ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಗೆ ಈಗ ತೆಲಂಗಾಣ ಸರ್ಕಾರದ ವಿರೋಧ
ಹೈದರಾಬಾದ್, ಫೆಬ್ರವರಿ 17: ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ಹಿಂಪಡೆಯಬೇಕೆಂಬ ಹಕ್ಕೊತ್ತಾಯಕ್ಕೆ ಇದೀಗ ತೆಲಂಗಾಣ ಸರ್ಕಾರ ಧ್ವನಿಗೂಡಿಸಿದೆ.
ಕೇಂದ್ರ ಸರ್ಕಾರ ವಿವಾದಿತ ಕಾಯ್ದೆಯನ್ನು ಹಿಂಪಡೆಯಬೇಕೆಂದು ತೆಲಂಗಾಣ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಮಂಡಿಸಲು ಕೂಡ ಸರ್ಕಾರ ಸಮ್ಮತಿಸಿದೆ.
ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಶಾಹಿನ್ ಬಾಗ್ ಪ್ರತಿಭಟನೆ ಭವಿಷ್ಯ ನಿರ್ಧಾರ?
ಹೀಗಾಗಿ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಧ್ವನಿಏರಿಸುತ್ತಿರುವ ರಾಜ್ಯಗಳ ಪಟ್ಟಿಗೆ ತೆಲಂಗಾಣ ಹೊಸದಾಗಿ ಸೇರ್ಪಡೆಯಾಗಿದೆ.
ರಾಜ್ಯಸಭೆಯಲ್ಲಿ ಕಾಯ್ದೆ ಪರ ನಿಂತಿದ್ದ ಟಿಆರ್ಎಸ್
ರಾಷ್ಟ್ರೀಯ ಪೌರತ್ವ ಕಾಯ್ದೆಯು ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದಾಗ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವು ಕೇಂದ್ರ ಸರ್ಕಾರದ ಪರ ನಿಂತಿತ್ತು. ದೇಶದ ಕೆಲವೆಡೆ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರೂ ಟಿಆರ್ಎಸ್ ಮೌನಕ್ಕೆ ಶರಣಾಗಿತ್ತು. ಆದರೆ ಈಗ ತೆಲಂಗಾಣದಲ್ಲಿನ ,ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಟಿಆರ್ಎಸ್ ಸಿಎಎ ವಿರುದ್ಧ ನಿರ್ಣಯಕ್ಕೆ ಮುಂದಾಗಿದೆ.
ಸಿಎಎ ವಿರುದ್ಧ ಹೋರಾಟಕ್ಕೆ ಇನ್ನಷ್ಟು ಬಲ
ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ಈಗಾಗಲೇ ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ಸೇರಿ ಎಂಟಕ್ಕೂ ಅಧಿಕ ರಾಜ್ಯಗಳು ನಿರ್ಣಯ ಮಂಡಿಸಿವೆ. ಈಗ ಹೊಸದಾಗಿ ತೆಲಂಗಾಣ ಈ ಪಟ್ಟಿಗೆ ಸೇರಿದೆ.
ರಾಜ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ ಎಂದಿದ್ದ ಕೇಂದ್ರ
ರಾಷ್ಟ್ರೀಯ ಪೌರತ್ವ ಕಾಯ್ದೆ ಅನುಷ್ಠಾನವು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ ಕೇಂದ್ರಕ್ಕೆ ಬಿಟ್ಟ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜ್ಯ ಸರ್ಕಾರಗಳು ಸಿಎಎ ಅಡ್ಡಿಪಡಿಸಲಾಗದು ಎಂದು ಈ ಹಿಂದೆ ಗೃಹಸಚಿವಾಲಯ ಹೇಳಿತ್ತು. ಹೀಗಾಗಿ ರಾಜ್ಯ ಸರ್ಕಾರದ ನಿರ್ಣಯಗಳು ಎಷ್ಟು ಪರಿಣಾಮಕಾರಿ ಎನ್ನುವ ಚರ್ಚೆ ಉದ್ಭವವಾಗಿದೆ.
ಸುಪ್ರೀಂಕೋರ್ಟ್ ಆದೇಶ ನಿರ್ಣಾಯಕ
ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದ ವಿರುದ್ಧ ಹಾಗೂ ಅದಕ್ಕೆ ಅಡ್ಡಿಪಡಿಸಲಿರುವ ರಾಜ್ಯ ಸರ್ಕಾರದ ನಿರ್ಣಯವನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಸಂಬಂಧ ಸುಪ್ರೀಂಕೋರ್ಟ್ ನೀಡುವ ಮಹತ್ವದ ಆದೇಶವು ಸಿಎಎ ಹಣೆಬರಹ ನಿರ್ಧರಿಸಲಿದೆ.