ಬಿಜೆಪಿ ಸೇರಲು ಮುಂದಾದ ತೆಲಂಗಾಣ ಕಾಂಗ್ರೆಸ್ ಶಾಸಕ
ಹೈದರಾಬಾದ್, ಜೂನ್ 17: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ತೆಲಂಗಾಣದಲ್ಲಿ ಕಾಂಗ್ರೆಸ್ ಪತನ ಆರಂಭವಾಗಿದೆ. ಒಂದು ಕಡೆ ಪಕ್ಷವನ್ನು ಪುನಃ ಕಟ್ಟಿ ಬೆಳೆಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಬೇರೆ ಪಕ್ಷಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.
ತೆಲಂಗಾಣ ಕಾಂಗ್ರೆಸ್ಸಿನ 12 ಶಾಸಕರು ಗುಂಪು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್ ) ಜತೆ ವಿಲೀನಗೊಂಡಿದ್ದು ನೆನಪಿರಬಹುದು. ಉಳಿದಿರುವ 6 ಮಂದಿ ಶಾಸಕರ ಪೈಕಿ ಮುನುಗೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಸುದ್ದಿ ಬಂದಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಶಾಕ್: 12 ಶಾಸಕರು ಟಿಆರ್ ಎಸ್ ಗೆ!
ತೆಲಂಗಾಣ ವಿಧಾನಸಭೆಯಲ್ಲಿ 19 ಮಂದಿ ಪೈಕಿ ಪಕ್ಷದ ಮುಖ್ಯಸ್ಥ ಎನ್ ಉತ್ತಮ್ ಕುಮಾರ್ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. 18 ಮಂದಿ ಶಾಸಕರ ಪೈಕಿ 12 ಮಂದಿ ಆಡಳಿತ ಪಕ್ಷ ಟಿಆರ್ ಎಸ್ ಸೇರಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷ( ಸಿಎಲ್ ಪಿ) ಕೂಡಾ ಟಿಆರ್ ಎಸ್ ಜೊತೆ ವಿಲೀನಗೊಳಿಸಲಾಗಿದೆ. ಪಕ್ಷಾಂತರ ಕಾಯ್ದೆ, ಜನಪ್ರತಿನಿಧಿಗಳ ಕಾಯ್ದೆ ಪರಿಶೀಲಿಸಿ, ಈ ವಿಲೀನಕ್ಕೆ ಸ್ಪೀಕರ್ ಪೊಚರಂ ಶ್ರೀನಿವಾಸ್ ರೆಡ್ಡಿ ಅವರು ಅನುಮತಿ ನೀಡಿದ್ದರು.
ಟಿ.ಆರ್.ಎಸ್. ವಿರುದ್ಧ ಕಾಂಗ್ರೆಸ್ ಪರಿಣಾಮಕಾರಿಯಾಗಿ ಹೋರಾಟ ನಡೆಸುವ ಶಕ್ತಿ ಹೊಂದಿಲ್ಲ ಎಂದಿರುವ ರಾಜಗೋಪಾಲ ರೆಡ್ಡಿ ಅವರು ಶೀಘ್ರವೆ ಪಕ್ಷ ತೊರೆಯುವ ಸಾಧ್ಯತೆಯಿದೆ. ರಾಜಗೋಪಾಲ ರೆಡ್ಡಿ ಬಿಜೆಪಿ ಸೇರಲು ಮುಂದಾಗಿದ್ದು, ಕಾಂಗ್ರೆಸ್ ಸದಸ್ಯರ ಸಂಖ್ಯೆ 5 ಕ್ಕೆ ಕುಸಿಯಲಿದೆ.
ರಾಜಗೋಪಲ ರೆಡ್ಡಿ ಸೇರಿದಂತೆ ತೆಲುಗು ದೇಶಂ ಪಕ್ಷದ ಮುಖಂಡರು ಕೂಡಾ ಬಿಜೆಪಿ ಸೇರಲು ಉತ್ಸುಕರಾಗಿದ್ದು, ಈ ಬಗ್ಗೆ ಶೀಘ್ರವೇ ಅಪ್ಡೇಟ್ ಸಿಗಲಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಮಾಜಿ ಗೃಹ ಸಚಿವೆ ಡಿ.ಕೆ ಅರುಣಾ ಹಾಗೂ ಎಂಎಲ್ಸಿ ಪೊಂಗುಲೇಟಿ ಸುಧಾಕರ್ ರೆಡ್ಡಿ ಅವರು ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.