ನನ್ನನ್ನೂ ಅಲ್ಲೇ ಸಾಯಿಸಿ: ಅತ್ಯಾಚಾರ ಆರೋಪಿಯ ಪತ್ನಿ
ಹೈದರಾಬಾದ್, ಡಿಸೆಂಬರ್ 6: ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೊಳಗಾದಂತೆಯೇ ನಾಲ್ವರು ಆರೋಪಿಗಳನ್ನು ಮುಂಜಾನೆ ಪೊಲೀಸರು ಎನ್ಕೌಂಟರ್ ಮಾಡಿರುವುದು ಕೂಡ ಪರ-ವಿರೋಧದ ಅಭಿಪ್ರಾಯಗಳನ್ನು ಹುಟ್ಟುಹಾಕಿದೆ.
ಆರೋಪಿಗಳು ಅತ್ಯಾಚಾರ ಎಸಗಿದ ಪ್ರದೇಶದ ಸಮೀಪದಲ್ಲಿಯೇ ನಾಲ್ವರು ಆರೋಪಿಗಳನ್ನೂ ಎನ್ಕೌಂಟರ್ ಮಾಡಲಾಗಿದೆ. ಅಲ್ಲಿಯೇ ತನ್ನನ್ನು ಕರೆದುಕೊಂಡು ಹೋಗಿ ಸಾಯಿಸುವಂತೆ ಆರೋಪಿಯೊಬ್ಬನ ಪತ್ನಿ ಕಣ್ಣೀರು ಹಾಕಿದ್ದಾರೆ.
ಅತ್ಯಾಚಾರಿಗಳ ಎನ್ ಕೌಂಟರ್; ಆರೋಪಿ ಪತ್ನಿಯ ಅಳಲು ಕೇಳಿ
20 ವರ್ಷದ ಚಿಂತಕುಂಟಾ ಚನ್ನಕೇಶವುಲುವಿಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತು. ತೆಲಂಗಾಣದ ನಾರಾಯಣ ಪೇಟೆ ಜಿಲ್ಲೆಯ ಗುಡಿಗಂಡ್ಲ ಗ್ರಾಮದವನಾದ ಆತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ನಾಲ್ವರೂ ಆರೋಪಿಗಳು ಆರ್ಥಿಕವಾಗಿ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಯಾರೂ ಸುಶಿಕ್ಷಿತರಲ್ಲ. ಹೆಚ್ಚು ದುಡಿಯದೆ ಇದ್ದರೂ ಅದನ್ನು ಹೆಂಡ ಮತ್ತಿತರ ದುಶ್ಚಟಗಳಿಗೆ ಖಾಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನನ್ನೂ ಕೊಂದು ಬಿಡಲಿ
ಆರೋಪಿ ಚನ್ನಕೇಶವುಲುನ ಪತ್ನಿ ರೇಣುಕಾ ಆಕ್ರಂದನ ಮುಗಿಲುಮುಟ್ಟಿತ್ತು. 'ಗಂಡನ ಸಾವಿನ ಬಳಿಕ ಬದುಕಿದ್ದು ಮಾಡುವುದು ಏನೂ ಇಲ್ಲ. ಪೊಲೀಸರು ನನ್ನನ್ನೂ ಕೊಂದುಬಿಡಲಿ. ನನ್ನ ಗಂಡನಿಗೆ ಏನೂ ಆಗುವುದಿಲ್ಲ. ಅವನು ಬೇಗನೆ ಮರಳಿ ಬರುತ್ತಾನೆ ಎಂದು ನನಗೆ ಪೊಲೀಸರು ಹೇಳಿದ್ದರು. ಈಗ ಏನು ಮಾಡುವುದು ಎಂದು ನನಗೆ ಗೊತ್ತಾಗುತ್ತಿಲ್ಲ. ನನ್ನ ಗಂಡನನ್ನು ಕೊಂದ ಜಾಗಕ್ಕೆ ನನ್ನನ್ನೂ ಕರೆದುಕೊಂಡು ಹೋಗಿ. ನನ್ನನ್ನೂ ಸಾಯಿಸಿ' ಎಂದು ರೋದಿಸಿದ್ದಾರೆ.
ನನ್ನ ಮಗ ಹೊರಟು ಹೋದ
ಜೈಲಿನಲ್ಲಿದ್ದ ಮಗ ಸತ್ತು ಹೋಗಿದ್ದಾನೆ ಎಂಬ ಸುದ್ದಿಯನ್ನು ಬೆಳ್ಳಂಬೆಳಿಗ್ಗೆ ಕೇಳಿ, ಪ್ರಮುಖ ಆರೋಪಿ ಮೊಹಮ್ಮದ್ ಆರೀಫ್ನ ತಾಯಿ ಆಘಾತಕ್ಕೊಳಗಾಗಿದ್ದಾರೆ. ಮಾತು ಬಾರದಂತಾಗಿರುವ ಅವರು, 'ನನ್ನ ಮಗ ಹೊರಟು ಹೋದ. ನಾನು ಇನ್ನೇನು ಹೇಳಲಿ' ಎಂದಷ್ಟೇ ಹೇಳುತ್ತಿದ್ದಾರೆ. ನನ್ನ ಮಗ ತಪ್ಪು ಮಾಡಿದ್ದರೆ ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆರೀಫ್ನ ತಂದೆ ಈ ಮುಂಚೆ ಹೇಳಿಕೆ ನೀಡಿದ್ದರು. ನಾರಾಯಣ ಪೇಟೆಯ ಜಾಕ್ಲೆರ್ ಗ್ರಾಮದವನಾದ 26 ವರ್ಷದ ಆರೀಫ್, ಸ್ಥಳೀಯ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುತ್ತಿದ್ದವನು, ಬಳಿಕ ಟ್ರಕ್ ಚಾಲಕನಾಗಿ ಸೇರಿಕೊಂಡಿದ್ದ.
10 ಗಂಟೆ ಸ್ಪಾಟ್ ನಲ್ಲಿ ಬಿದ್ದಿದ್ದವು ಅತ್ಯಾಚಾರಿಗಳ ಮೃತದೇಹ!
ಬೇರೆಯವರಿಗೆ ಏಕೆ ಈ ಶಿಕ್ಷೆಯಿಲ್ಲ?
'ಇದೇ ರೀತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹಿಂದೆಯೂ ನಡೆದಿದೆ. ಆದರೆ ಪೊಲೀಸರು ಅವರಿಗೆ ಈ ರೀತಿಯ ಶಿಕ್ಷೆಯನ್ನು ಏಕೆ ನೀಡಿರಲಿಲ್ಲ? ನನ್ನ ಮಗ ಮತ್ತು ಆ ಮೂವರನ್ನು ಮಾತ್ರ ಏಕೆ ಕೊಂದಿದ್ದಾರೆ' ಎಂದು ಆರೋಪಿ ಜೊಲ್ಲು ಶಿವನ ತಂದೆ ರಾಜಪ್ಪ ಪ್ರಶ್ನಿಸಿದರು.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಪ್ರಕರಣದ Timeline
ಸಾಬೀತುಪಡಿಸಲು ಸಮಯವಿತ್ತು
ಮಗನನ್ನು ಭೇಟಿ ಮಾಡಲು ಪೊಲೀಸರು ನನಗೆ ಅವಕಾಶವನ್ನೇ ನೀಡಿರಲಿಲ್ಲ ಎಂದು ಮತ್ತೊಬ್ಬ ಆರೋಪಿ ಜೊಲ್ಲು ನವೀನ್ನ ತಂದೆ ಎಲ್ಲಪ್ಪ ಗದ್ಗದಿತರಾದರು. ಪೊಲೀಸರು ನನ್ನ ಮಗನನ್ನು ಭೇಟಿ ಮಾಡಲು ಮತ್ತು ಮಾತನಾಡಲು ಅವಕಾಶ ನೀಡಬೇಕಿತ್ತು. ನ್ಯಾಯಾಲವು ಅವರಿಗೆ ಶಿಕ್ಷೆ ವಿಧಿಸುವ ಮುನ್ನ ಅವರು ತಪ್ಪಿತಸ್ಥರೆಂದು ಸಾಬೀತುಪಡಿಸಲು ಪೊಲೀಸರಿಗೆ ಸಮಯವಿತ್ತು ಎಂದು ಎಲ್ಲಪ್ಪ ಹೇಳಿದರು.