ಮೌನ ಮುರಿದ ಸಿಎಂ, ಸಿಎಎ ವಿರುದ್ಧ ನಿರ್ಣಯ ಅಂಗೀಕಾರ ಪಕ್ಕಾ
ಹೈದ್ರಾಬಾದ್, ಜನವರಿ.25: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿಚಾರದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೌನ ಮುರಿದಿದ್ದಾರೆ. ಆದಷ್ಟು ಬೇಗ ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸುವುದಾಗಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಶೇ.100ರಷ್ಟು ತಪ್ಪು ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಧರ್ಮದ ಆಧಾರದಲ್ಲಿ ಜನರನ್ನು ಅಳೆಯುವ ಕಾಯ್ದೆಗೆ ಬೆಂಬಲ ನೀಡುವ ಮಾತೇ ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಖಡಾಖಂಡಿತವಾಗಿ ತಿಳಿಸಿದ್ದಾರೆ.
ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜಸ್ಥಾನ ಸರ್ಕಾರ
ಭಾರತದ ಪಾಲಿಗೆ ಸಿಎಎ ಸಂವಿಧಾನದ ವಿರುದ್ಧ ರೂಪಿಸಿದ ಕಾಯ್ದೆಯಾಗಿದೆ. ಈ ಕಾಯ್ದೆಯನ್ನು ತಾವು ಬೆಂಬಲಿಸುವುದಿಲ್ಲ ಎಂದು ಈ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಫೋನ್ ಮೂಲಕ ತಿಳಿಸಿದ್ದೇನೆ ಎಂದು ಕೆಸಿಆರ್ ಸ್ಪಷ್ಟಪಡಿಸಿದರು.
ನಿರ್ಣಯ ಅಂಗೀಕರಿಸಿದ 4ನೇ ರಾಜ್ಯವಾಗುತ್ತಾ ತೆಲಂಗಾಣ?
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗಾಗಲೇ ಮೂರು ರಾಜ್ಯಗಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮೊದಲ ಬಾರಿಗೆ ಕೇರಳ ಸರ್ಕಾರವು ಸಿಎಎ ವಿರುದ್ಧ ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಅಂಗೀಕರಿಸಿತು. ಬಳಿಕ ಪಂಜಾಬ್ ಸರ್ಕಾರ ಹಾಗೂ ಶನಿವಾರ ರಾಜಸ್ಥಾನ ಸರ್ಕಾರವು ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದರೆ ನಾಲ್ಕನೇ ರಾಜ್ಯವಾಗಿ ಹೊರಹೊಮ್ಮಲಿದೆ.