ಕೊರೊನಾ ಜಾಗೃತಿಗಾಗಿ ಸಾರ್ವಜನಿಕ ಸಭೆಯಲ್ಲೇ ಚಿಕನ್ ಪೀಸ್ ತಿಂದ ಸಚಿವ
ಹೈದ್ರಾಬಾದ್, ಫೆಬ್ರವರಿ.29: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಕೋಳಿಯ ಮಾಂಸದಿಂದ ಹರಡುತ್ತದೆ ಎಂಬುದರ ಕುರಿತು ಸುಳ್ಳು ಸುದ್ದಿ ಮತ್ತು ವದಂತಿಗಳು ಹರಡುತ್ತಿದೆ. ಈ ಹಿನ್ನೆಲೆ ತೆಲಂಗಾಣದ ಸಚಿವರೊಬ್ಬರು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.
ಹೈದ್ರಾಬಾದ್ ನ ತಂಕ್ ಬಂದ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲೇ ಸಚಿವ ಕೆ.ಟಿ. ರಾಮ್ ರಾವ್, ಇಟೇಲ ರಾಜೇಂದರ್, ತಲಸನಿ ಶ್ರೀನಿವಾಸ್ ಯಾದವ್ ಚಿಕನ್ ಪೀಸ್ ತಿನ್ನುವ ಮೂಲಕ ಕೋಳಿ ಮಾಂಸದಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂಬುದನ್ನು ವಿಭಿನ್ನ ರೀತಿಯಲ್ಲಿ ಸಾರಿ ಹೇಳಿದ್ದಾರೆ.
ಕೋಳಿ ಮಾಂಸದಿಂದ ಕೊರೊನಾ ವೈರಸ್? ರಾಜ್ಯ ಸರ್ಕಾರ ಸ್ಪಷ್ಟನೆ
ಕೊರೊನಾ ವೈರಸ್ ಎಂಬ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆಯೇ ವಿನಃ, ಕೋಳಿ ಮಾಂಸ ತಿನ್ನುವುದರಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕರ್ನಾಟಕ ಸರ್ಕಾರದಿಂದಲೂ ಸ್ಪಷ್ಟನೆ:
ಕೊರೊನಾ ವೈರಸ್ ಗೆ ಕೋಳಿಯ ಮಾಂಸ ಕಾರಣವಲ್ಲ. ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದೆಲ್ಲ ಸುಳ್ಳು ಸುದ್ದಿಯಾಗಿದ್ದು, ಇಂಥ ವದಂತಿಗಳಿಗೆ ಯಾರೂ ಕಿವಿಗೊಡದಂತೆ ಕರ್ನಾಟಕ ಸರ್ಕಾರ ಕೂಡ ಸ್ಪಷ್ಟನೆ ನೀಡಿದೆ. ಇದರ ಜೊತೆಗೆ ರಾಜ್ಯದಲ್ಲಿ ಈವರೆಗೂ ಒಂದೇ ಒಂದು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.