಳಬಹುದಾಗಿತ್ತು ಎಂಬುದು ಆಕೆಯ ನೋವನ್ನು ದುಪ್ಪಟ್ಟು ಮಾಡಿತ್ತು. ಹಾಗಾದರೆ ಆ ರಾತ್ರಿ ನಡೆದಿದ್ದೇನು?
ಗಾಡಿ ಬಿಟ್ಟು ಕ್ಯಾಬ್ನಲ್ಲಿ
ಪ್ರಿಯಾಂಕಾ ರೆಡ್ಡಿ ಕೊನೆಯ ಬಾರಿ ಮಾತನಾಡಿದ್ದು ತಮ್ಮ ತಂಗಿ ಭವ್ಯಾ ಜತೆ. ಕೆಲಸದ ನಿಮಿತ್ತ ಬುಧವಾರ ಹೊರಗೆ ಹೋಗಿದ್ದ ಪ್ರಿಯಾಂಕಾ ಮನೆಗೆ ಬಂದಿದ್ದರು. ಬಳಿಕ ಸಂಜೆ 5.50ರ ವೇಳೆಗೆ ಗಚಿಬೌಲಿಯ ಮತ್ತೊಂದು ಕ್ಲಿನಿಕ್ಗೆ ತೆರಳಿದ್ದರು. ತಮ್ಮ ಕೆಂಪು ಬಣ್ಣದ ಹೀರೋ ಮಾಸ್ಟ್ರೋ ಸ್ಕೂಟರ್ಅನ್ನು ತೊಂಡಪಲ್ಲಿಯ ಓಓಆರ್ ಟೋಲ್ ಪ್ಲಾಜಾದ ಬಳಿ ಬಿಟ್ಟು ಅಲ್ಲಿಂದ ಕ್ಯಾಬ್ನಲ್ಲಿ ಕ್ಯಾಬ್ಗೆ ತೆರಳಿದ್ದರು.
ಪಂಕ್ಚರ್ ಮಾಡಿದ್ದ ದುಷ್ಕರ್ಮಿಗಳು
ಅವರು ಗಾಡಿ ನಿಲ್ಲಿಸುವುದನ್ನು ನೋಡಿದ್ದ ನಾಲ್ವರು ದುಷ್ಕರ್ಮಿಗಳು ಆಕೆ ರಾತ್ರಿಯೇ ಬರುವುದು ಎಂದು ಊಹಿಸಿ ದ್ವಿಚಕ್ರ ವಾಹನದ ಟೈರ್ ಪಂಕ್ಚರ್ ಮಾಡಿದ್ದರು. 9 ಗಂಟೆ ಸುಮಾರಿಗೆ ಟೋಲ್ ಪ್ಲಾಜಾದ ಬಳಿ ಬಂದ ಪ್ರಿಯಾಂಕಾ ಗಾಡಿ ತೆಗೆದು ಮುಂದೆ ಹೊರಟರು. ಆಗ ಲಾರಿ ಚಾಲಕನೊಬ್ಬ ಟೈರ್ ಪಂಕ್ಚರ್ ಆಗಿದೆ ಎಂದು ಕೂಗಿ ಹೇಳಿದ. ಹೆಚ್ಚು ಜನರಿಲ್ಲದ ಮತ್ತು ಟ್ರಕ್ಗಳೇ ಹೆಚ್ಚಾಗಿ ನಿಂತಿರುವ ಸ್ಥಳದಲ್ಲಿ ಇರುವುದು ಸುರಕ್ಷಿತವಲ್ಲವೆಂದು ಪ್ರಿಯಾಂಕಾ ಹಾಗೆಯೇ ಗಾಡಿ ಓಡಿಸಲು ಮುಂದಾದರು. ಬಸ್ ಸ್ಟಾಪ್ ಸಮೀಪ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. 'ನೀವು ಹೋದರೂ ಅರ್ಧದಾರಿಯಲ್ಲಿ ಗಾಡಿ ನಿಲ್ಲುತ್ತದೆ. ಅದರಿಂದ ಇನ್ನೂ ಕಷ್ಟವಾಗುತ್ತದೆ' ಎಂದ ಚಾಲಕ ಆಕೆಯನ್ನು ಹೋಗದಂತೆ ತಡೆದ.
ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಹತ್ಯೆಗೆ ಮೊದಲೇ ನಡೆದಿತ್ತಾ ಪ್ಲಾನ್?
ತಂಗಿಗೆ ಕರೆ ಮಾಡಿದರು
ಒಬ್ಬ ಸಣ್ಣ ಹುಡುಗನನ್ನು ಕಳಿಸಿ ಆತ ರಿಪೇರಿ ಮಾಡಿಕೊಂಡು ಬರುತ್ತಾನೆ ಎಂದು ಪ್ರಿಯಾಂಕಾ ಅವರಿಗೆ ಚಾಲಕ ಹೇಳಿದ. ತಮಗೆ ಸಹಾಯ ಮಾಡುವವರು ವಿಶ್ವಾಸದೊಂದಿಗೆ ಮಾತನಾಡಿದಾಗ ಪ್ರಿಯಾಂಕಾ ಅವರನ್ನು ನಂಬಿದರು. ರಾತ್ರಿ 9.22ರ ವೇಳೆಗೆ ತಂಗಿ ಭವ್ಯಾ ಅವರಿಗೆ ಕರೆ ಮಾಡಿದ ಪ್ರಿಯಾಂಕಾ ನಡೆದ ಎಲ್ಲ ಘಟನೆಗಳನ್ನೂ ವಿವರಿಸಿದರು. ಗಾಡಿಯನ್ನು ಅಲ್ಲಿಯೇ ಬಿಟ್ಟು ಟೋಲ್ ಪ್ಲಾಜಾದ ಬಳಿ ಬರುವಂತೆ ಪ್ರಿಯಾಂಕಾರಿಗೆ ತಂಗಿ ಸಲಹೆ ನೀಡಿದರು. ಇಲ್ಲಿ ಪುರುಷರು ಹೆಚ್ಚಾಗಿದ್ದಾರೆ. ಎಲ್ಲರೂ ಕೆಕ್ಕರಿಸಿಕೊಂಡು ನೋಡುತ್ತಿದ್ದಾರೆ. ನನಗೆ ಭಯವಾಗುತ್ತಿದೆ ಎಂದು ಪ್ರಿಯಾಂಕಾ ತಿಳಿಸಿದರು. ಎಲ್ಲ ಅಂಗಡಿಗಳು ಬಂದ್ ಆಗಿದ್ದರಿಂದ ರಿಪೇರಿ ಮಾಡಿಸಲು ತೆರಳಿದ್ದ ಬಾಲಕ ಹಾಗೆಯೇ ಮರಳಿದ್ದ. ಟೋಲ್ ಬಳಿ ನಿಲ್ಲುವುದು ಕೂಡ ಸರಿಯೆನಿಸುತ್ತಿಲ್ಲ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟರು.
ಕರೆ ಕಟ್ ಮಾಡಿದ ಪ್ರಿಯಾಂಕಾ
ಪೊಲೀಸರು ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ವಾಹನಗಳನ್ನು ಸಂಜೆ ಟೋಯಿಂಗ್ ಮಾಡುತ್ತಿದ್ದರಿಂದ ಪ್ರಿಯಾಂಕಾ ಇನ್ನೊಂದು ಭಾಗದ ಬಳಿ ಗಾಡಿ ನಿಲ್ಲಿಸಿ ಹೋಗಿದ್ದರು. ರಾತ್ರಿ ಗಾಡಿ ನಿಲ್ಲಿಸಿದ್ದ ಜಾಗದಲ್ಲಿ ಹೆಚ್ಚು ಬೆಳಕೂ ಇರಲಿಲ್ಲ. ಆರಂಭದಲ್ಲಿ ಯಾವುದೇ ಕಳವಳವಿಲ್ಲದೆ ಮಾತನಾಡುತ್ತಿದ್ದ ಪ್ರಿಯಾಂಕಾ, ಬಳಿಕ ಜನರನ್ನು ಕಂಡು ಭಯಗೊಂಡಿದ್ದರು. ಅವರ ಧ್ವನಿಯಲ್ಲಿ ಹೆದರಿಕೆ ತಂಗಿಗೆ ಗೊತ್ತಾಗಿತ್ತು. ಫೋನ್ ಕಟ್ ಮಾಡಬೇಡ. ಮಾತನಾಡುತ್ತಲೇ ಇರು ಎಂದು ತಂಗಿ ಹೇಳಿದರು. ಆದರೆ ಸ್ವಲ್ಪ ಹೊತ್ತಿನ ಬಳಿಕ, 'ನಿಂಗೆ ಮತ್ತೆ ಕಾಲ್ ಮಾಡ್ತೀನಿ' ಎಂದು ಪ್ರಿಯಾಂಕಾ ಕಾಲ್ ಕಟ್ ಮಾಡಿದರು. ಆ 6 ನಿಮಿಷ 45 ಸೆಕೆಂಡುಗಳ ಕರೆಯೇ ಕೊನೆ. 9.44ಕ್ಕೆ ಭವ್ಯಾ ಅಕ್ಕನಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು.
ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ
ಫೋನ್ ಸ್ವಿಚ್ ಆಫ್ ಆಗಿತ್ತು
ರಾತ್ರಿ 10.20ಕ್ಕೆ ಮತ್ತೆ ಕರೆ ಮಾಡಿದಾಗಲೂ ಸ್ವಿಚ್ ಆಫ್ ಎಂದು ಬಂದಾಗ ಗಾಬರಿ ಹೆಚ್ಚಾಯಿತು, ಕೂಡಲೇ ರೆಡ್ಡಿ ಕುಟುಂಬ ಟೋಲ್ ಪ್ಲಾಜಾದ ಬಳಿ ತೆರಳಿ ಪ್ರಿಯಾಂಕಾ ಅವರಿಗಾಗಿ ಹುಡುಕಾಡಿತು. ಎಲ್ಲೂ ಆಕೆ ಕಾಣಿಸಲಿಲ್ಲ. ಆಕೆಯ ವಾಹನ ಕೂಡ ಸಿಗಲಿಲ್ಲ. ನಂತರ ಶಮ್ಷಾಬಾದ್ ಪೊಲೀಸ್ ಠಾಣೆಗೆ ತೆರಳಿ ಕಾಣೆಯಾದ ದೂರು ನೀಡಿದರು.
ಮರುದಿನ ಬೆಳಿಗ್ಗೆ 5 ಗಂಟೆಗೆ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ಕೆಳಸೇತುವೆಯ ಅಡಿ ತೆರಳುತ್ತಿದ್ದ ಹಾಲು ಮಾರುವ ವ್ಯಕ್ತಿಗೆ ಉರಿಯುತ್ತಿರುವ ಬೆಂಕಿಯ ಕಾಣಿಸಿತು. ಎಂದಿನಂತೆ ಯಾರೋ ಕಸಕ್ಕೆ ಬೆಂಕಿ ಹಾಕಿದ್ದಾರೆ ಎಂದೇ ಭಾವಿಸಿದ್ದ. ಮರಳಿ ಅದೇ ದಾರಿಯಲ್ಲಿ ಬರುವಾಗ ಬೆಂಕಿಯ ಜ್ವಾಲೆಯ ನಡುವೆ ಕೈಯೊಂದು ಕಾಣಿಸಿತು. ಕೂಡಲೇ ಸ್ಥಳೀಯರಿಗೆ ತಿಳಿಸಿದ. ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಬಟ್ಟೆ, ಲಾಕೆಟ್ನಿಂದ ಗುರುತು ಪತ್ತೆ
ಪ್ರಿಯಾಂಕಾ ರೆಡ್ಡಿ ನಾಪತ್ತೆಯಾದ ಸ್ಥಳದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಚಟ್ಟನಪಲ್ಲಿ ಸಬ್ ರೋಡ್ನಲ್ಲಿ ಈ ಸುಟ್ಟ ದೇಹ ಕಾಣಿಸಿತ್ತು. ದೇಹವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ನಾಪತ್ತೆ ದೂರು ನೀಡಿದ್ದ ಪ್ರಿಯಾಂಕಾ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದರು. ಬೆಂಕಿಯಿಂದ ದೇಹ ಶೇ 70ರಷ್ಟು ಸುಟ್ಟುಹೋಗಿತ್ತು. ಆದರೆ ಆಕೆಯ ಬಳಿಯಿದ್ದ ಸ್ಕಾರ್ಫ್, ಗಣೇಶ ಲಾಕೆಟ್ ಮತ್ತು ಬಕಲ್ ಮೂಲಕ ಅದು ಆಕೆಯದೇ ದೇಹ ಎಂದು ಕುಟುಂಬದವರು ಕಂಡುಹಿಡಿದರು.
ಕಾಮುಕರಿಗೆ ಸಿಕ್ಕಿ ಬೂದಿಯಾದ ಪ್ರಿಯಾಂಕಾಗೆ ಟ್ವಿಟ್ಟರ್ನಲ್ಲಿ ಕಣ್ಣೀರ ಕೋಡಿ
ತಕ್ಷಣವೇ ಹತ್ತು ತಂಡಗಳನ್ನು ರಚಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದರು. ಟೋಲ್ ಮತ್ತು ಚಟ್ಟನಪಲ್ಲಿಗೆ ಸಾಗುವ ಮಾರ್ಗದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಶುಕ್ರವಾರ ಪ್ರಮುಖ ಆರೋಪಿಯಾದ ಮಹಬೂಬನಗರದ ನಾರಾಯಣಪೇಟೆಯ ಲಾರಿ ಚಾಲಕ ಮೊಹಮ್ಮದ್ ಪಾಶಾ, ಗುಡಿಗಂಡ್ಲಾದ ನವೀನ್, ಲಾರಿ ಕ್ಲೀನರ್ ಕೇಶವುಲು ಮತ್ತೊಬ್ಬ ಕ್ಲೀನರ್ ಶಿವ ಎಂಬುವವರನ್ನು ಬಂಧಿಸಿದರು.
ಸಾಮೂಹಿಕ ಅತ್ಯಾಚಾರ
ಆರೋಪಿಗಳಿಗೆ ಪ್ರಿಯಾಂಕಾ ರಾತ್ರಿ ವೇಳೆ ಬರುವುದು ತಿಳಿದಿತ್ತು. ಹಾಗಾಗಿ ಉದ್ದೇಶಪೂರ್ವಕವಾಗಿಯೇ ಟೈರ್ ಪಂಕ್ಚರ್ ಮಾಡಿದ್ದರು. ಬಳಿಕ ಸಹಾಯ ಮಾಡುವ ನಾಟಕವಾಡಿದ್ದರು. ಬಳಿಕ ಟೋಲ್ ಪ್ಲಾಜಾದಿಂದ 50 ಮೀಟರ್ನಷ್ಟೇ ದೂರದಲ್ಲಿರುವ ಟ್ರಕ್ಗಳನ್ನು ನಿಲ್ಲಿಸುವ ನಿರ್ಜನ ಪ್ರದೇಶಕ್ಕೆ ಎಳೆದೊಯ್ದರು. ಅಲ್ಲಿ ಮದ್ಯ ಸೇವಿಸಿ ಆಕೆಗೆ ಹಿಂಸೆ ನೀಡಿದರು. ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು. ಕತ್ತು ಹಿಸುಕಿ ಕೊಂದು ಹಾಕಿದರು. ದೇಹ ಮತ್ತು ಆಕೆಯ ಗಾಡಿಯನ್ನು ಲಾರಿಯೊಳಗೆ ಹಾಕಿಕೊಂಡು ಶಡ್ನಗರ್ನತ್ತ ಹೊರಟರು.
ಬೆಡ್ಶೀಟ್ನಲ್ಲಿ ಸುತ್ತಿ ಬೆಂಕಿ ಹಚ್ಚಿದರು
ಆಕೆಯ ದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಆಕೆಯ ವಾಹನವನ್ನು 10 ಕಿ.ಮೀ. ದೂರದ ಹಳ್ಳಿಯೊಂದರ ಪೊದೆಯಲ್ಲಿ ಎಸೆದು ನಂಬರ್ ಪ್ಲೇಟ್ ಕಿತ್ತುಹಾಕಿದರು. ಸಾಕ್ಷ್ಯಗಳನ್ನು ನಾಶಪಡಿಸಲು ಅವರು ಪ್ರಯತ್ನಿಸಿದ್ದರು. ಆದರೆ ಅತ್ಯಾಚಾರ ನಡೆದ ಸ್ಥಳದಲ್ಲಿ ಇದ್ದ ಬಾಟಲಿಗಳು, ಹರಿದ ಬಟ್ಟೆ ತುಂಡು ಈ ಘಟನೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂಬ ಸುಳಿವು ನೀಡಿತ್ತು. ಆಕೆಯ ದೇಹ ಮತ್ತು ವಾಹನ ದೂರದಲ್ಲಿ ಪತ್ತೆಯಾಗಿದ್ದು, ಇದು ಲಾರಿ ಚಾಲಕರ ಕೃತ್ಯ ಎಂಬ ಅನುಮಾನ ಮೂಡಿಸಿತ್ತು. ಅದನ್ನೇ ಮುಖ್ಯವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಮತ್ತು ಇತರೆ ಮಾಹಿತಿಗಳನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ಯಾವ ರೀತಿ ನಡೆಯಿತು. ಇಷ್ಟು ಬೇಗೆ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ನೀಡಿಲ್ಲ.