ಕೆಸಿಆರ್ಗೆ ಮುಖಭಂಗ: ತೆಲಂಗಾಣ ಉಪ ಚುನಾವಣೆಯಲ್ಲಿ ಬಾವುಟ ಹಾರಿಸಿದ ಬಿಜೆಪಿ
ಹೈದರಾಬಾದ್, ನವೆಂಬರ್ 10: ತೆಲಂಗಾಣ ವಿಧಾನಸಭೆಯ 119 ಸೀಟುಗಳಿಗೆ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ನವೆಂಬರ್ 3ರಂದು ಒಂದು ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ. ಇದು ಆಡಳಿತಾರೂಢ ಕೆ. ಚಂದ್ರಶೇಖರ್ ರಾವ್ ಅವರ ಟಿಆರ್ಎಸ್ಗೆ ತೀವ್ರ ಮುಖಭಂಗ ಉಂಟುಮಾಡಿದೆ.
ಸ್ಥಳೀಯ ಪಕ್ಷಗಳ ಪ್ರಾಬಲ್ಯವಿರುವ ತೆಲಂಗಾಣದ ದುಬ್ಬಾಕ ಕ್ಷೇತ್ರದಲ್ಲಿನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ರಘುನಂದನ ರಾವ್ ಅವರು ಟಿಆರ್ಎಸ್ ಅಭ್ಯರ್ಥಿ ಸೊಲಿಪೆಟಾ ಸುಜಾತಾ ಅವರನ್ನು ಮಣಿಸಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಿಂದಲೂ ಅಲ್ಪ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದ ರಘುನಂದನ ರಾವ್ ಅವರು ಕೊನೆಯಲ್ಲಿ 1754 ಮತಗಳಿಂದ ಸಮೀಪದ ಎದುರಾಳಿಯನ್ನು ಸೋಲಿಸಿದ್ದಾರೆ.
ಆಡಳಿತಾರೂಢ ಟಿಆರ್ಎಸ್ ಪಕ್ಷದ ಶಾಸಕರಾಗಿದ್ದ ಸೊಲಿಪೆಟಾ ರಾಮಲಿಂಗಾ ರೆಡ್ಡಿ ಅವರ ಅಕಾಲಿಕ ನಿಧನದಿಂದ ತೆರವಾದ ದುಬ್ಬಕಾ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಕ್ಷೇತ್ರಕ್ಕೆ ರಾಮಲಿಂಗಾ ರೆಡ್ಡಿ ಅವರ ಪತ್ನಿ ಸುಜಾತಾ ಅವರನ್ನೇ ಟಿಆರ್ಎಸ್ ಕಣಕ್ಕಿಳಿಸಿತ್ತು. ಮುಂದೆ ಓದಿ.
ಕಡಿಮೆ ಅಂತರದ ಸೋಲು
ಆಡಳಿತಾರೂಢ ಟಿಆರ್ಎಸ್ ಪಕ್ಷ ಅಧಿಕಾರದಲ್ಲಿ ಇರುವುದು, ಸುಜಾತಾ ಅವರ ಪರ ಅನುಕಂಪದ ಅಲೆ ಹಾಗೂ ತೆಲಂಗಾಣದಲ್ಲಿನ ಸ್ಥಳೀಯ ಪಕ್ಷಗಳ ಪ್ರಾಬಲ್ಯಗಳನ್ನು ಗಮನಿಸಿದಾಗ ಸುಜಾತಾ ಅವರು ಸುಲಭವಾಗಿ ಗೆಲ್ಲಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿಗೆ ಉತ್ತಮ ಅಂತರದ ಗೆಲುವು ಸಿಗಲಿವೆ ಎಂದು ಹೇಳಿದ್ದವು. ಆದರೆ ಕೊನೆಯವರೆಗೂ ಪೈಪೋಟಿ ನೀಡಿದ್ದ ಸುಜಾತಾ, ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ.
ಮತಗಳ ಹಂಚಿಕೆ
ಬಿಜೆಪಿ ಅಭ್ಯರ್ಥಿ 62772 ಮತಗಳನ್ನು ಪಡೆದರೆ, ಟಿಆರ್ ಎಸ್ ಅಭ್ಯರ್ಥಿ 61302 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಚೆರುಕು ಶ್ರೀನಿವಾಸ ರೆಡ್ಡಿ ಅವರು 21819 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರವಾಗಿ 39% ಮತಗಳು ಬಿದ್ದಿದ್ದರೆ, ಟಿಆರ್ಎಸ್ ಅಭ್ಯರ್ಥಿಗೆ 37% ಮತಗಳು ಲಭಿಸಿವೆ.
ಆಡಳಿತ ವಿರೋಧಿ ಅಲೆ
ಉಪ ಚುನಾವಣೆಯ ಫಲಿತಾಂಶ ಆಡಳಿತಾರೂಢ ಟಿಆರ್ಎಸ್ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದೆ ಇದ್ದರೂ, ಈ ಫಲಿತಾಂಶವನ್ನು ಮುಖ್ಯವಾಗಿ ಸಿಎಂ ಚಂದ್ರಶೇಖರ್ ರಾವ್ ಅವರ ಕುಟುಂಬಕ್ಕೆ ಉಂಟಾದ ಸೋಲು ಎಂದೇ ಪರಿಗಣಿಸಲಾಗಿದೆ. ಹಾಗೆಯೇ ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ಸಂದೇಶ ರವಾನಿಸಿದೆ. ಈ ಫಲಿತಾಂಶ ಮುಂದಿನ ಚುನಾವಣೆಗಳ ಮೇಲೆಯೂ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ.
ಕೆಸಿಆರ್ ಕುಟುಂಬದ ಪ್ರಾಬಲ್ಯ
ದುಬ್ಬಾಕ ಕ್ಷೇತ್ರವು ಗಜ್ವೆಲ್ ಕ್ಷೇತ್ರದ ಪಕ್ಕದಲ್ಲಿದೆ. ಗಜ್ವೆಲ್ ಮುಖ್ಯಮಂತ್ರಿ ಸಿ ಚಂದ್ರಶೇಖರ್ ರಾವ್ ಅವರ ಕ್ಷೇತ್ರ. ಉತ್ತರ ಭಾಗದಲ್ಲಿ ಮುಖ್ಯಮಂತ್ರಿಯ ಮಗ, ಐಟಿ ಸಚಿವ ಕೆಟಿ ರಾಮ ರಾವ್ ಅವರ ಸಿರ್ಕಿಲಾ ಕ್ಷೇತ್ರವಿದೆ. ಅದರ ಪೂರ್ವದ ಸಿದ್ದಿಪೇಟ್, ಮುಖ್ಯಮಂತ್ರಿಯ ಸೋದರಳಿಯ ಹರೀಶ್ ರಾವ್ ಅವರ ಪ್ರಾಬಲ್ಯ ಇರುವ ಕ್ಷೇತ್ರ. ಹೀಗಾಗಿ ಈ ಮೂವರಿಗೂ ದುಬ್ಬಾಕ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸುವುದು ಅನಿವಾರ್ಯವಾಗಿತ್ತು. ಆದರೆ ಬಿಜೆಪಿಯ ಗೆಲುವು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.