4 ರಾಜ್ಯಗಳ ಜೊತೆಗೆ ತೆಲಂಗಾಣಕ್ಕೆ ಚುನಾವಣೆ, ಆಯೋಗ ಹೇಳುವುದೇನು?
ಹೈದರಾಬಾದ್, ಸೆಪ್ಟೆಂಬರ್ 07 : ನಿರೀಕ್ಷೆಯಂತೆ ಅವಧಿಗೆ ಮೊದಲೇ ತೆಲಂಗಾಣ ವಿಧಾನಸಭೆ ವಿಸರ್ಜನೆಗೊಂಡಿದೆ. ಸದ್ಯ, ವಿಧಾನಸಭೆ ಚುನಾವಣೆ ಯಾವಾಗ ನಡೆಯಲಿದೆ ಎಂಬ ಚರ್ಚೆ ಆರಂಭವಾಗಿದೆ. ಚುನಾವಣಾ ಆಯೋಗ ಈ ಕುರಿತು ಪರಿಶೀಲನೆ ನಡೆಸುತ್ತಿದೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್ ಅವರು ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. 'ಇತರ ನಾಲ್ಕು ರಾಜ್ಯಗಳ ಜೊತೆಗೆ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಸಬಹುದೇ? ಎಂದು ಪರಿಶೀಲನೆ ನಡೆಸಲಾಗುತ್ತದೆ' ಎಂದು ಹೇಳಿದರು.
ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?
ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ವಿಜೋರಾಂ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಅದರ ಜೊತೆಗೆ ತೆಲಂಗಾಣಕ್ಕೂ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಇದೇ ನಿರೀಕ್ಷೆಯನ್ನು ಇಟ್ಟುಕೊಂಡೇ ವಿಧಾನಸಭೆಯನ್ನೂ ಕೂಡಾ ವಿಸರ್ಜನೆ ಮಾಡಲಾಗಿದೆ.
ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಮಹತ್ವದ ರಾಜಕೀಯ ನಡೆ
ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಬೆಳವಣಿಗೆಯನ್ನು ತಡೆಯಲು ಕೆ.ಚಂದ್ರಶೇಖರರಾವ್ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ ಎಂಬುದು ಸದ್ಯದ ವಿಶ್ಲೇಷಣೆ. ರಾಹುಲ್ ಗಾಂಧಿ ಕೆಲವು ದಿನಗಳ ಹಿಂದೆ ಹೈದರಾಬಾದ್ಗೆ ಭೇಟಿ ನೀಡಿದ್ದರು,ಬಳಿಕ ಕಾಂಗ್ರೆಸ್ನಲ್ಲಿ ಚಟುವಟಿಕೆಗಳು ಬಿರುಸುಗೊಂಡಿದ್ದವು.
ರಾಹುಲ್ ಗಾಂಧಿ ದೇಶದ ಅತಿ ದೊಡ್ಡ ಬಫೂನ್: ಕೆಸಿಆರ್
ಚುನಾವಣಾಧಿಕಾರಿಗಳ ಜೊತೆ ಚರ್ಚೆ
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್ ಅವರು, 'ಮೊದಲು ತೆಲಂಗಾಣದ ರಾಜ್ಯ ಚುನಾವಣಾ ಆಯುಕ್ತರ ಜೊತೆ ಚರ್ಚೆ ನಡೆಸಲಾಗುತ್ತದೆ. ನಂತರ ಆಡಿಟ್ ನಡೆಸಲಾಗುತ್ತದೆ. ರಾಜ್ಯಕ್ಕೆ ಭೇಟಿ ನೀಡಿ, ಯಾವಾಗ ಚುನಾವಣೆ ನಡೆಸಬೇಕು?' ಎಂದು ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ವಿಜೋರಾಂ ರಾಜ್ಯಗಳಿಗೆ 2018ರ ಅಂತ್ಯದಲ್ಲಿ ಚುನಾವಣೆ ನಡೆಯಲಿದೆ. ಆಗಲೇ ತೆಲಂಗಾಣಕ್ಕೂ ಚುನಾವಣೆ ನಡೆಯಲಿದೆಯೇ ಕಾದು ನೋಡಬೇಕು.
ಅಭ್ಯರ್ಥಿಗಳ ಪಟ್ಟಿ ಪ್ರಕಟ
ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳ ಪೈಕಿ 105 ಸ್ಥಾನಗಳಿಗೆ ಕೆ.ಸಿ.ಚಂದ್ರಶೇಖರರಾವ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ವಿಜೋರಾಂ ರಾಜ್ಯಗಳ ಜೊತೆಗೆ ತೆಲಂಗಾಣಕ್ಕೆ ಚುನಾವಣೆ ನಡೆಯಲಿದೆ ಎಂಬುದು ಚಂದ್ರಶೇಖರರಾವ್ ಅವರ ನಿರೀಕ್ಷೆಯಾಗಿದೆ.
'ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಐಎಂಐಎಂ ಜೊತೆ ಸ್ನೇಹಪೂರ್ವಕವಾದ ಸಂಬಂಧ ಇದೆ. ಆದರೂ ಕೆಲವು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ನಡೆಯಲಿದೆ' ಎಂದು ಕೆ.ಸಿ.ಚಂದ್ರಶೇಖರರಾವ್ ಹೇಳಿದ್ದಾರೆ.
ಸರಣಿ ಸಮಾವೇಶಗಳ ಆಯೋಜನೆ
9 ತಿಂಗಳ ಮೊದಲೇ ವಿಧಾನಸಭೆ ವಿಸರ್ಜನೆ ಮಾಡಿ ಕೆ.ಸಿ.ಚಂದ್ರಶೇಖರರಾವ್ ಚುನಾವಣೆಗೆ ಹೋಗಿದ್ದಾರೆ. ಆದ್ದರಿಂದ, ವಿರೋಧ ಪಕ್ಷಗಳು ಅವರ ವಿರುದ್ಧ ಒಂದಾಗುವ ಸಾಧ್ಯತೆ ಇದೆ.
ಕೆ.ಸಿ.ಚಂದ್ರಶೇಖರರಾವ್ ಅವರು ಚುನಾವಣಾ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದಾರೆ. ಮುಂದಿನ 50 ದಿನದಲ್ಲಿ ರಾಜ್ಯದಲ್ಲಿ 100 ಕ್ಕೂ ಅಧಿಕ ಸಮಾವೇಶಗಳನ್ನು ಆಯೋಜನೆ ಮಾಡಲಾಗಿದೆ.
ಕಾಂಗ್ರೆಸ್ ಓಟಕ್ಕೆ ತಡೆ
ಕೆ.ಸಿ.ಚಂದ್ರಶೇಖರರಾವ್ ಅವರು ಅವಧಿಗೂ ಮೊದಲೇ ಚುನಾವಣೆಗೆ ಹೋಗಲು ಕಾರಣ ಕಾಂಗ್ರೆಸ್. ಹೌದು ರಾಜ್ಯದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆ ಹೈದರಾಬಾದ್ಗೆ ಭೇಟಿ ನೀಡಿದ್ದರು.
ಕೆ.ಸಿ.ಚಂದ್ರಶೇಖರರಾವ್ ಅವರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದ್ದು, ಅದನ್ನು ಚುನಾವಣಾ ವಿಚಾರವನ್ನಾಗಿ ಮಾಡಿಕೊಂಡು ಜನರ ಮುಂದೆ ಹೋಗುವ ಸಾಧ್ಯತೆ ಇದೆ.