ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಟಿಸಿಎಸ್ ಟೆಕ್ಕಿ ಆತ್ಮಹತ್ಯೆಗೆ ಶರಣು
ಹೈದರಾಬಾದ್, ಫೆಬ್ರವರಿ 22: ಕೊವಿಡ್ 19 ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್ ವೇರ್ ಇಂಜಿನಿಯರ್ ಸಾಲಗಾರರ ಕಾಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಟೆಕ್ಕಿಯನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಟೆಕ್ಕಿ ನರಸೆಟ್ಟಿ ಬಾಲ ಶ್ರೀಧರ್ (44) ಎಂದು ಗುರುತಿಸಲಾಗಿದೆ.
ಪತ್ನಿ ಪದ್ಮ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಶ್ರೀಧರ್ ಅವರು ಅಮೀರ್ ಪೇಟ್ ನ ಸಿದ್ಧಾರ್ಥ ನಗರದ ಪಲ್ಲವಿ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದರು.
ಶ್ರೀಧರ್ ಅವರ ಪತ್ನಿ ಪದ್ಮ ಹಾಗೂ ಮಕ್ಕಳು ಸಮೀಪದ ಸೂಪರ್ ಮಾರ್ಕೆಟಿಗೆ ದಿನಸಿ ತರಲು ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಗೆ ಹಿಂತಿರುಗಿದ ಪದ್ಮ ಅವರಿಗೆ ಪತಿ ಶ್ರೀಧರ್ ಬೆಡರೂಮಿನ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಗಾಬರಿಗೊಂಡ ಪದ್ಮ ತಕ್ಷಣವೇ ಅವರ ಸೋದರ ಸುಧೀರ್ ಕುಮಾರ್ ಎಂಬುವರಿಗೆ ಕರೆ ಮಾಡಿದ್ದಾರೆ.
ಸುಧೀರ್ ಅವರು ಮನೆಗೆ ಬಂದು ನೋಡಿದಾಗ ಪದ್ಮ ಕೂಡಾ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪದ್ಮ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಆರು ತಿಂಗಳ ಹಿಂದೆಯೆ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದರು. ಸುಮಾರು 40 ಲಕ್ಷ ರುಗೂ ಅಧಿಕ ಸಾಲ ಮಾಡಿಕೊಂಡಿದ್ದರು. ಸಾಲ ಹಿಂತಿರುಗಿಸಲು ಆಗದ ಕಾರಣ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಸುಧೀರ್ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಲಭ್ಯವಾಗಿಲ್ಲ. ಸಿ ಆರ್ ಪಿ ಸಿ ಸೆಕ್ಷನ್ 174 ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಅಮೀರ್ ಪೇಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.