''ಜನನ ಪ್ರಮಾಣ ಪತ್ರ ಹೊಂದಿಲ್ಲ, ನಾನೇನು ಸಾಯಬೇಕಾ?''
ಹೈದರಾಬಾದ್, ಮಾರ್ಚ್ 8: ''ನನ್ನ ಬಳಿ ಜನನ ಪ್ರಮಾಣ ಪತ್ರ ಇಲ್ಲ, ನಾನೇನು ಸಾಯಬೇಕೇ?'' ಹೀಗೆಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಶ್ನಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಬಗ್ಗೆ ಕೆ. ಚಂದ್ರಶೇಖರ್ ರಾವ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ರೀತಿ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರವು ಸಮಾಜದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ. ಇದರ ಬದಲು ರಾಷ್ಟ್ರೀಯ ಗುರುತು ಪತ್ರವನ್ನು ಪರಿಚಯಿಸಬೇಕು ಎಂದು ಕೆಸಿಆರ್ ಸಲಹೆ ನೀಡಿದರು. ತೆಲಂಗಾಣ ವಿಧಾನ ಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ಗೊತ್ತುವಳಿ ಕುರಿತ ಚರ್ಚೆಯ ನಡುವೆ ಸಿಎಎ ಹಾಗೂ ಎನ್ ಸಿಆರ್ ಬಗ್ಗೆ ಚರ್ಚೆಗೆ ಕೆಸಿಆರ್ ನಾಂದಿ ಹಾಡಿದರು. ಅನೇಕ ಮಂದಿಗೆ ತಮ್ಮ ಪೌರತ್ವ ಸಾಬೀತುಪಡಿಸಲು ತಮ್ಮ ಹೆತ್ತವರ ಜನನ ದಾಖಲೆಗಳನ್ನು ಸಲ್ಲಿಸುವ ನಿಬಂಧನೆ ವಿಧಿಸಲಾಗಿದೆ. ಆದರೆ, ಇದರಿಂದ ಗೊಂದಲ ಇನ್ನಷ್ಟು ಹೆಚ್ಚಾಗಿದೆ ಎಂದರು.
ಮೌನ ಮುರಿದ ಸಿಎಂ, ಸಿಎಎ ವಿರುದ್ಧ ನಿರ್ಣಯ ಅಂಗೀಕಾರ ಪಕ್ಕಾ
ನನ್ನ ಬಳಿಯೂ ಜನನ ಪ್ರಾಮಣ ಪತ್ರವಿಲ್ಲ. ಈ ದೇಶದಲ್ಲಿ ನಾನು ಯಾರು ಎಂದು ಕೇಳಿದರೆ, ನಾನೇನು ಹೇಳಲಿ ? ನಾನು ಹೇಗೆ ಸಾಬೀತುಪಡಿಸಲಿ ? ನಾನು ನನ್ನ ಗ್ರಾಮದಲ್ಲಿ, ನನ್ನ ಮನೆಯಲ್ಲಿ ಜನಿಸಿದೆ. ಆಗ ಆಸ್ಪತ್ರೆ ಇರಲಿಲ್ಲ ಎಂದರು.
ಯಾರೋ ಪುರೋಹಿತರು ಜಾತಕ ಸಿದ್ಧಪಡಿಸುತ್ತಿದ್ದರು. ಅದರಲ್ಲೇ ಇರುವ ಜನನ ದಿನಾಂಕವೇ ಪ್ರಮಾಣ ಪತ್ರವೆಂದು ಪರಿಗಣಿಸಲಾಗುತ್ತಿತ್ತು. ಜಾತಕ, ನಕ್ಷತ್ರಗಳ ಈ ಪತ್ರಕ್ಕೆ ಸ್ಟ್ಯಾಂಪ್ ಕೂಡಾ ಇಲ್ಲ, ಈ ದಾಖಲೆ ಬಿಟ್ಟರೆ ನನ್ನ ಬಳಿ ಬೇರೆ ದಾಖಲೆಗಳಿಲ್ಲ. ನಾನು ಸಾಯಬೇಕೇ ? ನನ್ನ ಪ್ರಮಾಣ ಪತ್ರವೇ ಇಲ್ಲ, ಇನ್ನು ತಂದೆಯ ಜನನ ಪ್ರಮಾಣ ಪತ್ರ ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.