ತೆಲಂಗಾಣ ಪಠ್ಯಪುಸ್ತಕದಲ್ಲಿ ಬಸವಣ್ಣನ ದರ್ಶನ
ಬೆಂಗಳೂರು, ಡಿಸೆಂಬರ್ 4; ಮಹಾನ್ ಮಾನವತಾವಾದಿ, ೧೨ ನೇ ಶತಮಾನದ ಕ್ರಾಂತಿಕಾರಕ ಸಮಾಜ ಸುಧಾರಕ ಬಸವಣ್ಣನವರು ಅಂದು ನೀಡಿದ ಜೀವನ ಸಂದೇಶಗಳು, ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ಕಾಲಕಾಲಕ್ಕೆ ಸಾಬೀತಗೊಳ್ಳುತ್ತಾ ಬರುತ್ತಿವೆ.
ತೆಲಂಗಾಣ ಸರ್ಕಾರ ಬಸವಣ್ಣನವ ಸಂದೇಶಗಳನ್ನು ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೂ ತಿಳಿಸಬೇಕು ಎಂಬ ಸದುದ್ದೇಶದಿಂದ ಬಸವಣ್ಣರ ಜೀವನ ಚರಿತ್ರೆ ಹಾಗೂ ಸಂದೇಶಗಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಲು ಅಲ್ಲಿನ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
ಹಾಗೂ ಸಮಾಜ ವಿಜ್ಞಾನ ಪುಸ್ತಕಗಳಲ್ಲಿ
ಈ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಶಿಕ್ಷಣ ಸಂಶೋದನಾ ಮಂಡಳಿ ಪಠ್ಯಪುಸ್ತಕದಲ್ಲಿ ಬಸವಣ್ಣನ ಜೀವನ ಚರಿತ್ರೆ ಹಾಗೂ ಅವರ ಸಂದೇಶಗಳನ್ನು ಕಟ್ಟಿ ಕೊಡಲು ಕಾರ್ಯಪ್ರವೃತ್ತವಾಗಿದೆ ಎಂದು ತೆಲಂಗಾಣ ಶಿಕ್ಷಣ ಇಲಾಖೆ ಕಾರ್ಯದರ್ಶಿ ಜನಾರ್ಧನ ರೆಡ್ಡಿ ಅವರು ತಿಳಿಸಿದ್ದಾರೆ. ಬಸವಣ್ಣನವರು ಕೇವಲ ಒಂದು ರಾಜ್ಯ ಅಥವಾ ಒಂದು ಧರ್ಮಕ್ಕೆ ಸೇರಿದವರಲ್ಲ. ಅವರ ಜೀವನ ಚರಿತ್ರೆ ಹಾಗೂ ಸಂದೇಶಗಳು ಇಂದಿನ ಪೀಳಿಗೆಗೆ ಬೇಕಿದೆ ಎಂದು ಹೇಳಿದ್ದಾರೆ. ಇನ್ಮುಂದೆ ತೆಲಂಗಾಣದ ತೆಲುಗು ಭಾಷೆ ಹಾಗೂ ಸಮಾಜ ವಿಜ್ಷಾನದ ಶಾಲಾ ಪುಸ್ತಕಗಳಲ್ಲಿ ಅಣ್ಣ ಬಸವಣ್ಣನವರು ಮಕ್ಕಳಿಗೆ ಜೀವನ ಬೆಳಕು ನೀಡಲಿದ್ದಾರೆ. ಅಲ್ಲದೇ ಕಾಲೇಜು, ವಿಶ್ವವಿದ್ಯಾಲಯಗಳ ಪಠ್ಯದಲ್ಲೂ ಬಸವಣ್ಣರ ಕುರಿತು ಪಠ್ಯ ಅಳವಡಿಸಬೇಕು ಎಂಬ ಚರ್ಚೆಯನ್ನು ಸರಕಾರ ನಡೆಸಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಚಿತ್ರಹಾಕದಿದ್ದರೆ ಹೋರಾಟ: ಎಚ್ಚರಿಕೆ
ಕಾರ್ಯಗತ ಹೇಗೆ?
ಈಗಾಗಲೇ ತೆಲಂಗಾಣ ಶಿಕ್ಷಣ ಇಲಾಖೆ ಪಠ್ಯ ಪುಸ್ತಕದಲ್ಲಿ ಬಸವಣ್ಣವರ ಕುರಿತು ಮಾಹಿತಿ ಅಳವಡಿಕೆಗೆ ಕ್ರಮ ಕೈಗೊಂಡಿರುವುದರಿಂದ ತೆಲಗು ಭಾಷೆಯಲ್ಲಿ ಬಸವಣ್ಣನವರ ಪ್ರಮುಖ ವಚನಗಳು ಪ್ರಕಟಗೊಳ್ಳಲಿವೆ. ಇನ್ನು ಸಮಾಜ ವಿಜ್ಞಾನ ಪುಸ್ತಕಗಳಲ್ಲಿ ಬಸವಣ್ಣನವರ ಜೀವನ, ಸಮಾಜ ಸುಧಾರಣೆ ಹಾಗೂ ಅವರ ಸಂದೇಶಗಳು ಇರಲಿವೆ. ಕಳೆದ ಐದು ವರ್ಷದ ಹಿಂದೆ ಲಂಡನ್ ನ ಥೇಮ್ಸ್ ನದಿ ದಂಡೆಯ ಮೇಲೆ ಅಲ್ಲಿನ ಸರಕಾರ ಬಸವಣ್ಣನವರ ಪುತ್ಥಳಿಯನ್ನು ನಿರ್ಮಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ತೆಲಂಗಾಣ ಸರಕಾರದ ಈ ನಿರ್ಧಾರವನ್ನು ರಾಜ್ಯದ ಅನೇಕ ಸಾಹಿತಿಗಳು ಚಿಂತಕರು ಸ್ವಾಗತಿಸಿದ್ದಾರೆ.
ಸಮಾಜ ಸುಧಾರಕ
ಕ್ರಿ.ಶ ೧೨ ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಬಸವಣ್ಣನವರು ಭಾರತದ ಇತಿಹಾಸದಲ್ಲಿ ಅತಿದೊಡ್ಡ ಸಮಾಜ ಸುಧಾರಕರು. ಮೂಢನಂಬಿಕೆ, ಕಂದಾಚಾರ, ಜಾತಿ ವ್ಯವಸ್ಥೆ, ಅಸಮಾನತೆಯ ವಿರುದ್ಧ ತಮ್ಮದೇಯಾದ ಕೂಡಲಸಂಗಮದೇವನ ಅಂಕಿತದ ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದರು. ಸಮಾಜದ ಅಂಕುಡೊಂಕುಗಳ ಬಗ್ಗೆ ಸಹಸ್ರಾರು ವಚನಗಳನ್ನು ಬರೆದು ಸಮಾಜದ ಓರೆಕೋರೆಗಳನ್ನು ತಿದ್ದಿ, ಮಹಾನ್ ಕ್ರಾಂತಿಪುರುಷರಾದರು.
ಪ್ರಜಾಪ್ರಭುತ್ವಕ್ಕೆ ಬುನಾದಿ
ಬಸವಣ್ಣನವರು ಹಾಗೂ ಅಂದಿನ ಕಾಳದ ಸಮಾನ ಮನಸ್ಕ ಶರಣರು ಕೂಡಿಕೊಂಡು ಅನುಭವ ಮಂಟಪ ಎಂಬ ಪರಿಕಲ್ಪನೆಯನ್ನು ಹುಟ್ಟಿಹಾಕಿದರು. ಇಲ್ಲಿ ಅನೇಕ ಶರಣರು ಯಾವುದೇ ತಾರತಮ್ಯವಿಲ್ಲದೇ ಒಂದು ಕಡೆ ಸೇರಿ ಸಮಾಜದ ಒಳಿತಿನ ಬಗ್ಗೆ, ಆದ್ಯಾತ್ಮಿಕತೆಯ ಬಗ್ಗೆ ಚಿಂತಿಸುತ್ತಿದ್ದರು. ಇದೇ ಇಂದಿನ ಪ್ರಜಾಪ್ರಭುತ್ವದ ಮೊದಲ ಮೆಟ್ಟಿಲು ಎಂಬುದು ಜನಜನಿತ.