ಭಾರತೀಯ ಪೌರತ್ವ ಕಳೆದುಕೊಂಡ ತೆಲಂಗಾಣ ಶಾಸಕ
ಹೈದರಾಬಾದ್, ನವೆಂಬರ್ 21:ತೆಲಂಗಾಣ ಶಾಸಕ ಚೆನ್ನಮಣೇನಿ ರಮೇಶ್ ಅವರ ನಾಗರಿಕತ್ವವನ್ನು ಭಾರತ ಸರ್ಕಾರ ರದ್ದುಗೊಳಿಸಿದೆ.
ತೆಲಂಗಾಣ ರಾಷ್ಟ್ರೀಯ ಸಮಿತಿಯಿಂದ ವೆಮುಲವಾಡ ಕ್ಷೇತ್ರದಿಂದ ಶಾಸಕರಾಗಿರುವ ರಮೇಶ್ ಜರ್ಮನಿಯ ನಾಗರಿಕತ್ವ ಹೊಂದಿದ್ದಾರೆ ಎನ್ನಲಾಗಿದೆ. ಭಾರತೀಯ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸುವ ಮುನ್ನ ದೇಶದಲ್ಲಿ ಒಂದು ವರ್ಷಕ್ಕೂ ಅಧಿಕ ಅವಧಿಗೆ ನೆಲೆಸಿಲ್ಲ ಎನ್ನುವ ಕಾರಣಕ್ಕೆ ಭಾರತೀಯ ನಾಗರಿಕತ್ವವನ್ನು ರದ್ದುಪಡಿಸಲಾಗಿದೆ. ಇದರಿಂದ ರಮೇಶ್ ಅವರ ನಾಗರಿಕತ್ವಕ್ಕೆ ಕೇಂದ್ರ ಗೃಹ ಇಲಾಖೆ ಕೊಕ್ಕೆ ಹಾಕಿದೆ.
ತೆಲಂಗಾಣ ಸಾರಿಗೆ ಮುಷ್ಕರದ ಪರಿಣಾಮ: ಮಹಿಳಾ ಕಂಡೆಕ್ಟರ್ ಆತ್ಮಹತ್ಯೆ
ಕೇಂದ್ರ ಸರ್ಕಾರದ ಈ ಕ್ರಮದಿಂದ ರಮೇಶ್ ಅವರ ಶಾಸಕತ್ವಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಹೊಸ ಆದೇಶದ ಪ್ರಕಾರ ರಮೇಶ್ ಅರು ಭಾರತೀಯ ನಾಗರಿಕತ್ವವನ್ನು ಹೊಂದಲು ಸಾಧ್ಯವಿಲ್ಲ. ಭಾರತೀಯ ನಾಗರಿಕರಾಗಿರದಿದ್ದರೆ ಶಾಸನ ಸಭೆಯ ಸದಸ್ಯರಾಗಿರಲು ಸಾಧ್ಯವಿಲ್ಲ.ಈ ಹಿನ್ನೆಲೆಯಲ್ಲಿ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ರಮೇಶ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಿಂದ ತನಗೆ ಧನಾತ್ಮಕ ಆದೇಶ ದೊರೆತಿತ್ತು. ಹೀಗಾಗಿ ಮತ್ತೆ ಕೋರ್ಟ್ಗೆ ತೆರಳಿ ಮಧ್ಯಂತರ ತಡೆಯಾಜ್ಞೆ ಪಡೆಯಲು ರಮೇಶ್ ನಿರ್ಧರಿಸಿದ್ದಾರೆ.
ಜನಪ್ರತಿನಿಧಿಯಾಗಿರಲಿ ಅಥವಾ ಸಾರ್ವಜನಿಕರಾಗಿರಲಿ ಕಾನೂನು ಎಲ್ಲರಿಗೂ ಒಂದೇ ಯಾರೊಬ್ಬರೂ ದೇಶದ ಕಾನೂನಿಗಿಂತ ಮೇಲಲ್ಲ, ಹೀಗಾಗಿ ಇಂತಹ ಆದೇಶ ಅನಿವಾರ್ಯವಾಗಿತ್ತು. ಭಾರತೀಯ ನಾಗರಿಕತ್ವಕ್ಕೆ ಸಂಬಂಧಿಸಿ ಭವಿಷ್ಯದಲ್ಲಿ ಇದು ಪ್ರಮುಖವಾಗಲಿದೆ.