ಆಗ ಬಾರದ ಮಾನವ ಹಕ್ಕು ಆಯೋಗದವರು ಈಗೇಕೆ ಬರುತ್ತೀರಿ?: ದಿಶಾ ಕುಟುಂಬದ ಆಕ್ರೋಶ
ಹೈದರಾಬಾದ್, ಡಿಸೆಂಬರ್ 7: ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ನಲ್ಲಿ ಸುಟ್ಟು ಹಾಕಿರುವುದಕ್ಕೆ ದೇಶದಾದ್ಯಂತ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಇದು ನಕಲಿ ಎನ್ಕೌಂಟರ್ ಎಂದು ಮಾನವ ಹಕ್ಕುಗಳ ಆಯೋಗ ಸ್ವಪ್ರೇರಣೆಯಿಂದ ಪ್ರಕರಣದ ತನಿಖೆಗೆ ಮುಂದಾಗಿದೆ.
ಎನ್ಎಚ್ಆರ್ಸಿಯ ತಂಡ ಶನಿವಾರ ಹೈದರಾಬಾದ್ಗೆ ತೆರಳಿದ್ದು, ಎನ್ಕೌಂಟರ್ ನಡೆದ ಸ್ಥಳ, ಆರೋಪಿಗಳ ಮೃತದೇಹ ಮತ್ತು ಈ ಪ್ರಕರಣ ಕುರಿತಾದ ವರದಿಗಳನ್ನು ಪರಿಶೀಲನೆ ನಡೆಸಲಿದೆ. ಈ ಮಧ್ಯೆ ಆರೋಪಿಗಳನ್ನು ಪೊಲೀಸರು ನಕಲಿ ಎನ್ಕೌಂಟರ್ ಮಾಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ವಕೀಲರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಹೈದರಾಬಾದ್: ಎನ್ಕೌಂಟರ್ ನಕಲಿ ಎಂದಾದಲ್ಲಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ಕಟ್ಟಿಟ್ಟಬುತ್ತಿ
ಮಾನವಹಕ್ಕುಗಳ ಆಯೋಗದ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸುವವರೆಗೂ ಎನ್ಕೌಂಟರ್ಗೆ ಒಳಗಾದ ಆರೋಪಿಗಳ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುವಂತಿಲ್ಲ ಎಂದು ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಡಿ. 9ರವರೆಗೂ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗಳ ಮೃತದೇಹಗಳನ್ನು ಸಂರಕ್ಷಿಸಿ ಇರಿಸುವಂತೆ ನಿರ್ದೇಶಿಸಲಾಗಿದೆ.
ಈಗ ಏಕೆ ಬರುತ್ತೀರಿ?
ಎನ್ಎಚ್ಆರ್ಸಿ ಭೇಟಿಗೆ ಪಶುವೈದ್ಯೆ 'ದಿಶಾ' ಕುಟುಂಬದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾಗೆ ಅನ್ಯಾಯ ಆದಾಗ ಮಾನವ ಹಕ್ಕುಗಳ ಆಯೋಗದವರು ಬಂದಿರಲಿಲ್ಲ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದವರನ್ನು ಎನ್ಕೌಂಟರ್ ಮಾಡಿದಾಗ ಏಕೆ ಬರುತ್ತೀರಿ? ಕ್ರೂರ ಮೃಗಗಳಂತಹ ಕ್ರಿಮಿನಲ್ಗಳನ್ನು ಎನ್ಕೌಂಟರ್ ಮಾಡಲಾಗಿದೆ. ಅವರು ಸತ್ತರೆ ಮಾನವಹಕ್ಕುಗಳ ಉಲ್ಲಂಘನೆ ಆಗುತ್ತದೆ? ಎಂದು ದಿಶಾ ಕುಟುಂಬ ಕಿಡಿಕಾರಿದೆ ಎಂಬುದಾಗಿ ವರದಿಯಾಗಿದೆ.
ತೆಲಂಗಾಣ ಎನ್ಕೌಂಟರ್: ಡಿ.9ರವರೆಗೂ ಅಂತ್ಯಸಂಸ್ಕಾರ ಮಾಡದಂತೆ ಸೂಚನೆ
ತಂಡಕ್ಕೆ ಜನರಿಂದ ಧಿಕ್ಕಾರ
ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ ಮಾನವ ಹಕ್ಕುಗಳ ಆಯೋಗದ ಸದಸ್ಯರಿಗೆ ಹೈದರಾಬಾದ್ನಲ್ಲಿ ಮುಜುಗರದ ಸ್ವಾಗತ ದೊರಕಿತು. ವಿಮಾನ ನಿಲ್ದಾಣದ ಹೊರಗೆ ಸೇರಿದ್ದ ಜನರು ಎನ್ಎಚ್ಆರ್ಸಿ ತಂಡದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರ ಪರ ಜೈಕಾರ ಹಾಕಿದರು ಎಂದು ಮಾಧ್ಯಮ ವರದಿ ಹೇಳಿವೆ.
ಎನ್ಕೌಂಟರ್ ಕಳವಳಕಾರಿ- ಎನ್ಎಚ್ಆರ್ಸಿ
ಎನ್ಕೌಂಟರ್ ಹತ್ಯೆಯನ್ನು ಸ್ವಯಂ ಪ್ರೇರಣೆಯಿಂದ ತೆಗೆದುಕೊಳ್ಳಲಾಗಿದ್ದು, ಎಸ್ಎಸ್ಪಿ ಶ್ರೇಣಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಬಳಿಕ ಶೀಘ್ರದಲ್ಲಿಯೇ ಈ ತಂಡ ವರದಿ ಸಲ್ಲಿಸಲಿದೆ ಎಂದು ಮಾನವಹಕ್ಕುಗಳ ಆಯೋಗ ಶುಕ್ರವಾರ ತಿಳಿಸಿತ್ತು. ಎನ್ಕೌಂಟರ್ಗೆ ವಿವರಣೆ ನೀಡುವಂತೆ ತೆಲಂಗಾಣ ಪೊಲೀಸರಿಗೆ ಎನ್ಎಚ್ಆರ್ಸಿ ನೋಟಿಸ್ ನೀಡಿದೆ. ಪೊಲೀಸರ ವಶದಲ್ಲಿದ್ದಾಗಲೇ ನಾಲ್ವರು ಆರೋಪಿಗಳ ಎನ್ಕೌಂಟರ್ ನಡೆದಿರುವುದು ಕಳವಳಕಾರಿ ಸಂಗತಿ ಎಂದು ಆಯೋಗ ಹೇಳಿದೆ.
ಹೈದ್ರಾಬಾದ್ ಎನ್ ಕೌಂಟರ್ ಹಿಂದೆ ಸಾವಿರ ಸಾವಿರ ಅನುಮಾನ!
ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲು ಅರ್ಜಿ
ಈ ನಡುವೆ ತೆಲಂಗಾಣದಲ್ಲಿ ಶುಕ್ರವಾರ ಮುಂಜಾನೆ ನಡೆಸಿದ ಆರೋಪಿಗಳ ಎನ್ಕೌಂಟರ್ ನಕಲಿ. ಆರೋಪಿಗಳನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆಯೇ ಹೊರತು ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂಬುದು ಕಟ್ಟು ಕಥೆ. ಹೀಗಾಗಿ ತೆಲಂಗಾಣ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶ ನೀಡಬೇಕು ಎಂದು ಕೋರಿ ವಕೀಲರಾದ ಜಿ.ಎಸ್. ಮಣಿ ಮತ್ತು ಪ್ರದೀಪ್ ಕುಮಾರ್ ಎಂಬುವವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.