ಹರಕೆ ತೀರಿಸಿದ ಕೆಸಿಆರ್, ತಿಮ್ಮಪ್ಪನಿಗೆ 5.6 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆ
ತಿರುಪತಿ ತಿಮ್ಮಪ್ಪನಿಗೆ 5.6 ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸಮರ್ಪಿಸುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಮ್ಮ ಹರಕೆ ತೀರಿಸಿದ್ದಾರೆ. ಆದರೆ ಸರಕಾರದ ಹಣದಲ್ಲಿ ಹೀಗೆಲ್ಲ ಸಾನ-ಧರ್ಮ ಸರಿಯೇ ಎಂಬ ಪ್ರಶ್ನೆ ಎದ್ದಿದೆ
ಹೈದರಾಬಾದ್, ಫೆಬ್ರವರಿ 22: ಕೆ ಚಂದ್ರಶೇಖರ್ ರಾವ್-ತೆಲಂಗಾಣ ರಾಜ್ಯದ ಮುಖ್ಯಮಂತ್ರಿ. ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ 1997ರಿಂದ ಹೋರಾಟ ನಡೆಸಿ, ಅಂತೂ ಹಿಡಿದ ಛಲ ಸಾಧಿಸಿದ ಛಲದಂಕಮಲ್ಲ. ಇಂಥ ಹೋರಾಟಗಾರನಿಗೆ ದೇವರಲ್ಲಿ ಅದ್ಯಾವ ಪರಿಯ ಶ್ರದ್ಧೆ, ನಂಬಿಕೆ ಎಂಬುದು ಪದೇ ಪದೇ ಸುದ್ದಿಯಾಗುತ್ತಲೇ ಇದೆ.
ಕಳೆದ ವರ್ಷ ಏಳು ಕೋಟಿ ರುಪಾಯಿ ಖರ್ಚು ಮಾಡಿ, ಐದು ದಿನಗಳ ಕಾಲ ಆಯುತ ಚಂಡಿಕಾ ಯಾಗ ಮಾಡಿಸಿದ್ದರು ಕೆಸಿಆರ್. ಈ ಖರ್ಚಿನ ಬಗ್ಗೆ ತೆಲಂಗಾಣ ಜನರು ಸಿಟ್ಟಾಗಿದ್ದರು. ಈ ಸಲ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ತಿರುಪತಿಯ ತಿಮ್ಮಪ್ಪನಿಗೆ ಭಾರೀ ಕಾಣಿಕೆ ನೀಡಿದ್ದಾರೆ.[38 ಕೋಟಿ ವೆಚ್ಚದ ಗೃಹ ಪ್ರವೇಶ ಮಾಡಿದ ತೆಲಂಗಾಣ ಸಿಎಂ!]
ರಾಜ್ಯ ವಿಭಜನೆ ಆದ ಮೇಲೆ ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತೆಲಂಗಾಣ ಸರಕಾರದ ಪರವಾಗಿ ತಿರುಪತಿ ದೇವಾಲಯಕ್ಕೆ ಅವರು ಐದು ಕೋಟಿ ರುಪಾಯಿಗೂ ಹೆಚ್ಚಿನ ಮೊತ್ತ ಚಿನ್ನಾಭರಣಗಳನ್ನು ನೀಡಿದ್ದಾರೆ. ಈಚೆಗೆ ಅಂದರೆ ಫೆಬ್ರವರಿ 17 ಕೆಸಿಆರ್ 63ನೇ ಜನ್ಮದಿನ ಇತ್ತು. ಆ ದಿನ ತೆಲಂಗಾಣ ಅರ್ಚಕರ ಒಕ್ಕೂಟವು ಇಡೀ ರಾಜ್ಯದಲ್ಲಿರುವ 12,254 ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದೆ.
ಚಿನ್ನದ ಕಿರೀಟ, ಮೀಸೆ, ಮೂಗುತಿ
ವಾರಂಗಲ್ ನಲ್ಲಿರುವ ಭದ್ರಕಾಳಿ ದೇಗುಲಕ್ಕೆ ಕೆಸಿಆರ್ ಚಿನ್ನದ ಕಿರೀಟ ನೀಡಿದ್ದರು. ಇನ್ನು ವಾರಂಗಲ್ ನ ಕುರವಿಯಲ್ಲಿರುವ ವೀರಭದ್ರಸ್ವಾಮಿಗೆ ಚಿನ್ನದ ಮೀಸೆ ಸಮರ್ಪಿಸಲಿದ್ದಾರೆ, ಪದ್ಮಾವತಿ ದೇವಿಗೆ ಚಿನ್ನದ ಮೂಗುತಿ ಅರ್ಪಿಸಿದ್ದಾರೆ. ಅದೇ ರೀತಿ ವಿಜಯವಾಡದ ಕನಕದುರ್ಗಮ್ಮ ದೇವಿಗೂ ಮೂಗುತಿ ಅರ್ಪಿಸಿದ್ದಾರೆ. ಅಂದಹಾಗೆ ಅಜ್ಮೇರ್ ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ 2016ರಲ್ಲಿ ಚಾದರ್ ಹಾಗೂ 2.51 ಲಕ್ಷ ಕಾಣಿಕೆ ಸಮರ್ಪಿಸಿದ್ದರು.
ಅಧ್ಯಾತ್ಮ ನಗರ ನಿರ್ಮಾಣಕ್ಕೆ ಐನೂರು ಎಕರೆ ಜಾಗ
ಇನ್ನು 2015ರ ಫೆಬ್ರವರಿಯಲ್ಲಿ ಯಾದಗಿರಿಗುಟ್ಟ ದೇವಾಲಯ ಅಭಿವೃದ್ಧಿ ಪ್ರಾಧಿಕಾರವನ್ನೇ ಕೆಸಿಆರ್ ಸರಕಾರ ರಚಿಸಿದೆ. ಯಾದಗಿರಿ ಸುತ್ತ ಇರುವ ಎಂಟು ಬೆಟ್ಟಗಳನ್ನು ಅಭಿವೃದ್ಧಿ ಪಡಿಸಿ, ದೇವಾಲಯ ನಗರ ಮಾಡುವುದು ಸರಕಾರದ ಉದ್ದೇಶ. ಈನಾಡು ರಾಮೋಜಿ ಆವ್ ಅವರು ಅಧ್ಯಾತ್ಮ ನಗರವೊಂದನ್ನು (ಓಂ ಸಿಟಿ) ನಿರ್ಮಾಣ ಮಾಡಬೇಕು ಎಂದಿದ್ದು, ಅದಕ್ಕಾಗಿ 500 ಎಕರೆ ಜಾಗವನ್ನು ಕೊಡಲಾಗಿದೆ. ಅಲ್ಲಿ ಇಡೀ ದೇಶದಲ್ಲಿರುವ ದೇವಾಲಯಗಳ ಪ್ರತಿಕೃತಿ ನಿರ್ಮಿಸಿ, ಜತೆಗೆ ಚಿತ್ರಮಂದಿರಗಳ ನಿರ್ಮಾಣ ಮಾಡಿ, ಆಧ್ಯಾತ್ಮಿಕ ಸಿನಿಮಾಗಳನ್ನೇ ಪ್ರದರ್ಶಿಸಲಾಗುತ್ತದಂತೆ.
ಪ್ರತ್ಯೇಕ ತೆಲಂಗಾಣ ರಚನೆಗಾಗಿ ಹೊತ್ತಿದ್ದ ಹರಕೆ
ಪ್ರತ್ಯೇಕ ತೆಲಂಗಾಣ ರಾಜ್ಯವಾದರೆ ಇಂಥ ಕಾಣಿಕೆ ಅರ್ಪಿಸುತ್ತೇನೆ ಎಂಬ ಹರಕೆ ಹೊತ್ತಿದ್ದರಂತೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್. ಅದನ್ನು ತೀರಿಸುವ ಸಲುವಾಗಿಯೇ ಸರಕಾರದ ಹಣದಲ್ಲಿ 5.6 ಕೋಟಿ ರುಪಾಯಿ ಖರ್ಚು ಮಾಡಿ, ಚಿನ್ನದ ಒಡವೆಗಳನ್ನು ದೇವರಿಗೆ ಅರ್ಪಿಸಿದ್ದಾರೆ.
ಸ್ವಂತ ಹಣ, ಹಿತೈಷಿಗಳ ಕೊಡುಗೆ
ತಿರುಪತಿ ತಿಮ್ಮಪ್ಪನಿಗೆ ಒಡವೆ ಮಾಡಿಸುವುದಕ್ಕೆ ಒಂದು ಸಮಿತಿ ಮಾಡಿದ್ದರು ಕೆಸಿಆರ್. ಆಭರಣ ತಯಾರಿಕೆ ಬಗ್ಗೆ ಮೇಲುಸ್ತುವಾರಿ ವಹಿಸಿತ್ತು ಆ ಸಮಿತಿ. ಯಾವಾಗ ಈ ಬಗ್ಗೆ ಟೀಕೆಗಳು ಬಂದವೋ ಅವರು ಸ್ಪಷ್ಟನೆ ನೀಡಿದ್ದಾರೆ: ಸ್ವಂತ ಹಣ ಹಾಗೂ ಹಿತೈಷಿಗಳ ಕೊಡುಗೆಯಲ್ಲಿ ದೇವರಿಗೆ ಅವರು ದಾನ-ಧರ್ಮ ಮಾಡುತ್ತಿದ್ದಾರಂತೆ.
ವೈಭವೋಪೇತ ಬಂಗಲೆಗೆ ಗೃಹ ಪ್ರವೇಶ
ಕಳೆದ ನವೆಂಬರ್ ನಲ್ಲಿ ಹೈದರಾಬಾದ್ ನ ವೈಭವೋಪೇತ ಬಂಗಲೆಗೆ ಗೃಹ ಪ್ರವೇಶ ಮಾಡಿದ್ದಾರೆ ಕೆಸಿಆರ್. ಆ ಮನೆ, ಅಲ್ಲಲ್ಲ ಅರಮನೆ ಒಂಬತ್ತು ಎಕರೆ ವ್ಯಾಪ್ತಿಯಲ್ಲಿದೆ. ಇನ್ನೂರೈವತ್ತು ಮಂದಿ ಕೂತು ಸಿನಿಮಾ ನೋಡಬಹುದಾದ ಚಿತ್ರಮಂದಿರ ಇದೆ. ಕೆಲವು ಕಚೇರಿ, ಸರಕಾರದ ಹಿರಿಯ ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಕೂಡ ಇದೆ.
50 ಕೋಟಿ ರುಪಾಯಿಗೆ ಸಮೀಪ ಖರ್ಚು
ವಾಸ್ತು ಪ್ರಕಾರವೇ ನಿರ್ಮಾಣವಾಗಿರುವ ಈ ಬಂಗಲೆಗೆ ಮೊದಲು ಮೂವತ್ತೈದು ಕೋಟಿ ರುಪಾಯಿ ಖರ್ಚಾಗುವ ಅಂದಾಜಿತ್ತು. ಅಂತಿಮವಾಗಿ 50 ಕೋಟಿ ರುಪಾಯಿಗೆ ಸಮೀಪ ಖರ್ಚಾಯಿತು.