ವಂಚನೆ : ಬಿಜೆಪಿ ಮುಖಂಡ ಮುರಳೀಧರ್ ರಾವ್ ವಿರುದ್ಧ ಎಫ್ಐಆರ್
ಹೈದರಾಬಾದ್, ಮಾರ್ಚ್ 27: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಸೇರಿದಂತೆ 8 ಮಂದಿ ಮೇಲೆ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ. ದಂಪತಿಗೆ 2.17 ಕೋಟಿ ರು ಮೋಸ ಮಾಡಿದ ಆರೋಪ ಹೊರೆಸಲಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಈ ಹಳೆ ಪ್ರಕರಣ ಮುಜುಗರ ಉಂಟು ಮಾಡುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮುರಳೀಧರರಾವ್, ಕೃಷ್ಣ ಕಿಶೋರ್, ಈಶ್ವರ್ ರೆಡ್ಡಿ, ರಾಮಚಂದ್ರ ರೆಡ್ಡಿ, ಗಜಲಾ ಹನುಮಂತ ರಾವ್, ಸಾಮ ಚಂದ್ರಶೇಖರ್ ರೆಡ್ಡೀ, ಬಾಬಾ, ಶ್ರೀಕಾಂತ್, ಜಿ ಶ್ರೀನಿವಾಸ್ ಎಂಬುವರ ವಿರುದ್ಧ ಸಿಆರ್ ಪಿಸಿ ವಿವಿಧ ಸೆಕ್ಶನ್ ಗಳ ಅಡಿಯಲ್ಲಿ ಮಾರ್ಚ್ 25ರಂದು ದೂರು ದಾಖಲಾಗಿತ್ತು. 41ವರ್ಷ ವಯಸ್ಸಿನ ಪ್ರವರ್ಣ ರೆಡ್ಡಿ ಎಂಬುವರು ದೂರು ನೀಡಿದ್ದರು.
ಸರ್ಕಾರಿ ಸ್ವಾಮ್ಯದ ಫಾರ್ಮಾ ಎಕ್ಸಿಲ್ ಕಂಪನಿಯ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಮಾಡುವುದಾಗಿ ನಂಬಿಸಿ 2015ರಲ್ಲಿ ಈ ಆರೋಪಿಗಳು ಮೋಸ ಮಾಡಿದ್ದಾರೆ.
ಪ್ರವರ್ಣ ರೆಡ್ಡಿ ಅವರ ಪತಿಗೆ ಈ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ ಈಶ್ವರ್ ರೆಡ್ಡಿ, ಕೃಷ್ಣ ಕಿಶೋರ್ ಅವರ ಹೆಸರೆತ್ತಿ, ಆತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಅವರಿಗೆ ಆಪ್ತ ಎಂದಿದ್ದಾನೆ. ಕಿಶೋರ್ ನೆರವಿನಿಂದ ಯಾವುದೇ ಹುದ್ದೆಯನ್ನು ಪಡೆಯುವುದು ಸುಲಭ ಎಂದಿದ್ದಾರೆ. ಇದಕ್ಕಾಗಿ ಸ್ವಲ್ಪ ಹಣ ನೀಡುವಂತೆ ಪುಸಲಾಯಿಸಿದ್ದಾನೆ.
ಆದರೆ, ಇದನ್ನು ಪ್ರವರ್ಣ ರೆಡ್ಡಿ ಅವರು ನಂಬಿರಲಿಲ್ಲ. ನಂತರ ಕಿಶೋರ್ ಹಾಗೂ ರಾಮಚಂದ್ರ ರೆಡ್ಡಿ ಜತೆಗೂಡಿಗೊಂಡ ಈಶ್ವರ್ ಮತ್ತೊಂದು ಸುತ್ತಿನ ಮಾತುಕತೆ, ಒತ್ತಡ ತಂತ್ರ ಅನುಸರಿಸಿದ್ದಾನೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ, ಸಹಿ ಇರುವ ಆಫರ್ ಲೆಟರ್ ಕೂಡಾ ತೋರಿಸಿ ನಂಬಿಸಿದ್ದಾನೆ. ದಂಪತಿಯಿಂದ 2.17 ಕೋಟಿ ರು ಪಡೆದ ಬಳಿಕ ನಾಪತ್ತೆಯಾಗಿದ್ದಾನೆ. ಈಶ್ವರ್, ರಾಮಚಂದ್ರ, ಕಿಶೋರ್ ಸೇರಿದಂತೆ ಹಲವರಿಗೆ ಹಲವು ಬಾರಿ ಫೋನ್ ಕರೆ ಮಾಡಿದರೂ ಪ್ರಯೋಜನವಾಗದ ಕಾರಣ, ಸಂತ್ರಸ್ತರು ದೂರು ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.