ತೆಲಂಗಾಣ: ಕೊರೊನಾ ಲಸಿಕೆ ಪಡೆದಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು
ಹೈದರಾಬಾದ್,ಜನವರಿ 24:ಕೊರೊನಾ ಲಸಿಕೆ ಪಡೆದಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ವಾರಂಗಲ್ ನಗರದ ಶ್ಯಾಮ್ ಪೇಟ್ ಪ್ರದೇಶದಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ದೀನ್ ದಯಾಳ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಪಾಕಿಸ್ತಾನದಲ್ಲಿ ಸ್ಪುಟ್ನಿಕ್ 5 ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ
ಜ.19 ರಂದು ಇವರಿಗೆ ಹೊಸ ಶ್ಯಾಂಪೇಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆಯನ್ನು ನೀಡಲಾಗಿತ್ತು. ಜ.23 ರಂದು ರಾತ್ರಿ ಈಕೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಅಸಿಡಿಟಿಯ ಕಾರಣದಿಂದಾಗಿ ಈ ರೀತಿಯಾಗಿರಬಹುದು ಎಂದುಕೊಂಡು ಮಾತ್ರೆ ಸೇವಿಸಿ ಮಲಗಿದ್ದಾರೆ. ಆದರೆ ಬೆಳಿಗ್ಗೆ ವೇಳೆಗೆ ಆಕೆ ಸಾವನ್ನಪ್ಪಿದ್ದಾರೆ.
ಮರಣೋತ್ತರ ವರದಿ ಬರುವವರೆಗೂ ಕೋವಿಡ್-19 ಲಸಿಕೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ತೆಲಂಗಾಣದಲ್ಲಿ ನಿರ್ಮಲ್ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೋರ್ವ ಕೋವಿಡ್-19 ಲಸಿಕೆಯನ್ನು ಪಡೆದ 18 ಗಂಟೆಗಳಲ್ಲಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕುಟುಂಬ ಸದಸ್ಯರು ಕೋವಿಡ್-19 ಲಸಿಕೆಯಿಂದಾಗಿಯೇ ವನಿತಾ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತರಿಗೆ ಮಧುಮೇಹ ಹಾಗೂ ರಕ್ತದ ಒತ್ತಡದ ಸಮಸ್ಯೆ ಈ ಹಿಂದೆಯೇ ಇತ್ತು ಎಂದು ತಿಳಿದುಬಂದಿದೆ.
ಕುಟುಂಬ ಸದಸ್ಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಸುಬೇದಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾರಂಗಲ್ ನಗರ ಜಿಲ್ಲಾಧಿಕಾರಿ ರಾಜೀವ್ ಗಾಂಧಿ ಹನುಂತು ಈ ಬಗ್ಗೆ ಮಾತನಾಡಿದ್ದು, ಎಂಜಿಎಂ ಆಸ್ಪತ್ರೆ ವೈದ್ಯರೊಂದಿಗೆ ಮಾತನಾಡಿ ಮೃತರ ಮರಣೋತ್ತರ ವರದಿಯ ಬಳಿಕವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.