ತೆಲಂಗಾಣ: ಅತ್ಯಾಚಾರ ಘಟನೆ ಬಗ್ಗೆ ತುಟಿ ಬಿಚ್ಚದ ಸಿಎಂ, ಅದ್ಧೂರಿ ಮದುವೆಯಲ್ಲಿ ಭಾಗಿ
ಹೈದರಾಬಾದ್, ಡಿಸೆಂಬರ್ 2: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಕುರಿತಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ಅವರ ಸಚಿವ ಸಂಪುಟದ ಪ್ರತಿಕ್ರಿಯೆ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ನಡೆದು ಮೂರು ದಿನಗಳ ಬಳಿಕ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಮೌನ ಮುರಿದಿದ್ದಾರೆ.
ಆದರೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾದ ಈ ಘಟನೆ ನಡೆದು ಎರಡು ದಿನಗಳ ಬಳಿಕವೂ ಯಾವುದೇ ಬಹಿರಂಗ ಹೇಳಿಕೆ ನೀಡದ ಕೆಸಿಆರ್ ಮತ್ತು ಅವರ ಸಚಿವ ಸಂಪುಟ ಐಷಾರಾಮಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿತ್ತು ಎಂಬ ಆಘಾತಕಾರಿ ಸಂಗತಿ ಚರ್ಚೆಗೆ ಒಳಗಾಗಿದೆ.
ಪಶುವೈದ್ಯೆ ಹತ್ಯೆ; ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ
ಎದೆನಡುಗಿಸುವಂತಹ ಅತ್ಯಾಚಾರ ಪ್ರಕರಣದ ವಿರುದ್ಧ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಧ್ವನಿ ಎತ್ತಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಮಹಿಳೆಯರ ಸುರಕ್ಷತೆಯ ಬಗ್ಗೆ ಚರ್ಚೆಯಾಗುತ್ತಿದೆ. ಜತೆಗೆ ದೂರು ನೀಡಿದ ಸಂದರ್ಭದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳದ ಪೊಲೀಸರ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ರಾಜ್ಯದಲ್ಲಿ ತಲೆತಗ್ಗಿಸುವಂತಹ ಕೃತ್ಯ ನಡೆದಿದ್ದರೂ ಕೆಸಿಆರ್ ಮತ್ತು ಅವರ ಸಚಿವ ಸಂಪುಟ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅದ್ಧೂರಿ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿತ್ತು.
ಅದ್ಧೂರಿ ಮದುವೆಯಲ್ಲಿ ಕೆಸಿಆರ್ ಭಾಗಿ
ಪಶುವೈದ್ಯೆ ಮೇಲಿನ ಅತ್ಯಾಚಾರದ ಕುರಿತು ರಾಷ್ಟ್ರವ್ಯಾಪಿ ಸಿಟ್ಟು ವ್ಯಕ್ತವಾಗುತ್ತಿದ್ದ ಸಂದರ್ಭದಲ್ಲಿ ಭಾನುವಾರ ಬೆಳಿಗ್ಗೆ ಹೈದರಾಬಾದ್ನಲ್ಲಿ ನಡೆದ ಕೆ. ಚಂದ್ರಶೇಖರ್ ರಾವ್, ತಮ್ಮ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಪಕ್ಷದ ಶಾಸಕ ರೇಖಾ ನಾಯ್ಕ್ ಅವರ ಮಗಳ ವಿಜೃಂಭಣೆಯ ಮದುವೆ ಸಮಾರಂಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಪಾಲ್ಗೊಂಡಿದ್ದರು.
ಸರ್ಕಾರದ ವಿರುದ್ಧ ಖಂಡನೆ
ಸಚಿವೆ ಸತ್ಯವತಿ ರಾಥೋಡ್, ರಾಜ್ಯಸಭಾ ಸಂಸದ ಕೇಶವ್ ರಾವ್, ಜೆ. ಸಂತೋಷ್, ಮಹಬೂಬಬಾದ್ ಶಾಸಕ ಶಂಕರ್ ನಾಯಕ್ ಮತ್ತು ಪಕ್ಷದ ಮತ್ತೊಬ್ಬ ಮುಖಂಡರು ಹೈದರಾಬಾದ್ನಲ್ಲಿ ನಡೆದ ರೇಖಾ ನಾಯ್ಕ್ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅವರು ಅದ್ಧೂರಿ ಮದುವೆಯಲ್ಲಿ ಭಾಗವಹಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಸಿಆರ್ ನಡೆಗೆ ಖಂಡನೆ ವ್ಯಕ್ತವಾಗಿದೆ.
ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ತಾಯಿ ಬಳಿ ಸುಳ್ಳು ಹೇಳಿದ್ದ ಆರೋಪಿ
ತ್ವರಿತಗತಿ ನ್ಯಾಯಾಲಯ
ಘಟನೆ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಇಷ್ಟು ದಿನವಾದರೂ ಕೆಸಿಆರ್, ಮಾಧ್ಯಮಗಳಿಗಾಗಲೀ, ಟ್ವಿಟರ್ ಮೂಲಕವಾಗಲೀ ಪ್ರತಿಕ್ರಿಯೆ ನೀಡಿಲ್ಲ.
'ಪಶುವೈದ್ಯೆಯ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಪ್ರಕರಣದ ವಿಚಾರಣೆಯನ್ನು ಫಾಸ್ಟ್ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಈ ಪ್ರಕರಣದ ವಿಚಾರಣೆ ನಡೆಸಲು ತ್ವರಿತ ವಿಚಾರಣಾ ನ್ಯಾಯಾಲಯ ಸ್ಥಾಪಿಸಲು ಕೂಡ ಅವರು ನಿರ್ಧರಿಸಿದ್ದಾರೆ' ಎಂದು ಹೇಳಿಕೆ ತಿಳಿಸಿದೆ.
ಕಾಯ್ದೆಗೆ ತಿದ್ದುಪಡಿ ತನ್ನಿ
ಕೆಸಿಆರ್ ಅವರ ಮಗ, ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಘಟನೆ ನಡೆದು ಮೂರು ದಿನಗಳ ನಂತರ ಟ್ವೀಟ್ ಮಾಡಿದ್ದು, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಮರಣದಂಡನೆ ವಿಧಿಸುವಂತೆ ಐಪಿಸಿ ಹಾಗೂ ಸಿಆರ್ಪಿಸಿ ಸೆಕ್ಷನ್ಗಳಿಗೆ ತಿದ್ದುಪಡಿ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.