ತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತು
Recommended Video
ಹೈದರಾಬಾದ್, ನವೆಂಬರ್ 30: ಜನರು ಇಷ್ಟೊಂದು ಕ್ರೂರಿಗಳಾಗುತ್ತಾರೆಯೇ? ಪ್ರಾಣಿಗಳು ಕ್ರೂರಿಗಳೆನಿಸಿಕೊಳ್ಳುವುದು ತಮಗೆ ಆಹಾರ ಬೇಕಾದಾಗ ಅಥವಾ ತಮ್ಮ ಸುರಕ್ಷತೆಗೆ ಅಪಾಯ ಎದುರಾಗುತ್ತಿದೆ ಎಂದಾದಾಗ. ಆದರೆ, ಮನುಷ್ಯನಿಗೆ ಎಲ್ಲ ಸವಲತ್ತುಗಳಿದ್ದರೂ ಆತ ಮಾನವೀಯತೆ, ಕಾನೂನು, ಸಾಮಾಜಿಕ ಪ್ರಜ್ಞೆಗಳನ್ನು ಮರೆತು ಅತಿ ಕ್ರೂರಿಯಾಗಿ ವರ್ತಿಸುತ್ತಾನೆ ಎನ್ನುವುದಕ್ಕೆ ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ ಪ್ರಕರಣ ಉದಾಹರಣೆ.
ಅತ್ಯಾಚಾರ ನಡೆಸುವ ಸಲುವಾಗಿಯೇ ಸಿದ್ಧತೆ ನಡೆಸಿಕೊಂಡು ಅದನ್ನು ವ್ಯವಸ್ಥಿತವಾಗಿ ನಡೆಸಿ, ಆಕೆಯನ್ನು ಕೊಂದು ಸುಟ್ಟು ಹಾಕುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿರಬಹುದು?
ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ ಮೊಹಮ್ಮದ್ ಆರೀಫ್ 26 ವರ್ಷದವನಾಗಿದ್ದರೆ, ಉಳಿದ ಆರೋಪಿಗಳಾದ ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂತ ಚೆನ್ನಕೇಶವುಲು ಮೂವರೂ 20 ವರ್ಷದ ಪ್ರಾಯದವರು. ಹೈದರಾಬಾದ್ನಿಂದ 160 ಕಿ.ಮೀ. ದೂರದಲ್ಲಿರುವ ನಾರಾಯಣಪೇಟೆಯವರು. ಈ ಕ್ರೂರಿಗಳು ಅಂದು ಅತ್ಯಾಚಾರ, ಕೊಲೆ ಎಲ್ಲವನ್ನೂ ಒಂದು ಗಂಟೆಯಲ್ಲಿಯೇ ಮುಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಾರ್ಕಿಂಗ್ ಮಾಡುವುದನ್ನು ನೋಡಿದ್ದರು
ಬುಧವಾರ ಸಂಜೆ 6.15ರ ವೇಳೆಗೆ ಯುವತಿಯೊಬ್ಬಳು ತನ್ನ ದ್ವಿಚಕ್ರ ವಾಹನವನ್ನು ಪಾರ್ಕಿಂಗ್ ಮಾಡುತ್ತಿದ್ದದ್ದನ್ನು ದುಷ್ಕರ್ಮಿಗಳು ನೋಡಿದ್ದರು. ಆಕೆಯ ಮೇಲೆ ಅತ್ಯಾಚಾರ ಎಸಗಲು ಆಗಲೇ ತೀರ್ಮಾನಿಸಿದ್ದರು. ಅದಕ್ಕಾಗಿ ಟೈರ್ ಪಂಕ್ಚರ್ ಮಾಡಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಪಶುವೈದ್ಯೆ ಕೆಲಸ ಮುಗಿಸಿ ಅಲ್ಲಿಗೆ ವಾಪಸ್ ಬಂದರು. ಪಂಕ್ಚರ್ ಆಗಿದ್ದನ್ನು ರಿಪೇರಿ ಮಾಡಿಸುವುದಾಗಿ ಆರೀಫ್ ಮತ್ತು ಶಿವ ಹೇಳಿದರು. ಆಕೆಯ ನಂಬಿಕೆ ಗಳಿಸಲು ಶಿವ ಗಾಡಿಯನ್ನು ತೆಗೆದುಕೊಂಡು ಹೋದ. ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದು ಯಾವ ಅಂಗಡಿಯೂ ತೆರೆದಿಲ್ಲ ಎಂದು ಹೇಳಿದ.
ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾ
ಆರೋಪಿಗಳೇ ಸ್ವಿಚ್ ಆಫ್ ಮಾಡಿದರು
ಅದಕ್ಕೂ ಮುನ್ನ ಆರೀಫ್ ಮತ್ತು ಶಿವ ಲಾರಿಯಲ್ಲಿ ಟೋಲ್ ಪ್ಲಾಜಾದ ಬಳಿ ಇಟ್ಟಿಗೆ ತುಂಬಿಸಿಕೊಂಡು ಬಂದಿದ್ದರು. ಅದನ್ನು ಇಳಿಸುವುದು ತಡವಾಗಿದ್ದರಿಂದ ಅಲ್ಲಿಯೇ ಕಾದು ಕುಳಿತಿದ್ದರು. 9.20ರ ವೇಳೆಗೆ ಪಶುವೈದ್ಯೆ ತನ್ನ ತಂಗಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿ ತಮಗೆ ಭಯವಾಗುತ್ತಿದೆ ಎಂದು ಹೇಳಿದ್ದರು. ಆರು ನಿಮಿಷ ತಂಗಿಯೊಂದಿಗೆ ಮಾತನಾಡಿದ್ದರು. ಬಳಿಕ ನಾಲ್ವರು ಸೇರಿ ಆಕೆಯನ್ನು ಸಮೀಪದ ಕಾಂಪೌಂಡ್ ಒಂದರ ಒಳಗೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು. 9.45ರ ವೇಳೆಗೆ ಆಕೆಯ ಫೋನ್ ಸ್ವಿಚ್ ಆಫ್ ಮಾಡಿದರು.
ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?
ತಂಪು ಪಾನೀಯದಲ್ಲಿ ಮದ್ಯ ಹಾಕಿ ಕುಡಿಸಿದರು
ಅತ್ಯಾಚಾರಕ್ಕೂ ಮುನ್ನ ಮದ್ಯ ಬೆರೆಸಿದ್ದ ತಂಪು ಪಾನೀಯವನ್ನು ಬಲವಂತವಾಗಿ ಆಕೆಗೆ ಕುಡಿಸಿದ್ದರು. ಶಂಷಾಬಾದ್ ಟೋಲ್ ಪ್ಲಾಜಾದ ಸಮೀಪದ ತೊಂಡುಪಲ್ಲಿ ಗ್ರಾಮದಿಂದ ಒಂದೂವರೆ ಬಾಟಲ್ ವಿಸ್ಕಿ, ಸ್ವಲ್ಪ ತಿನಿಸು ಮತ್ತು ಒಂದು ತಂಪು ಪಾನೀಯ ತಂದಿದ್ದ ಆರೋಪಿಗಳು ಮದ್ಯವನ್ನು ತಂಪು ಪಾನೀಯದೊಳಗೆ ಬೆರೆಸಿದ್ದರು. ಅಪರಾಧ ಎಸಗುವುದಕ್ಕೂ ಮುನ್ನ ಎಲ್ಲರೂ ಮದ್ಯ ಸೇವಿಸಿದ್ದರು. ಬಳಿಕ ವೈದ್ಯೆಗೂ ಬಲವಂತವಾಗಿ ಕುಡಿಸಿ ಅತ್ಯಾಚಾರ ಎಸಗಿದ್ದರು.
ಪಶುವೈದ್ಯೆ ಅತ್ಯಾಚಾರ, ಕೊಲೆ: 24 ಗಂಟೆಯಲ್ಲೇ ದುಷ್ಕರ್ಮಿಗಳ ಬಂಧನ
ಬಾಯಿ ಮೂಗು ಒತ್ತಿಹಿಡಿದು ಸಾಯಿಸಿದರು
ಆಕೆ ಕಿರುಚದಂತೆ ತಡೆಯಲು ಬಾಯಿ ಮತ್ತು ಮೂಗನ್ನು ಬಲವಾಗಿ ಒತ್ತಿಹಿಡಿದಿದ್ದರಿಂದ ಉಸಿರಾಡುಲು ಸಾಧ್ಯವಾಗದೆ 10.20ರ ಸಮಯಕ್ಕೆ ಆಕೆ ಮೃತಪಟ್ಟಿದ್ದರು. ಆಕೆಯ ಮೃತದೇಹವನ್ನು ತಮ್ಮ ವಾಹನದಲ್ಲಿ ಹಾಕಿದರು. ರಾತ್ರಿ 10.28ಕ್ಕೆ ಆ ಜಾಗದಿಂದ ಹೊರಟರು. ಆರೀಫ್ ಮತ್ತು ನವೀನ್ ದ್ವಿಚಕ್ರವಾಹನದ ನಂಬರ್ ಪ್ಲೇಟ್ ಕಿತ್ತುಹಾಕಿ ಅದನ್ನು ಕೊತ್ತೂರು ಗ್ರಾಮದ ಬಳಿ ಪೊದೆಯೊಂದರಲ್ಲಿ ಎಸೆದರು. ಇನ್ನಿಬ್ಬರು ಲಾರಿಯಲ್ಲಿ ತೆರಳಿದರು. 1 ಗಂಟೆ ಸುಮಾರಿಗೆ ಒಂದೆರಡು ಕಡೆ ಪೆಟ್ರೋಲ್ ಖರೀದಿ ಮಾಡಲು ಪ್ರಯತ್ನಿಸಿದರು. ಕೊನೆಗೆ 2.30ರ ವೇಳೆಗೆ ದೇಹವನ್ನು ಚಟ್ಟನಪಲ್ಲಿಯ ಕೆಳಸೇತುವೆ ಅಡಿ ಬೆಡ್ಶೀಟ್ನಲ್ಲಿ ಸುತ್ತಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು.
ಪಶುವೈದ್ಯೆ ಅತ್ಯಾಚಾರ: ಸಚಿವರ ಆಘಾತಕಾರಿ ಹೇಳಿಕೆ, ಪೊಲೀಸರ ವಿರುದ್ಧ ಕುಟುಂಬದ ಆರೋಪ
ಲಾರಿ ಮಾಲೀಕರಿಂದ ಆರೋಪಿಗಳ ಪತ್ತೆ
ನಂತರ ನಗರಕ್ಕೆ ವಾಪಸ್ ಬಂದು ಅಟ್ಟಪುರದಲ್ಲಿ ಇಟ್ಟಿಗೆಗಳನ್ನು ಇಳಿಸಿದರು. ನಂತರ ಪ್ರಮುಖ ಆರೋಪಿ ಆರೀಫ್, ಇತರೆ ಆರೋಪಿಗಳನ್ನು ಅರಾಮ್ಘರ್ ಎಕ್ಸ್ ರಸ್ತೆಯ ಬಳಿ ಇಳಿಸಿ ನಾರಾಯಣಪೇಟೆಯ ತನ್ನ ಮನೆಗೆ ಹಿಂದಿರುಗಿದ್ದ. ತನಿಖೆ ವೇಳೆ ಟೋಲ್ ಪ್ಲಾಜಾದ ಸಿಬ್ಬಂದಿ ಟೋಲ್ ಪ್ಲಾಜಾದ ಹತ್ತಿರ ಇರುವ ತೆರೆದ ಪ್ರದೇಶದಲ್ಲಿ ಲಾರಿಯೊಂದು ನಿಲ್ಲಿಸಿದ್ದನ್ನು ಪೊಲೀಸರಿಗೆ ತಿಳಿಸಿದರು. ಅದರ ಆಧಾರದಲ್ಲಿ ಪೊಲೀಸರು ರಾಜೇಂದ್ರನಗರದ ನಿವಾಸಿ, ಲಾರಿ ಮಾಲೀಕ ಶ್ರೀನಿವಾಸ ರೆಡ್ಡಿ ಅವರನ್ನು ಪ್ರಶ್ನಿಸಿದರು. ಅವರ ಮೂಲಕ ಆರೀಫ್ ಮತ್ತು ಶಿವನ ಬಗ್ಗೆ ಮಾಹಿತಿ ದೊರಕಿತು.
ಹೈದರಾಬಾದಿನಲ್ಲಿ ಕಮರಿಹೋದ ಮತ್ತೊಬ್ಬ ನಿರ್ಭಯಾ! ಮುಂದಿನ ಬೇಟೆ ಯಾರು..?
ವಾಹನಕ್ಕೆ ಲಾರಿ ಅಡ್ಡ ನಿಲ್ಲಿಸಿದ್ದರು
ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಚಾಲಕ ಆರೀಫ್ ಮತ್ತು ಮೂವರು ಕ್ಲೀನರ್ಗಳನ್ನು ಅವರ ಮನೆಗಳಿಂದಲೇ ಬಂಧಿಸಲಾಯಿತು. ಆರೋಪಿಗಳು ಮುಖ್ಯರಸ್ತೆ ಮತ್ತು ಟೋಲ್ ಪ್ಲಾಜಾಕ್ಕೆ ಅಲ್ಲಿನ ಘಟನೆ ನೇರವಾಗಿ ಕಾಣದಂತೆ ತಡೆಯಲು ವೈದ್ಯೆ ದ್ವಿಚಕ್ರ ನಿಲ್ಲಿಸಿದ್ದ ಜಾಗಕ್ಕೆ ಅಡ್ಡಲಾಗಿ ಲಾರಿಯನ್ನು ನಿಲ್ಲಿಸಿದ್ದರು. ಈ ನಾಲ್ವರೂ ಆರೋಪಿಗಳು ಶಾಲೆ ಬಿಟ್ಟವರಾಗಿದ್ದು, ಬಾಲ್ಯದಿಂದಲೂ ಸ್ನೇಹಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯೆ ಅತ್ಯಾಚಾರ: ಆರೋಪಿಗಳ ಪರವಾಗಿ ವಾದಿಸದಿರಲು ವಕೀಲರ ನಿರ್ಧಾರ
ನ್ಯಾಯಾಂಗ ಬಂಧನಕ್ಕೆ ಆರೋಪಿಗಳು
ಆರೋಪಿಗಳನ್ನು ತೆಲಂಗಾಣದ ಶಡ್ನಗರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಶನಿವಾರ ಹಾಜರುಪಡಿಸಲಾಗಿತ್ತು. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಧೀಶರು ಲಭ್ಯವಿಲ್ಲದ ಕಾರಣ ಆರೋಪಿಗಳನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ಮಂಡಲ್ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ (ಎಂಆರ್ಓ) ಶಡ್ನಗರ್ ಪೊಲೀಸ್ ಠಾಣೆಯಲ್ಲಿ ನ್ಯಾಯಾಂಗ ಬಂಧನದ ಆದೇಶ ನೀಡಿದರು.
ಪಶುವೈದ್ಯೆ ಅತ್ಯಾಚಾರ: ಸಚಿವರ ಆಘಾತಕಾರಿ ಹೇಳಿಕೆ, ಪೊಲೀಸರ ವಿರುದ್ಧ ಕುಟುಂಬದ ಆರೋಪ
ಇದು ಠಾಣೆಯ ಹೊರಗೆ ನಿಂತಿದ್ದ ಜನರಲ್ಲಿ ತೀವ್ರ ಆಕ್ರೋಶ ಉಂಟುಮಾಡಿತು. ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು ಎಂದು ಜನರು ಆಗ್ರಹಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ನಮಗೆ ನ್ಯಾಯಬೇಕು ಎಂಬ ಘೋಷಣೆ ಕೂಗಿದರು. ಕೊನೆಗೆ ಜನರನ್ನು ಚೆದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.