ತೆಲಂಗಾಣದಲ್ಲಿ ಕೋವಿಡ್ ಲಾಕ್ಡೌನ್ ಸಂಪೂರ್ಣ ತೆರವು: ಎಲ್ಲಾ ನಿರ್ಬಂಧಗಳಿಗೆ ಅಂತ್ಯ
ಹೈದರಾಬಾದ್, ಜೂ.19: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಕಡಿಮೆಯಾಗುತ್ತಿರುವ ಹಿನ್ನೆಲೆ ತೆಲಂಗಾಣ ಸರ್ಕಾರ ರಾಜ್ಯವನ್ನು ಸಂಪೂರ್ಣವಾಗಿ ಪುನಃ ಅನ್ಲಾಕ್ ಮಾಡಲು ನಿರ್ಧರಿಸಿದೆ. "ಲಾಕ್ ಡೌನ್ ಸಮಯದಲ್ಲಿ ವಿಧಿಸಲಾದ ಎಲ್ಲಾ ರೀತಿಯ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಹಾಕಿ" ಎಂದು ಸರ್ಕಾರ ಆದೇಶಿಸಿದೆ.
"ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ, ಪಾಸಿಟಿವ್ ಸಂಖ್ಯೆ ಶೇಕಡಾವಾರು ಗಮನಾರ್ಹವಾಗಿ ಕಡಿಮೆಯಾಗಿದೆ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ವೈದ್ಯಕೀಯ ಅಧಿಕಾರಿಗಳು ನೀಡಿದ ವರದಿಗಳನ್ನು ಆಧರಿಸಿ ಸಂಪೂರ್ಣ ಲಾಕ್ಡೌನ್ ತೆಗೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದು ಮುಖ್ಯಮಂತ್ರಿಗಳ ಕಚೇರಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ.
ತೆಲಂಗಾಣ; ರಾಜ್ಯದಲ್ಲಿ 10 ದಿನದ ಸಂಪೂರ್ಣ ಲಾಕ್ಡೌನ್ ಘೋಷಣೆ
"ಜುಲೈ 1 ರಿಂದ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಪೂರ್ಣ ಸಿದ್ಧತೆಯೊಂದಿಗೆ ಪುನಃ ತೆರೆಯುವಂತೆ ಸಂಪುಟ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ವಿದ್ಯಾರ್ಥಿಗಳಿಗೆ ದೈಹಿಕವಾಗಿ ತರಗತಿಗಳಿಗೆ ಹಾಜರಾಗಲು ಅವಕಾಶವಿದೆ" ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
"ಶಿಕ್ಷಣ ಸಂಸ್ಥೆಗಳು ಪುನಃ ತೆರೆಯುವುದರೊಂದಿಗೆ, ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ, ಆನ್ಲೈನ್ ತರಗತಿಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆಗೆ ಸಂಪುಟ ಸೂಚನೆ ನೀಡಿದೆ" ಎಂದು ಪ್ರಕಟಣೆ ಹೇಳಿದೆ.
ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳು ಕಳೆದ ಮಾರ್ಚ್ನಿಂದ ಮುಚ್ಚಲ್ಪಟ್ಟಿವೆ. ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ಹಾಜರಾಗುತ್ತಿದ್ದಾರೆ. ಆದರೆ ಡಿಜಿಟಲ್ ವ್ಯವಸ್ಥೆ ಇಲ್ದೆ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲಾಗುತ್ತಿಲ್ಲ.
ತೆಲಂಗಾಣದಲ್ಲಿ ಬ್ಲ್ಯಾಕ್ ಫಂಗಸ್ ಕುರಿತು ಹೊಸ ಅಧಿಸೂಚನೆ
ಕೊರೊನಾ ಸೋಂಕಿನಿಂದಾಗಿ ದೇಶದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ತೆಲಂಗಾಣವು ಶುಕ್ರವಾರ ಕೇವಲ 1.14 ರಷ್ಟು ಪ್ರಕರಣಗಳ ಕೊರೊನಾ ಪಾಸಿಟಿವ್ ವರದಿ ಮಾಡಿದೆ.
ದೈನಂದಿನ ಪ್ರಕರಣಗಳ ಸಂಖ್ಯೆ 24 ಗಂಟೆಗಳಲ್ಲಿ ಕೇವಲ 1,400 ಕ್ಕಿಂತ ಹೆಚ್ಚಿದ್ದರೆ, ಕೋವಿಡ್-ಸಂಬಂಧಿತ ಸಾವುಗಳ ಸಂಖ್ಯೆ 12 ಆಗಿದೆ. ಕೋವಿಡ್ ಅನ್ನು ಹಿಮ್ಮೆಟ್ಟಿಸಲು ರಾಜ್ಯ ಸರ್ಕಾರ ವಿಧಿಸಿದ ಕಟ್ಟುನಿಟ್ಟಾದ ಲಾಕ್ ಡೌನ್ ಕಾರಣವಾಗಿತ್ತು.
ಕೆ ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರವು ಜೂನ್ 9 ರಂದು ಲಾಕ್ ಡೌನ್ ಅನ್ನು 10 ದಿನಗಳವರೆಗೆ ವಿಸ್ತರಿಸಿದೆ. ಕೊರೊನಾ ಅಲೆ ಕ್ಷೀಣಿಸುವ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಹಲವಾರು ನಿರ್ಬಂಧಗಳನ್ನು ಸಡಿಲಗೊಳಿಸಿತ್ತು. ಇದೀಗ ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಕಳೆದ ಎರಡು ತಿಂಗಳುಗಳಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಕೊರೊನಾ ಎರಡನೇ ಅಲೆಯು ಕ್ರಮೇಣ ದೇಶದ ಇತರ ಭಾಗಗಳಿಂದಲೂ ಕಡಿಮೆಯಾಗುತ್ತಿದೆ. ಶನಿವಾರ, ಭಾರತದಲ್ಲಿ 24 ಗಂಟೆಗಳಲ್ಲಿ 60,753 ಹೊಸ ಪ್ರಕರಣಗಳು ಮತ್ತು 1,647 ಸಾವುಗಳನ್ನು ವರದಿಯಾಗಿದೆ.
ಕೋವಿಡ್-ಹಾನಿಗೊಳಗಾದ ಅನೇಕ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ದೆಹಲಿಯು ಸಹ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈ ನಡುವೆ ಕೊರೊನಾ ಮೂರನೇ ಅಲೆ ಬರಲಿದೆ. ಕೋವಿಡ್ ವಿರೋಧಿ ನಿಯಮಗಳನ್ನು ನಿರ್ಲಕ್ಷಿಸಿದರೆ ಮುಂಬರುವ ತಿಂಗಳುಗಳಲ್ಲಿ ದೇಶಕ್ಕೆ ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ.
"ನಾವು ಅನ್ಲಾಕ್ ಮಾಡಲು ಪ್ರಾರಂಭಿಸಿದಂತೆ, ಮತ್ತೆ ಕೋವಿಡ್ಗೆ ಹಲವಾರು ಮಂದಿ ಮಾರ್ಗಸೂಚಿ ಸರಿಯಾಗಿ ಪಾಲಿಸುತ್ತಿಲ್ಲ. ಮೊದಲ ಮತ್ತು ಎರಡನೆಯ ಅಲೆಯಲ್ಲಿ ಏನಾಗಿದೆ ಎಂಬುದನ್ನು ನಾವು ಕಲಿತಂತೆ ಕಾಣುತ್ತಿಲ್ಲ. ಮತ್ತೆ, ಜನಸಂದಣಿ ಹೆಚ್ಚುತ್ತಿದೆ. ಜನರು ಗುಂಪು ಸೇರುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಸ್ವಲ್ಪವೇ ಸಮಯ ಸಾಕಾಗುತ್ತದೆ. ಮೂರನೇ ಅಲೆ ಅನಿವಾರ್ಯ, ಮತ್ತು ಇದು ಮುಂದಿನ ಆರರಿಂದ ಎಂಟು ವಾರಗಳಲ್ಲಿ ದೇಶದಲ್ಲಿ ಬರಲಿದೆ," ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಎನ್ಡಿಟಿವಿಗೆ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)