ತೆಲಂಗಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ: ಅಂಕದ ಬದಲು ಗ್ರೇಡ್
ಹೈದರಾಬಾದ್, ಜೂನ್ 8: ತೆಲಂಗಾಣದಲ್ಲಿ ಹತ್ತನೇ ತರಗತಿ ಪರೀಕ್ಷೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರೀಕ್ಷೆ ಇಲ್ಲದೆಯೇ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಂಟರ್ನಲ್ ಅಸೆಸ್ಮೆಂಟ್ನಲ್ಲಿ ಬಂದಿರುವ ಅಂಕಗಳ ಅನುಸಾರ ಅವರಿಗೆ ಗ್ರೇಡ್ ನೀಡಲಾಗುತ್ತಿದೆ ಮುಂದಿನ ತರಗತಿಗೆ ಹೋಗಬಹುದಾಗಿದೆ ಎಂದು ಹೇಳಿದ್ದಾರೆ. ಲಾಕ್ಡೌನ್ ಸಡಿಲಗೊಳಿಸಿದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಿಗೂ ಪರೀಕ್ಷೆಯದ್ದೇ ದೊಡ್ಡ ತಲೆನೋವಾಗಿದೆ. ಕರ್ನಾಟಕದಲ್ಲೂ ಕೂಡ ಹಲವು ತಜ್ಞರು ಹತ್ತನೇ ತರಗತಿ ಪರೀಕ್ಷೆ ನಡೆಸಬೇಡಿ ಎಂದೇ ಸಚಿವರಿಗೆ ಸಲಹೆ ನೀಡಿದ್ದರು.
ಆದರೂ ಹತ್ತನೇ ತರಗತಿ ಪರೀಕ್ಷೆ ದಿನಾಂಕ ಪ್ರಕಟಿಸಲಾಗಿದೆ. ಅದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಬಾಕಿ ಉಳಿದಿದ್ದ ವಿಷಯದ ಪರೀಕ್ಷೆಯ ದಿನಾಂಕವನ್ನೂ ಘೋಷಣೆ ಮಾಡಿದ್ದಾರೆ. ತೆಲಂಗಾಣದಲ್ಲಿ 3496 ಮಂದಿ ಕೊರೊನಾ ಸೋಂಕಿತರಿದ್ದಾರೆ. 1710 ಮಂದಿ ಗುಣಮುಖರಾಗಿದ್ದಾರೆ. 123 ಮಂದಿ ಮೃತಪಟ್ಟಿದ್ದಾರೆ.