ಸಜೀವ ದಹನವಾಗಲೆಂದೇ ವಿಜಯಾ ರೆಡ್ಡಿ ಶಿಕ್ಷಕಿ ಕೆಲಸ ಬಿಟ್ಟು ಬಂದರೇ...?!
ಹೈದರಾಬಾದ್, ನವೆಂಬರ್ 06: ಕೆಲವು ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ವಿಜಯಾ ರೆಡ್ಡಿ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆ ಕೆಲಸ ಬಿಡದೆ, ಶಿಕ್ಷಕಿಯಾಗೇ ಉಳಿದಿದ್ದರೆ ಇಂಥ ಘೋರ ಸಾವು ಕಾಣುತ್ತಿರಲಿಲ್ಲವೇನೋ!
ರೈತನೊಬ್ಬ ತಾಳ್ಮೆ ಕಳೆದುಕೊಂಡು ಆ ಕ್ಷಣದಲ್ಲಿ ಮಾಡಿದ ತಪ್ಪಿಗೆ ವಿಜಯಾ ರೆಡ್ಡಿ ಸುಟ್ಟು ಕರಕಲಾದರು. ಹತ್ತು ವರ್ಷ ವಯಸ್ಸಿನ ಪುಟ್ಟ ಮಗಳು, ಐದು ವರ್ಷ ವಯಸ್ಸಿನ ಪುಟ್ಟ ಮಗ ಹಾಗೂ ಪತಿಯ ಸುಂದರ ಕುಟುಂಬವನ್ನು ಆಕೆ ಅಗಲಿದ್ದಾರೆ.
ತಹಶೀಲ್ದಾರರಿಗೆ ಬೆಂಕಿಹಚ್ಚಿ ಕೊಂದು, ಪೊಲೀಸ್ ಠಾಣೆಗೆ ನಡೆದ ರೈತ
ಅವರು ಸಾಕಷ್ಟು ಆಸೆ ಪಟ್ಟು ಆರಿಸಿಕೊಂಡ ತಹಶೀಲ್ದಾರ್ ಕೆಲಸವೇ ಆಕೆಯನ್ನು ಬಲುತೆಗೆದುಕೊಂಡಿತು ಎಂಬುದು ಅವರ ಆಪ್ತರು, ಕುಟುಂಬಸ್ತರ ರೋದನ.
ಹೆಚ್ಚಿನ ಓದಿಗಾಗಿ ಶಿಕ್ಷಕಿ ಕೆಲಸ ಬಿಟ್ಟಿದ್ದ ವಿಜಯಾ
ಕೆಲ ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ವಿಜಯಾ ರೆಡ್ಡಿ, ಹೆಚ್ಚಿನ ಓದಿಗಾಗಿ ಆ ಕೆಲಸ ಬಿಟ್ಟಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅಬ್ದುಲ್ಲಾಪುರಮೇಟ್ ನ ಪ್ರಪ್ರಥಮ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು. 2018 ರಲ್ಲಿ ಅತ್ಯುತ್ತಮ ತಹಶೀಲ್ದಾರ್ ಪ್ರಶಸ್ತಿಯನ್ನೂ ಅವರು ಪಡೆದಿದ್ದರು.
ಹತ್ಯೆಗೆ ಕುಮ್ಮಕ್ಕು ನೀಡಲಾಗಿತ್ತೇ?
ರೈತ ಕೆ.ಸುರೇಶ್ ಅವರೇ ಈ ಹತ್ಯೆ ಮಾಡಿದ್ದು, ಹತ್ಯೆ ಮಾಡಲು ಅವರಿಗೆ ಬೇರೆ ಯಾರಾದರೂ ಕುಮ್ಮಕ್ಕು ನೀಡಿದ್ದರೆ ಎಂಬ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಸುರೇಶ್ ಅವರು ಘಟನೆಯಲ್ಲಿ ಶೇ. 70 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ.
ಡ್ರೈವರ್ ಗುರುನಾಥಮ್ ಸಾವು
ವಿಜಯಾ ರೆಡ್ಡಿ ಅವರಿಗೆ ರೈತ ಸುರೇಶ್ ಬೆಂಕಿ ಹಚ್ಚಿ ಕೊಲ್ಲಲು ಮುಂದಾದ ಸಂದರ್ಭದಲ್ಲಿ ಅವರನ್ನು ರಕ್ಷಿಸಲು ಬಂದ ಡರೈವರ್ ಗುರುನಾಥಮ್ ಅವರೂ ಶೇ.80 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾದರು.
ಆ ಭೀಕರ ಕೊಲೆ ಪ್ರಕರಣ
ತೆಲಂಗಾಣದ ರಂಗಾರೆಡ್ಡಿಜಿಲ್ಲೆ ಅಬ್ದುಲ್ಲಾಪುರಮೇಟ್ ಎಂಬಲ್ಲಿ ತಮ್ಮಚೇಂಬರ್ ನಲ್ಲಿದ್ದ ವಿಜಯಾ ರೆಡ್ಡಿ ಅವರನ್ನು ರೈತನೊಬ್ಬ ಭೇಟಿಯಾಗಲು ಬಂದಿದ್ದ. ತನ್ನ ಜಮೀನಿಗೆ ಸಂಬಂಧಿಸಿದ ಪ್ರಕರಣವನ್ನು ಕೋರ್ಟಿನಲ್ಲಿದ್ದು, ಆ ಕಾರಣ ಜಮೀನು ನೋಂದಾವಣೆಗೆ ವಿಳಂಬವಾಗುತ್ತಿದೆ ಎಂದು ತಹಶೀಲ್ದಾರ್ ಬಳಿ ವಾದ ಮಾಡುತ್ತಿದ್ದ. ಈ ವಾದವೇ ವಿಪರೀತಕ್ಕೆ ತಿರುಗಿ, ನಂತರ ಅವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಅವರನ್ನು ಸಜೀವವಾಗಿ ಬೆಂಕಿಹಚ್ಚಿ ಕೊಂದಿದ್ದ.