ತೆಲಂಗಾಣ: ಶಾಸಕರ ಕ್ಷೇಮಾಭಿವೃದ್ಧಿ ನಿಧಿ 5 ಕೋಟಿಗೆ ಹೆಚ್ಚಿಸಿದ ಸರ್ಕಾರ
ಹೈದರಾಬಾದ್, ಮಾರ್ಚ್ 18: ಶಾಸಕರ ಕ್ಷೇಮಾಭಿವೃದ್ಧಿ ನಿಧಿಯನ್ನು ತೆಲಂಗಾಣ ಸರ್ಕಾರವು 5 ಕೋಟಿ ರೂ.ಗೆ ಹೆಚ್ಚಿಸಿದೆ.
ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರವು ಇದಕ್ಕಾಗಿ ಬಜೆಟ್ನಲ್ಲಿ 800 ಕೋಟಿ ರೂ ಮೀಸಲಿರಿಸಿದೆ.ಹೊಸದಾಗಿ ಜಾರಿಗೆ ತಂದಿರುವ ಮುಖ್ಯಮಂತ್ರಿ ದಲಿತ ಸಬಲೀಕರಣ ಯೋಜನೆಗೆ 1 ಸಾವಿರ ಕೋಟಿ, ರೈತ ಬಂಧು ಯೋಜನೆಗೆ 14,800 ಕೋಟಿ ರೂ. ಹಾಗೂ ಎರಡು ಬೆಳೆಯ ಅವಧಿಗೆ ರೈತರಿಗೆ ಪ್ರೋತ್ಸಾಹ ಧನ ನೀಡಲು 10 ಸಾವಿರ ಕೋಟಿ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ಸಂಸದರ ಕ್ಷೇಮಾಭಿವೃದ್ಧಿಗೆ ಕೇಂದ್ರವು 5 ಕೋಟಿ ಅನುದಾನ ನೀಡುತ್ತಿರುವಂತೆ ಈ ಯೋಜನೆಯಲ್ಲಿ ಪ್ರತಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಅವರ ಕ್ಷೇತ್ರದ ಅಭಿವೃದ್ಧಿಗೆ ತಲಾ 5 ಕೋಟಿ ಅನುದಾನವನ್ನು ಚಂದ್ರಶೇಖರ್ ರಾವ್ ಸರ್ಕಾರ ತೆಗೆದಿರಿಸಿದೆ.
ಕಳೆದ ವರ್ಷದ ಬಜೆಟ್ನಲ್ಲಿ ಕ್ಷೇಮಾಭಿವೃದ್ಧಿ ನಿಧಿಗೆ 480 ಕೋಟಿ ರೂ. ಮೀಸಲಿಟ್ಟಿದ್ದ ಸರ್ಕಾರ, ಪ್ರತಿ ಶಾಸಕ ಮತ್ತು ವಿಧಾನಪರಿಷತ್ ಸದಸ್ಯರಿಗೆ ತಲಾ 3 ಕೋಟಿ ಅನುದಾನ ಹಂಚಿಕೆ ಮಾಡಿತ್ತು.
Recommended Video
ವಿವಿಧ ಅಭಿವೃದ್ಧಿ ಕೆಲಸ ಮತ್ತು ಸಾರ್ವಜನಿಕ ಹಿತಾಸಕ್ತಿಯ ಚಟುವಟಿಕೆಗಳಿಗೆ ಈ ನಿಧಿಯನ್ನು ಖರ್ಚು ಮಾಡಬೇಕಿದೆ.