ಪ್ರಧಾನಿ ಮೋದಿ, ಬಿಜೆಪಿ ಮೇಲೆ ಯಾಕೀ ಸಿಟ್ಟು? ಭಯವೇ ಕೆಸಿಆರ್?
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಹೆಚ್ಚು ಸಾಧನೆ ಮಾಡಿದಾಗ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿಯ ಮುಖಂಡರಿಗೆ ಒಂದು ಸುತ್ತಿನ ಶಾಕ್ ಹೊಡೆದಿತ್ತು. ಇದಾದ ನಂತ ಉಪಚುನಾವಣೆಯೊಂದರ ಫಲಿತಾಂಶ.
ಕರೀಂನಗರ ಜಿಲ್ಲೆಯ ಹುಜುರಾಬಾದ್ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ TRS ಅಭ್ಯರ್ಥಿ ಬಿಜೆಪಿ ವಿರುದ್ದ ಸೋಲುಂಡಿದ್ದರು. ಇದು ಕೆಸಿಆರ್ ಅವರ ಭದ್ರಕೋಟೆಯ ಕ್ಷೇತ್ರ ಎನ್ನುವುದು ಗಮನಿಸಬೇಕಾದ ವಿಚಾರ. ಇದರ ನಂತರ ಹಲವು ಸಮೀಕ್ಷೆಗಳು ಬಿಜೆಪಿಯ ಪ್ರಾಭಲ್ಯತೆ ಹೆಚ್ಚುತ್ತಿರುವ ವರದಿಯನ್ನು ನೀಡಿದ್ದವು.
ಬಿಜೆಪಿಯ ಜುಮ್ಲಾ ಜೀವಿಗಳೇ ಧಮ್ ಬಿರಿಯಾನಿ, ಇರಾನಿ ಟೀ ಸವಿಯಲು ಮರೆಯಬೇಡಿ
ಯಾರನ್ನೂ ನಂಬದೇ ತಮ್ಮದೇ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುವ ಅಮಿತ್ ಶಾ ಅವರಿಗೆ ಕರ್ನಾಟಕದ ನಂತರ ದಕ್ಷಿಣದ ತೆಲಂಗಾಣದಲ್ಲೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಬೇಕು ಎನ್ನುವ ಛಲವೇ ಅಲ್ಲಿನ ರಾಜಕೀಯದಲ್ಲಿ ಹೊಸಹೊಸ ತಿರುವನ್ನು ಪಡೆಯುತ್ತಿರುವುದಕ್ಕೆ ಕಾರಣ.
ಕರ್ನಾಟಕದಂತೆ ತೆಲಂಗಾಣದಲ್ಲೂ ಮುಂದಿನ ವರ್ಷದ ಅಂತ್ಯದೊಳಗೆ ಚುನಾವಣೆ ನಡೆಯಬೇಕಿದೆ. ಚುನಾವಣೆಗೆ ಕೊನೆಯ ಕ್ಷಣದಲ್ಲಿ ಧುಮುಕದೇ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳುವ ಬಿಜೆಪಿಯ ವರಿಷ್ಠರ ಮುಂದಾಲೋಚನೆಯ ರಾಜಕೀಯದ ಭಾಗವೇ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ.
ಮೋದಿ ರ್ಯಾಲಿಗೆ ಪರ್ಯಾಯವಾಗಿ ಯಶವಂತ ಸಿನ್ಹಾ ರ್ಯಾಲಿ ಆಯೋಜಿಸಿದ ಕೆಸಿಆರ್
ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾದ ಮೋದಿ
ಕರ್ನಾಟಕದಲ್ಲಿ ಈಗ ಚುನಾವಣಾ ವರ್ಷ, ಅದಕ್ಕಾಗಿಯೇ ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು, ಮಠಮಾನ್ಯಗಳಿಗೆ ಸುತ್ತಾಡಿದ್ದು, ಅರಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದೆಂದು ವ್ಯಾಖ್ಯಾನಿಸಲಾಗಿತ್ತು. ಕರ್ನಾಟಕದ ಎರಡು ದಿನಗಳ ಪ್ರವಾಸಕ್ಕೆ ಮೋದಿಗೆ ಭಾರೀ ಮೈಲೇಜ್ ಕೂಡಾ ಸಿಕ್ಕಿತ್ತು. ಅದರಂತೆಯೇ, ಹೈದರಾಬಾದ್ ನಲ್ಲಿ ಪಕ್ಷದ ಕಾರ್ಯಕಾರಿಣಿ ಆಯೋಜನೆಗೊಂಡಿದ್ದು ಎನ್ನುವುದು ರಾಜಕೀಯ ವಿಶ್ಲೇಷಕರ ಅಂಬೋಣ. ಬಿಜೆಪಿಯ ಜನಪ್ರಿಯತೆ ರಾಜ್ಯದಲ್ಲಿ ಹೆಚ್ಚುತ್ತಿರುವುದು ಕೆಸಿಆರ್ ನಿದ್ದೆಗೆಡಿಸುತ್ತಿದೆ ಎಂದೂ ಸ್ಥಳೀಯ ಮಾಧ್ಯಮಗಳೂ ವರದಿ ಮಾಡಿವೆ.
ಕೆ.ಚಂದ್ರಶೇಖರ ರಾವ್ ತಾನು ಕೇಂದ್ರಕ್ಕೆ, ಮಗನಿಗೆ ರಾಜ್ಯದಲ್ಲಿ ಪಟ್ಟಾಭಿಷೇಕ
ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಸಿಎಂ ಕೆ.ಚಂದ್ರಶೇಖರ ರಾವ್ ತಾನು ಕೇಂದ್ರಕ್ಕೆ, ಮಗನಿಗೆ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡುವ ಸ್ಪಷ್ಟ ಗುರಿಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ವಿರುದ್ದ ಕಾಂಗ್ರೆಸ್ ಹೊರತಾದ ಮೂರನೇ ರಂಗ ಸ್ಥಾಪನೆಗೆ ಮಮತಾ ಬ್ಯಾನರ್ಜಿ ಜೊತೆಗೂಡಿ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ತಮ್ಮ ಎರಡೂ ಗುರಿಯೂ ನಿರ್ದಿಷ್ಟವಾದ ಯೋಜನೆಯಂತೆ ನಡೆಯದಿರುವುದು ಕೆಸಿಆರ್ ಚಿಂತೆಗೆ ಕಾರಣವಾಗುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ, ಯಾಕೆಂದರೆ, ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಈಗ ಬಲಯುತವಾಗಿ ಹೊರಹೊಮ್ಮಲು ವಿಫಲವಾಗುತ್ತಿರುವುದು.
ವೈ.ಎಸ್. ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಅವರ ಪಾದಯಾತ್ರೆ
ಕೆಸಿಆರ್ ಅವರಿಗೆ ಇರುವ ಇನ್ನೊಂದು ಚಿಂತೆಯೆಂದರೆ ಮತಬ್ಯಾಂಕುಗಳ ವಿಭಜನೆ. ಓವೈಸಿ ಪಕ್ಷ ಹಳೇ ಹೈದರಾಬಾದ್ ಮತ್ತು ರಾಜ್ಯದ ಇತರ ಕೆಲವು ಕ್ಷೇತ್ರಗಳಲ್ಲಿ ಹಿಡಿತವನ್ನು ಹೊಂದಿದೆ. ಇದರ ಜೊತೆಗೆ, ಇತರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅದು ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗುವುದು. ಮತ್ತೊಂದು ಕಡೆ, ಪಕ್ಕದ ಆಂಧ್ರ ಪ್ರದೇಶದ ಸಿಎಂ ಜಗನ್ಮೋಹನ್ ರೆಡ್ಡಿಯವರ ಸಹೋದರಿ ಮತ್ತು ವೈ.ಎಸ್. ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ಶರ್ಮಿಳಾ ಅವರ ಪಾದಯಾತ್ರೆಯ ತೆಲಂಗಾಣದಲ್ಲಿ ಹಾದು ಬರುತ್ತಿದೆ. ಪ್ರಜಾ ಪ್ರಸ್ಥಾನಂ ಹೆಸರಿನಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಎಫೆಕ್ಟ್ ಮುಂದಿನ ಚುನಾವಣೆಯ ವೇಳೆ ಯಾವ ರೀತಿಯಲ್ಲಿ ಇರಲಿದೆ ಎನ್ನುವುದು ಇನ್ನೊಂದು ಕೆಸಿಆರ್ ಅವರಿಗಿರುವ ಗೊಂದಲ.
ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಕೆಸಿಆರ್ ರೆಡ್ ಕಾರ್ಪೆಟ್ ಸ್ವಾಗತಿಸಿದ್ದು
ಜುಲೈ ಎರಡರಂದು ಪ್ರಧಾನಿ ಮೋದಿಯವರು ಹೈದರಾಬಾದಿನ ಬೇಗಂಪೇಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸತತವಾಗಿ ಮೂರನೇ ಬಾರಿಗೆ ಸಿಎಂ ಕೆಸಿಆರ್ ಶಿಷ್ಟಾಚಾರ ಪಾಲಿಸದೇ ತಪ್ಪಿಸಿಕೊಂಡಿದ್ದಾರೆ. ಇದು ಉದ್ದೇಶಪೂರ್ವಕ ಎನ್ನುವುದಕ್ಕೆ ಕಾರಣ, ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಕೆಸಿಆರ್ ರೆಡ್ ಕಾರ್ಪೆಟ್ ನೀಡಿ ಸ್ವಾಗತಿಸಿದ್ದು. ಚುನಾವಣೆಯನ್ನು ವೃತ್ತಿಪರತೆಯಿಂದ ಎದುರಿಸುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ತಮಗೆ ಪ್ರಭಲ ಪೈಪೋಟಿ ನೀಡುತ್ತದೆ ಎನ್ನುವ ಚಿಂತೆ ಕೆ.ಸಿ.ಚಂದ್ರಶೇಖರ್ ರಾವ್ ಅವರಿಗೆ ಕಾಡುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುವುದಕ್ಕೆ ಮತ್ತೆ ಕೆಸಿಆರ್ ಅವರು ಮೋದಿಯವನ್ನು ಸ್ವಾಗತಿಸದೇ ಇದ್ದದ್ದು ಉದಾಹರಣೆಯಾಗುತ್ತದೆಯಾ ಎನ್ನುವುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬಹುದು.
Recommended Video