ಮುಂಗಾರು ಅಧಿವೇಶನಕ್ಕೆ ಹೊರಟ ಸಂಸದ ಗೃಹ ಬಂಧನಕ್ಕೆ
ಹೈದರಾಬಾದ್, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ತೆರಳಬೇಕಿದ್ದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಅಧ್ಯಕ್ಷ, ಮಲ್ಕಾಜ್ ಗಿರಿ ಸಂಸದ ರೇವಂತ್ ರೆಡ್ಡಿ ಗೃಹ ಬಂಧನದಲ್ಲಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ಕೊಕಾಪೇಟದಲ್ಲಿ ಸರ್ಕಾರಿಜಮೀನನ್ನು ಹರಾಜು ಹಾಕುವ ಪ್ರಕ್ರಿಯೆಗೆ ತಡೆಯೊಡ್ಡಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಇದನ್ನು ಹತ್ತಿಕ್ಕಲು ರೇವಂತ್ ರೆಡ್ಡಿ ಅವರ ಮನೆಯ ಮುಂದೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ರೇವಂತ್ ರೆಡ್ಡಿ ಮನೆಯಿಂದ ಹೊರಕ್ಕೆ ಬರದಂತೆ ನೋಡಿಕೊಳ್ಳಲಾಗಿದೆ ಎಂಬ ಸುದ್ದಿ ಬಂದಿದೆ.
ಸರ್ಕಾರಿ ಜಮೀನು ಸುಮಾರು 2,000 ಕೋಟಿ ರು ಗಳಿಗೆ ಹರಾಜಾಗಿದ್ದು, ಈ ಪ್ರಕ್ರಿಯೆಯಲ್ಲಿ ಸುಮಾರು 1,000 ಕೋಟಿ ರು ಅಕ್ರಮ ನಡೆದಿದೆ ಎಂದು ಟಿಪಿಸಿಸಿ ಅಧ್ಯಕ್ಷ ರೇವಂತ್ ಆರೋಪಿಸಿದ್ದರು. ಪ್ರತಿ ಎಕರೆಗೆ 60 ಕೋಟಿ ರು ಗಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಇಡೀ ಪ್ರಕ್ರಿಯೆ ಬಗ್ಗೆ ಸಮಗ್ರ ಸಿಬಿಐನಿಂದ ತನಿಖೆ ನಡೆಸಬೇಕು, ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ದನಿಯೆತ್ತುವುದಾಗಿ ರೇವಂತ್ ರೆಡ್ಡಿ ಗುಡುಗಿದ್ದರು.
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಬೇನಾಮಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಮೈ ಹೋಂ ಗ್ರೂಪ್ ಮುಖ್ಯಸ್ಥ ರಾಮೇಶ್ವರ್ ರಾವ್ ಅವರು ಕೆಸಿಆರ್ ಆಪ್ತ ಎಂಬುದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ. ರೇವಂತ್ ರೆಡ್ಡಿ, ತೆಲಂಗಾಣ ಶಾಸಕಾಂಗ ಪಕ್ಷದ ನಾಯಕ ಭಟ್ಟಿ ವಿಕ್ರಮಾರ್ಕರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.