ತೆಲಂಗಾಣದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ; ಮೇ.29ರವರೆಗೂ ಬಂದ್!
ಹೈದ್ರಬಾದ್, ಮೇ.05: ನೊವೆಲ್ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಭಾರತವು ಲಾಕ್ ಡೌನ್ ತಂತ್ರವನ್ನು ಅನುಸರಿಸುತ್ತಿದೆ. ಇದೇ ಅಸ್ತ್ರವನ್ನು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಪ್ರಬಲವಾಗಿ ಬಳಸಿಕೊಳ್ಳುತ್ತಿದ್ದಾರೆ.
ಮಾರ್ಚ್ 23 ರಿಂದ ಏಪ್ರಿಲ್ 14ರವರೆಗೂ ಮೊದಲ ಹಂತದ ಭಾರತ ಲಾಕ್ ಡೌನ್ ಮುಗಿದಿದೆ. ನಂತರ ಮೇ.3ಕ್ಕೆ ಎರಡನೇ ಹಂತದ ಲಾಕ್ ಡೌನ್ ಕೂಡಾ ಮುಗಿದಿದ್ದು, ಕೇಂದ್ರ ಗೃಹ ಸಚಿವಾಲಯವು ಮೂರನೇ ಅವಧಿಗೆ ಲಾಕ್ ಡೌನ್ ವಿಸ್ತರಿಸಿದೆ. ದೇಶದಲ್ಲಿ ಮೇ.4 ರಿಂದ 17 ದಿನಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ.
ಬ್ರೇಕಿಂಗ್ ನ್ಯೂಸ್; ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ
ಕೇಂದ್ರ ಗೃಹ ಸಚಿವಾಲಯ ಮೇ.17ರವರೆಗೂ ಭಾರತ ಲಾಕ್ ಡೌನ್ ಗೆ ಆದೇಶಿಸಿದೆ. ಆದರೆ ತೆಲಂಗಾಣ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದ್ದು ಮೇ.29ರವರೆಗೂ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸುವುದಾಗಿ ತಿಳಿಸಿದೆ.
ಸಂಜೆ 6 ಗಂಟೆಯೊಳಗೆ ಅಗತ್ಯ ವಸ್ತುಗಳ ಖರೀದಿ:
ತೆಲಂಗಾಣದಲ್ಲಿ ಮೇ.29ರವರೆಗೂ ಲಾಕ್ ಡೌನ್ ವಿಸ್ತರಿಸಿದ್ದು ಸಂಜೆ 6 ಗಂಟೆಯೊಳಗೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮನವಿ ಮಾಡಿಕೊಂಡಿದ್ದಾರೆ. ಸಂಜೆ ಏಳು ಗಂಟೆಯಿಂದ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯೊಗಲಿದ್ದು, ಈ ಸಂದರ್ಭದಲ್ಲಿ ಮನೆಗಳಿಂದ ಹೊರ ಬರುವವರ ವಿರುದ್ಧ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು, ತೆಲಂಗಾಣದಲ್ಲಿ ಮಂಗಳವಾರ ಇದುವರೆಗೂ 1,096 ಜನರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ತಿಳಿದು ಬಂದಿದೆ. ಈವರೆಗೂ 628 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಕಿ ಉಳಿದ 439 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.